ಮೂರು ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ
ಮಂಗಳೂರು, ಆ.8 : ಮಂಗಳೂರಿನಲ್ಲಿ ಬೀದಿನಾಯಿಗಳು ಮೂರು ವರ್ಷದ ಬಾಲಕನನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ. ನಾಯಿಗಳ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಕುದ್ರೋಳಿಯ ಮೊದಿನ್ ನಗರದಲ್ಲಿ ಗುರುವಾರ ಆಟ ವಾಡುತ್ತಿದ್ದ ಇಮ್ತಿಯಾಜ್ ಅವರ ಪುತ್ರ ಮೊಹಮ್ಮದ್ ಇಸಾಂ (3) ಮೇಲೆ 2-3 ಬೀದಿನಾಯಿಗಳು ದಾಳಿ ನಡೆಸಿವೆ. ನಾಯಿಗಳು ಬಾಲಕನ ತಲೆ ಸೇರಿದಂತೆ ದೇಹದ ಹಲವೆಡೆ ಕಚ್ಚಿ ಗಾಯಗೊಳಿಸಿವೆ.

ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಇಸಾಂನನ್ನು ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ನಾಯಿಗಳು ದಾಳಿ ಮಾಡಿದಾಗ ಬಾಲಕನ ಆಕ್ರಂದನ ಕೇಳಿದ ಸ್ಥಳೀಯರು ಓಡಿ ಬಂದಿ ನಾಯಿಗಳಿಂದ ಬಾಲಕನನ್ನು ಕಾಪಾಡಿದ್ದಾರೆ. [ಮೈಸೂರಿನಲ್ಲಿ ಕಂಡ ಭಾರತದ ದುಬಾರಿ ಶ್ವಾನ]
ಘಟನೆ ನಡೆಯುವ ಸಂದರ್ಭದಲ್ಲಿ ಇಮ್ತಿಯಾಜ್ ಅವರು ತನ್ನ ಇನ್ನಿಬ್ಬರು ಪುತ್ರರನ್ನು ಶಾಲೆಗೆ ಕರೆದುಕೊಂಡು ಹೋಗಿದ್ದರು. ಮಗು ಹೊರಗೆ ಆಡುತ್ತಿದೆ ಎಂದು ಭಾವಿಸಿ ಬಾಲಕನ ತಾಯಿ ಮನೆಯೊಳಗೇ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ನಾಯಿಗಳು ಇಸಾಂ ಮೇಲೆ ದಾಳಿ ಮಾಡಿದ್ದು, ಒಂದಷ್ಟು ದೂರ ಎಳೆದುಕೊಂಡು ಹೋಗಿವೆ.
ಕಳೆದ ವಾರವೂ ನಡೆದಿತ್ತು : ಕುದ್ರೋಳಿ ಬಳಿ ಬೀದಿನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುವುದು ಇದೇ ಮೊದಲಲ್ಲ. ಕಳೆದ ವಾರ ಟಿಪ್ಪು ಸುಲ್ತಾನ್ ನಗರದಲ್ಲಿ ಮಹಿಳೆಯೊಬ್ಬರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.
ಕಾಸಾಯಿಖಾನೆ ಕಾರಣ : ಕುದ್ರೋಳಿಯಲ್ಲಿ ಕಸಾಯಿಖಾನೆ ಇದ್ದು, ಅಲ್ಲಿ ತಿನ್ನಲು ಬೇಕಾದಷ್ಟು ಆಹಾರ ಸಿಗುತ್ತಿರುವ ಕಾರಣ ಈ ಪರಿಸರದಲ್ಲಿ ಕೊಬ್ಬಿದ ಬೀದಿನಾಯಿಗಳು ಅಧಿಕವಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.












Click it and Unblock the Notifications