ಅಕ್ಷತಾ ಕೊಲೆ ಆರೋಪಿ ಕಾರ್ತಿಕ್ ನಮ್ಮವನಲ್ಲ: ಎಬಿವಿಪಿ ಸ್ಪಷ್ಟನೆ
ಮಂಗಳೂರು, ಫೆಬ್ರವರಿ 24: ಸುಳ್ಯದಲ್ಲಿ ಇತ್ತೀಚೆಗೆ ನಡೆದ ಕಾಲೇಜು ವಿದ್ಯಾರ್ಥಿನಿ ಅಕ್ಷತಾಳ ಕೊಲೆ ಪ್ರಕರಣವನ್ನು ಕೆಲವರು ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ. "ಅಕ್ಷತಾ ಕೊಲೆ ಆರೋಪಿ ಕಾರ್ತಿಕ್ ತಮ್ಮ ಕಾರ್ಯಕರ್ತನಲ್ಲ ಎಂದು ಎಬಿವಿಪಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಈ ಕುರಿತು ಸುಳ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಬಿವಿಪಿ ವೃತ್ತಿ ಶಿಕ್ಷಣ ಪ್ರಮುಖ ನಿಕೇಶ್ ಉಬರಡ್ಕ, "ಘಟನೆ ಬಳಿಕ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಕಾರ್ತಿಕ್ ಎಬಿವಿಪಿ ಕಾರ್ಯಕರ್ತ ಎಂದು ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ," ಎಂದು ಹೇಳಿದರು.
ಸುಳ್ಯ : ಭಗ್ನ ಪ್ರೇಮಿಯಿಂದ ಕಾಲೇಜು ವಿದ್ಯಾರ್ಥಿನಿ ಭೀಕರ ಹತ್ಯೆ
ಅಕ್ಷತಾಳ ಕೊಲೆ ಮಾಡಿರುವ ಕಾರ್ತಿಕ್ ನದ್ದು ನೀಚ ಕೃತ್ಯ ಎಂದು ಕಿಡಿಕಾರಿದ ಅವರು, "ಅಕ್ಷತಾಳ ಬರ್ಬರ ಹತ್ಯೆ ವಿದ್ಯಾರ್ಥಿ ಸಮೂಹದಲ್ಲಿ ಆತಂಕ ಸೃಷ್ಟಿಸಿದೆ," ಎಂದು ತಿಳಿಸಿದರು .
"ಘಟನೆ ಬಳಿಕ ಎಬಿವಿಪಿ ಕಾರ್ಯಕರ್ತರು ಆಸ್ಪತೆಗೆ ತೆರಳಿ ಆಕೆಯ ಶವದ ಮಹಜರು ವೇಳೆ ಸಾಕ್ಷಿ ಕೂಡ ನೀಡಿದ್ದಾರೆ," ಎಂದು ಹೇಳಿದ ಅವರು ಈ ಪ್ರಕರಣದಲ್ಲಿ ಪೊಲೀಸರ ತನಿಖೆಗೂ ಎಬಿವಿಪಿ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಅಕ್ಷತಾಳನ್ನು ಕೊಲೆಗೈದ ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ ಅವರು, "ಅಕ್ಷತಾಳನ್ನು ಕೊಲೆಗೈದ ಕಾರ್ತಿಕ್ ಇದುವರೆಗೆ ಎಬಿವಿಪಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ. ಅಭ್ಯಾಸ ವರ್ಗದಲ್ಲೂ ಭಾಗಿಯಾಗಿಲ್ಲ. ಯಾವುದೇ ಜವಾಬ್ದಾರಿ ಹೊಂದಿಲ್ಲ. ಆದರೂ ಕೆಲವರು ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕೆಗಳಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡಿ ರಾಜಕೀಯ ಮಾಡುತ್ತಿರುವುದು ಖಂಡನೀಯ." ಎಂದು ಹೇಳಿದರು.