ಮಂಗಳೂರು: ಮಾಲಿನ್ಯದಿಂದ ಕಪ್ಪಾಯಿತು ಫಲ್ಗುಣಿ ನದಿ
ಅನ್ನ ಮಾಡಲು, ಸ್ನಾನ ಮಾಡಲು, ಬಟ್ಟೆ ತೊಳೆಯಲು... ಹೀಗೆ ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದೆ ಈ ನೀರು.
ಮಂಗಳೂರು, ಮೇ 18: ಕೈಗಾರಿಕೆಗಳಿಂದ ಬರುತ್ತಿರುವ ತ್ಯಾಜ್ಯವನ್ನು ಲಕ್ಷೋಪಲಕ್ಷ ಜೀವಗಳಿಗೆ ಆಧಾರವಾಗಿರುವ ಫಲ್ಗುಣಿ ನದಿಯ ಒಡಲಿಗೆ ಬಿಡುತ್ತಿರುವ ಮಾನವನ ಕುಕೃತ್ಯದಿಂದಾಗಿ ಇಡೀ ನದಿ ಈಗ ಕಪ್ಪು ಬಣ್ಣಕ್ಕೆ ತಿರುಗಿದೆ.
ಇದರ ಪರಿಣಾಮವಾಗಿ, ನದಿಯ ನೀರು ಕೆಟ್ಟ ವಾಸನೆಯಿಂದ ಕೂಡಿದ್ದು ನದಿಯ ಪಾತ್ರಗಳಲ್ಲಿನ ಜನರು ನಾನಾ ರೀತಿಯ ತೊಂದರೆಗೊಳಗಾಗಿದ್ದಾರೆ.

ಈ ನೀರನ್ನು ಸೋಸಿ ಅದರಿಂದ ಅನ್ನ ಮಾಡಿದರೂ, ಆ ಅನ್ನ ಕಪ್ಪಾಗಿ ಪರಿವರ್ತನೆಯಾಗುವುದಲ್ಲದೆ ತಿನ್ನಲು ಅಯೋಗ್ಯವಾಗುತ್ತದೆ. ಪಾತ್ರೆಗಳಲ್ಲಿ ನೀರು ತುಂಬಿಟ್ಟರೆ ಪಾತ್ರೆಗಳ ಒಳ ಮೇಲ್ಮೈ ಮೇಲೆ ಕಪ್ಪಾದ ಧೂಳು ಮೆತ್ತಿಕೊಳ್ಳುತ್ತದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ, ಚರ್ಮ ರೋಗಗಳಿಗೆ ತುತ್ತಾಗುವ ಭೀತಿಯೂ ಆವರಿಸಿದೆ. ಜೀವಿಗಳಿಗೆ ನೀರೇ ಆಧಾರವಾಗಿರುವಾಗ ಇಂಥ ನೀರನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಹೇಗೆ ಎಂಬ ಪ್ರಶ್ನೆ ಈ ನದಿ ಪಾತ್ರದ ಜನರದ್ದು.
ನದಿಗೆ ಮರವೂರಿನಲ್ಲಿ ಡ್ಯಾಂ ಕಟ್ಟಲಾಗಿದೆ. ಅಸಲಿಗೆ ಇಲ್ಲೇ ಈ ನದಿ ಮಾಲಿನ್ಯಕ್ಕೊಳಗಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸುತ್ತಲೂ ಕಾರ್ಖಾನೆಗಳು ಇದ್ದು ಇವುಗಳಿಂದ ಬರುವ ಕಲುಷಿತ ನೀರನ್ನು ಈ ಅಣೆಕಟ್ಟಿಗೆ ಬಿಡಲಾಗುತ್ತಿದೆ ಎಂದು ಹೇಳಲಾಗಿದೆ. ಹಾಗಾಗಿಯೇ, ನದಿ ನೀರು ಉಪಯೋಗಿಸಲು ಅಯೋಗ್ಯವಾಗಿದೆ ಎಂದು ಅವರು ದೂರಿದ್ದಾರೆ.












Click it and Unblock the Notifications