ಸಂಪುಟ ನರಸಿಂಹ ಮಠದ ವಿರುದ್ಧ ಕೇಳಿಬಂತು ಮತ್ತೊಂದು ಆರೋಪ
ಮಂಗಳೂರು, ನವೆಂಬರ್. 30:ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಕ್ಷೇತ್ರದಲ್ಲಿ ನಡೆಯುತ್ತಿರುವ ಪೂಜಾ ವಿಧಿ ವಿಧಾನದಿಂದ ಆರಂಭಗೊಂಡಿದ್ದ ಈ ವಿವಾದ ನಂತರ ದೇವಾಲಯದ ಫೋಟೋ, ಉತ್ಸವ ಮೂರ್ತಿ ಸೇರಿದಂತೆ ಇನ್ನಿತರ ಫೋಟೋಗಳನ್ನು ಸಂಪುಟ ನರಸಿಂಹ ಮಠದ ವೆಬ್ ಸೈಟ್ ನಲ್ಲಿ ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ದೇವಾಲಯದ ಆಡಳಿತ ಮಂಡಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
ಇದೀಗ ಮಠದ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದ ಪಹಣಿ ಪತ್ರದಲ್ಲಿ ತಿದ್ದುಪಡಿ ಮಾಡಿದ ಆರೋಪ ಇದೀಗ ಮಠದ ಮೇಲಿದೆ.

ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದ ವಿಸ್ತೀರ್ಣ 1.33 ಎಕರೆಯಾಗಿದ್ದು, ಸುಬ್ರಹ್ಮಣ್ಯ ಗ್ರಾಮದ ಸರ್ವೆ ನಂಬರ್ 82/1 ರಲ್ಲಿ ಈ ಭೂಮಿಯಿದೆ. ದಾಖಲೆ ಪ್ರಕಾರ ಕಲಂ 9 ರಲ್ಲಿ ಸ್ವಾಧೀನದ ಹೆಸರು ಸರಕಾರ ಎಂದಿದ್ದು, ಕಲಂ 11 ರಲ್ಲಿ ಪೋರಂ ದೇವಸ್ಥಾನ ಎಂದಿದೆ.
ಆದರೆ ಇದೀಗ ಮಠದ ವತಿಯಿಂದ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ರಿಟ್ ಪಿಟಿಷನ್ ನಲ್ಲಿ ಈ ದಾಖಲೆಯನ್ನು ತಿದ್ದಿರುವ ಅಂಶ ದೇವಸ್ಥಾನದ ಗಮನಕ್ಕೆ ಬಂದಿದೆ.

ದೇವಸ್ಥಾನದ ಒಳಾಂಗಣದಲ್ಲಿರುವ ಈ ಜಾಗವನ್ನು ಇದೀಗ ಸುಬ್ರಾಯ ದೇವಸ್ಥಾನ, ನರಸಿಂಹ ಮಠ, ಉಮಾಮಹೇಶ್ವರಿ, ಕಾಳಿ ಹೀಗೆ ವಿಂಗಡಿಸಿ ಬದಲಾಯಿಸಲಾಗಿದೆ. ಸುಳ್ಯ ತಹಶೀಲ್ದಾರ್ ಮೂಲಕವೇ ಈ ತಿದ್ದುಪಡಿ ನಡೆದಿದ್ದು, ಜಾಗದ ವಾರಸುದಾರರಾದ ಸುಬ್ರಹ್ಮಣ್ಯ ದೇವಸ್ಥಾನದ ಗಮನಕ್ಕೆ ತರದೇ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದ ಆರೋಪಿಸಲಾಗಿದೆ.
ಈ ಸಂಬಂಧ ಸಂಪುಟ ನರಸಿಂಹ ಮಠದ ವಿರುದ್ಧ ಪಹಣಿ ಪತ್ರದಲ್ಲಿ ತಿದ್ದುಪಡಿ ಮಾಡಿದ ಆರೋಪವನ್ನು ಹೊರಿಸಲಾಗಿದೆ. ಈ ಕುರಿತು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧಾರ್ಮಿಕ ದತ್ತಿ ಇಲಾಖೆಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.












Click it and Unblock the Notifications