ರಾಹುಲ್ ಗಾಂಧಿ ಮಂಗಳೂರು ಭೇಟಿಗೆ ಬಿಗಿ ಭದ್ರತೆ
ಮಂಗಳೂರು, ಏಪ್ರಿಲ್ 4: ಅಮೇಠಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗಿಳಿದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಪಕ್ಷದ ಅಭ್ಯರ್ಥಿಗಳ ಮತಯಾಚನೆಗೆ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅದಕ್ಕೂ ಮುನ್ನ ಬಳ್ಳಾರಿಗೂ ಭೇಟಿ ನೀಡಲಿದ್ದಾರೆ. ಏ. 7ರಂದು ಪುನಃ ರಾಹುಲ್ ಕರ್ನಾಟಕಕ್ಕೆ ಆಗಮಿಸಲಿದ್ದು ಚಿಕ್ಕೋಡಿ, ರಾಯಚೂರು, ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.
ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ಅವರು ಇಂದು ಶುಕ್ರವಾರ ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು, ಮುಖ್ಯವಾಗಿ ಸಂಚಾರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆರ್ ಹಿತೇಂದ್ರ ಅವರು ತಿಳಿಸಿದ್ದಾರೆ.
ಮೋಟಾರು ವಾಹನ ಕಾಯಿದೆಯಡಿ ವಿವಿಐಪಿ ಕಾರ್ಯಕ್ರಮ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಸಂಚಾರ ನಿಯಂತ್ರಣ ಕ್ರಮಗಳನ್ನು ಚಾಲೂಗೊಳಿಸಲಾಗಿದ್ದು, ಸಾರ್ವಜನಿಕರು ಅನುಸರಿಸಿಕೊಂಡು ಹೋಗಬೇಕಾಗಿ ಆಯುಕ್ತ ಹಿತೇಂದ್ರ ಅವರು ಮನವಿ ಮಾಡಿದ್ದಾರೆ.
ಶುಕ್ರವಾರ ಮಧ್ಯಾಹ್ನದಿಂದ ಸಂಚಾರ ಮಾರ್ಗಗಳನ್ನು ಬದಲಿಸಲಾಗುವುದು. ಅದು ರಾತ್ರಿ ವೇಳೆಗೆ ರಾಹುಲ್ ಅವರು ಮಂಗಳೂರಿನಿಂದ ವಾಪಸಾಗುವವರೆಗೂ ಚಾಲೂ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಹುಲ್ ಭಾಷಣ ಮಾಡಲಿರುವ ನೆಹರೂ ಮೈದಾನ ಮತ್ತು ಸರ್ಕ್ಯೂಟ್ ಹೌಸ್ ಸುತ್ತಮುತ್ತ ಯಾವುದೇ ವಾಹನವನ್ನು ಪಾರ್ಕ್ ಮಾಡುವಂತಿಲ್ಲ. ಬಗಿ ಭದ್ರತೆಯ ದೃಷ್ಟಿಯಿಂದ ಸಂಚಾರ ಮಾರ್ಗ ಬದಲಾಯಿಸಿದ್ದರೂ ವಾಹನ ಸವಾರರು ನಗರದಲ್ಲಿ ಒಳ ಮಾರ್ಗಗಳನ್ನು ಬಳಸುವಂತಿಲ್ಲ.
ರಾಹುಲ್ ಅವರನ್ನು ಕರೆತರುವ ವಾಹನ/ ಬೆಂಗಾವಲು ಪಡೆ, ಪೊಲೀಸ್ ಮತ್ತು ತುರ್ತು ಸೇವಾ ವಾಹನಗಳು ಮಾತ್ರವಷ್ಟೇ ಈ ಭಾಗದಲ್ಲಿ ಮುಕ್ತವಾಗಿ ಸಂಚರಿಸಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]
ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರಿಗೆ ದೈಹಿಕ ಕಿರುಕುಳ ನೀಡಿರುವ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಆಯುಕ್ತ ಹಿತೇಂದ್ರ ಅವರು ಐದು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿ, ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಅವರಲ್ಲೊಬ್ಬ ಅಪ್ರಾಪ್ತ ವಯಸ್ಕನಾಗಿದ್ದು, ಕೊಲೆ ಮುಂತಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯವನಾಗಿದ್ದಾನೆ ಎಂದು ತಿಳಿಸಿದ್ದಾರೆ.