ವ್ಯವಸಾಯ ಬ್ಯಾಂಕ್ ಕಾವಲು ಸಿಬ್ಬಂದಿ ಅನುಮಾನಾಸ್ಪದ ಸಾವು
Recommended Video

ಮಂಗಳೂರು, ನವೆಂಬರ್ 07 : ಮಂಗಳೂರು ಹೊರವಲಯದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 3 ಮಂದಿ ಕಾವಲು ಸಿಬ್ಬಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಮಂಗಳೂರಿನ ತಲಪಾಡಿಯ ಕೆ.ಸಿ ರೋಡ್ ಬಳಿಯ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದ್ದು. ನವೆಂಬರ್ 7 ರ ಮಂಗಳವಾರ ಬೆಳಿಗ್ಗೆ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ಕಚೇರಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಉಮೇಶ್ , ಸಂತೋಷ್, ಸೋಮನಾಥ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಉಳ್ಳಾಲ ಠಾಣೆಯ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಉಸಿರುಗಟ್ಟಿಸಿ ಕೊಲ್ಲಲಾಗಿರುವುದಾಗಿ ಕಂಡು ಬರುತ್ತಿದ್ದರೂ ತನಿಖೆ ಪೂರ್ಣವಾಗುವವರೆಗೆ ಏನೂ ಹೇಳಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಯದಲ್ಲಿ ಮಂಗಳೂರು ಬ್ಯಾಂಕ್ ಕಾವಲು ಸಿಬ್ಬಂದಿ
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬ್ಯಾಂಕ್ ಕಡೆಗೆ ಧಾವಿಸಿ ಬಂದಿದ್ದಾರೆ. ಬ್ಯಾಂಕ್ ಕಾವಲು ಸಿಬ್ಬಂದಿಗೆ ಎರಗಿದ ಈ ದುರ್ಘಟನೆಯಿಂದ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ. ನಗರದ ಉಳಿದ ಬ್ಯಾಂಕುಗಳ ಕಾವಲು ಸಿಬ್ಬಂದಿ ಸಹ ಆತಂಕಗೊಂಡಿದ್ದಾರೆ.

ಚಿನ್ನಾಭರಣ ದೋಚಲು ಯತ್ನಿಸಿದ್ದ ಕಳ್ಳರು
ಈ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಈ ಹಿಂದೆ ಜೂನ್ 23 ರಂದು ಚಿನ್ನಾಭರಣ ದರೋಡೆಗೆ ವಿಫಲ ಯತ್ನ ನಡೆದಿತ್ತು .ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು ಗುರುತು ಸಿಗದಂತೆ ಹೆಲ್ಮೆಟ್ ಧರಿಸಿ ಸಹಕಾರಿ ಬ್ಯಾಂಕ್ಗೆ ನುಗ್ಗಿ ಚಿನ್ನಾಭರಣ ದರೋಡೆಗೆ ಯತ್ನ ನಡೆಸಿದ್ದರು .

ಬ್ಯಾಂಕ್ ಸಿಬ್ಬಂದಿಗೆ ಬೆದರಿ ಕಳ್ಳರು ಪರಾರಿ
ಮಾರಕಾಸ್ತ್ರಗಳನ್ನು ತೋರಿಸಿ ಸಹಕಾರಿ ಬ್ಯಾಂಕ್ ನ ನೌಕರರನ್ನು ಶೌಚಾಲಯದಲ್ಲಿ ಬಂಧಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದನ್ನು ದೋಚಿ ಪರಾರಿಯಾಗಲು ಯತ್ನಿಸಿದ್ದರು. ಆದರೆ ಆ ಸಂದರ್ಭದಲ್ಲಿ ಬಾಗಿಲು ಒಡೆದುಕೊಂಡು ಹೊರಗೆ ಬಂದ ಬ್ಯಾಂಕ್ ನೌಕರರು ದರೋಡೆಕೋರರ ಮೇಲೆ ಕಲ್ಲು ತೂರಾಟ ನಡೆಸಿದ್ದರು ಇದರಿಂದ ಬೆದರಿದ ದರೋಡೆಕೋರರು ಚಿನ್ನಾಭರಣ ತುಂಬಿದ್ದ ಮೂಟೆಯನ್ನು ಸ್ಥಳದಲ್ಲಿ ಬಿಟ್ಟು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು.

ತನಿಖೆ ಮುಗಿದ ನಂತರ ನಿಜಾಂಶ ಬಯಲು
ಮುಂಚೆ ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳರ ತಂಡವೇ ಮತ್ತೆ ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ. ಈ ಮುಂಚೆ ತಮ್ಮ ಸಂಚು ವಿಫಲ ಗೊಳಿಸಿದ್ದರಿಂದ ಸೇಡು ಕಳ್ಳರು ತೀರಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳು ಸಾರ್ವಜನಿಕರ ಮಧ್ಯೆ ಹರಿದಾಡುತ್ತಿದೆ. ಪೊಲೀಸರ ತನಿಖೆಯ ನಂತರವಷ್ಟೆ ನಿಜಾಂಶ ಬಯಲಾಗಲಿದೆ.












Click it and Unblock the Notifications