ಈವರೆಗೆ ಎಚ್1ಎನ್1 ಗೆ ದಕ್ಷಿಣ ಕನ್ನಡದಲ್ಲಿ 4 ಬಲಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿದ್ದು ಹೀಗೆ...
ಮಂಗಳೂರು, ಅಕ್ಠೋಬರ್ 17: ಶಂಕಿತ ಎಚ್1 ಎನ್1 ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯ 4 ಮಂದಿ ಬಲಿಯಾಗಿರುವ ಆತಂಕಕಾರಿ ವಿಷಯ ಹೊರಬಿದ್ದಿದೆ. ಎಚ್1 ಎನ್1 ಸೋಂಕು ಬಾಧಿತರೆಂದು ಹೇಳಲಾಗಿರುವ 359 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಆ ಪೈಕಿ 29 ಮಂದಿಯಲ್ಲಿ ಸೋಂಕಿರುವ ಅಂಶ ಕಂಡು ಬಂದಿದೆ.
ಬಂಟ್ವಾಳದ ಸಜಿಪನಾಡು ಎಂಬಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಝರೀನಾ (22) ಮಂಗಳವಾರ (ಅ.16) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಝಬೀನಾ ಅವರ ತಾಯಿ ಅವ್ವಮ್ಮ(44) ಅಕ್ಟೋಬರ್ 10 ರಂದು ಕೊನೆಯುಸಿರೆಳೆದಿದ್ದರು.
ಈ ನಡುವೆ ಮಂಗಳೂರು ಹೊರವಲಯದ ವಾಮಂಜೂರು ಮಲ್ಲೂರು ನಿವಾಸಿ ಅಬ್ದುಲ್ಲ (50) ಅಕಗಟೋಬರ್ 3 ರಂದು ಮತ್ತು ಉಳ್ಳಾಲ ಹಳೆಕೋಟೆ ನಿವಾಸಿ ಜಮೀಲಾ (38) ಅಕ್ಟೋಬರ್ 8ರಂದು ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ. ರಾಮಕೃಷ್ಣರಾವ್ ಶಂಕಿತ ಎಚ್1 ಎನ್1 ಗೆ ಬಲಿಯಾಗಿದ್ದಾರೆ ಎಂದು ಗುರುತಿಸಲಾಗಿರುವ ನಾಲ್ವರ ಪ್ರಕರಣದ ಬಗ್ಗೆ ಸರಕಾರದ ನಿಯಮಾವಳಿಯಂತೆ ತಜ್ಞ ವೈದ್ಯರು ಮರಣ ಲೆಕ್ಕ ಪರಿಶೀಲನಾ ಸಮಿತಿ ವರದಿಯ ಬಳಿಕ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ಮುಂದೆ ಓದಿ..

29 ಎಚ್1 ಎನ್1 ಪ್ರಕರಣ ಬೆಳಕಿಗೆ
ಈ ವರ್ಷ ಜನವರಿಯಿಂದ ಆಗಸ್ಟ್ ವರೆಗೆ 3, ಸೆಪ್ಟೆಂಬರ್ ನಲ್ಲಿ 12 ಹಾಗೂ ಅಕ್ಟೋಬರ್ 15ರವರೆಗೆ 14 ಪ್ರಕರಣ ಸಹಿತ ಒಟ್ಟು 29 ಎಚ್1 ಎನ್1ಪ್ರಕರಣ ಬೆಳಕಿಗೆ ಬಂದಿದೆ. ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಮಂಗಳೂರಿನಲ್ಲಿ 260, ಬಂಟ್ವಾಳದಲ್ಲಿ 37, ಪುತ್ತೂರಿನಲ್ಲಿ 22, ಬೆಳ್ತಂಗಡಿಯಲ್ಲಿ 34, ಸುಳ್ಯದಲ್ಲಿ 6 ಮಂದಿಯನ್ನು ಶಂಕಿತ ಎಚ್1 ಎನ್1 ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಆ ಪೈಕಿ ಮಂಗಳೂರಿನಲ್ಲಿ ಅತ್ಯಧಿಕ ಅಂದರೆ 26, ಬಂಟ್ವಾಳದಲ್ಲಿ 2, ಪುತ್ತೂರಿನ ಓರ್ವರಲ್ಲಿ ಶಂಕಿತ ಎಚ್1 ಎನ್1 ಸೋಂಕು ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು.

ಜೀವಹಾನಿ ಸಂಭವಿಸಿಲ್ಲ
ಸೋಂಕು ಕಾಣಿಸಿಕೊಂಡವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಅವರಲ್ಲಿ 23 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿಯಲ್ಲೂ 21 ಎಚ್1ಎನ್1 ಪ್ರಕರಣಗಳು ಕಂಡುಬಂದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಡಾ.ರಾಮಕೃಷ್ಣ ರಾವ್ ಹೇಳುವುದು ಹೀಗೆ ..
ಇತ್ತೀಚೆಗೆ ಬಿಟ್ಟುಬಿಟ್ಟು ಸುರಿಯುವ ಮಳೆ, ತಂಪು ಹವೆಯಂತಹ ವಾತಾವರಣ ಸಹಜವಾಗಿಯೇ ಸಾಂಕ್ರಾಮಿಕ ರೋಗಗಳಿಗೆ ಅವಕಾಶ ಒದಗಿಸುತ್ತದೆ. ನಿರಂತರ ಮಳೆ ಸುರಿಯುವ ಸಂದರ್ಭ ಇದರ ವೈರಸ್ ಬೆಳೆಯಲು ಸಾಧ್ಯವಾಗುವುದಿಲ್ಲ. ಅಧಿಕ ತಾಪಮಾನದಲ್ಲಿ ವೈರಸ್ ಬದುಕುವುದಿಲ್ಲ ಎಂದು ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ವಹಿಸಲು ಸೂಚನೆ
ಶೀತ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ತಲೆನೋವು, ಮೈ ಕೈ ನೋವು, ಚಳಿ ಮತ್ತು ಸುಸ್ತು ಇತ್ಯಾದಿ ಎಚ್1 ಎನ್1 ಸೋಂಕಿನ ಲಕ್ಷಣಗಳಾಗಿವೆ. ಆರೋಗ್ಯವಂತ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರಿಂದ ಈ ಜ್ವರ ಕಾಣಿಸಿಕೊಂಡರೂ ಮಾರಣಾಂತಿಕವಲ್ಲ.
ಆದಾಗ್ಯೂ ಜ್ವರವನ್ನು ನಿರ್ಲಕ್ಷಿಸದೆ ತಕ್ಷಣ ಯಾವ ಜ್ವರವೆಂದು ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಸಣ್ಣ ಮಕ್ಕಳು, 60 ವರ್ಷ ದಾಟಿದವರು, ಕಿಡ್ನಿ, ಮಧುಮೇಹ, ಹೃದಯ, ರಕ್ತನಾಳ ಸಂಬಂಧಿ ಕಾಯಿಲೆ ಇರುವವರು, ಅಸ್ತಮಾ, ಟಿಬಿಯಿಂದ ಬಳಲುತ್ತಿರುವವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications