ಉಳ್ಳಾಲ: ಮೂವರು ಒಬ್ಬನನ್ನು ಕೊಲ್ಲಲು ಹೊಂಚು ಹಾಕಿದ್ರಾ?
ಉಳ್ಳಾಲ, ಸೆಪ್ಟೆಂಬರ್, 11 : ಕಾರಿನಲ್ಲಿ ಬಂದ ಮೂವರ ತಂಡ ದ್ವಿಚಕ್ರ ವಾಹನ ಸವಾರನನ್ನು ಕೊಲೆ ಮಾಡಲು ಪ್ರಯತ್ನಿಸಿದೆ. ಈ ಘಟನೆ ನಗರದ ತೊಕ್ಕೊಟ್ಟು ಸಮೀಪದ ಚೆಂಬುಗಡ್ಡೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಸಂತೋಷ ನಗರದ ನಿವಾಸಿಯಾದ ಲ್ಯಾನ್ಸಿ ಡಿಸೋಜಾ(32) ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ವೆಲ್ಡಿಂಗ್ ಕೆಲಸ ಮುಗಿಸಿ ಮನೆಗೆ ತೆರಳುವುದನ್ನು ಕಾಯುತ್ತಿದ್ದ ತಂಡ ಈತನನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದೆ.[ಬಾಲಕನ ಮೇಲೆ ಹಲ್ಲೆ ಮಾಡಿದ ವೇದ ಶಿಕ್ಷಕನ ವಿರುದ್ಧ ಎಫ್ ಐಆರ್]

ಈ ತಂಡ ಹಲವು ದಿನಗಳಿಂದ ಲ್ಯಾನ್ಸಿ ಜೈಲಿನಿಂದ ಬಿಡುಗಡೆಯಾಗುವುದನ್ನು ನಿರೀಕ್ಷಿಸುತ್ತಿತ್ತು. ಬಿಡುಗಡೆಯಾದ ವಿಷಯ ತಿಳಿದ ಇವರು ಗುರುವಾರ ಲ್ಯಾನ್ಸಿ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಈತನ ವಾಹನವನ್ನು ಕಾರಿನಲ್ಲಿ ಹಿಂಬಾಲಿಸಿದ ಮೂವರ ತಂಡ ಆತನ ಬೈಕಿಗೆ ಢಿಕ್ಕಿ ಹೊಡೆದು ಬೀಳಿಸಿದೆ. ಬಳಿಕ ತಲವಾರಿನಿಂದ ಹೊಡೆದ ಇವರು ಈ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಲ್ಯಾನ್ಸಿ ಡಿಸೋಜಾ 2014 ರಲ್ಲಿ ಜಾಗರಣಾ ವೇದಿಕೆ ಮುಖಂಡ ಯತೀಶ್ ಪೂಜಾರಿ ಎಂಬುವನನ್ನು ಕೊಲೆ ಮಾಡಿದ್ದರು. ಬಳಿಕ ಜೈಲು ವಾಸ ಅನುಭವಿಸಿದ ಈತ ಎರಡು ವಾರಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಹೊಂದಿದ್ದ. ಹಾಗಾಗಿ ಪ್ರತೀಕಾರವಾಗಿ ಈ ಕೊಲೆ ಯತ್ನ ನಡೆದಿರಬಹುದೆಂದು ಶಂಕಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಲ್ಯಾನ್ಸಿ ಡಿಸೋಜಾ ಅವರನ್ನು ದೇರಳ ಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊಲೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ಹಂತಕರ ತಂಡಕ್ಕಾಗಿ ಶೋಧ ಕಾರ್ಯ ನಡೆದಿದೆ.












Click it and Unblock the Notifications