ಬಾಳಿಗ ಹತ್ಯೆ : ಆರೋಪಿ ಶೆಣೈ ವಿರುದ್ಧ 770 ಪುಟಗಳ ಚಾರ್ಜ್ ಶೀಟ್
ಮಂಗಳೂರು, ಜೂ. 27: ಮಾರ್ಚ್ 21ರಂದು ನಗರದ ಕೊಡಿಯಾಲ್ಬೈಲ್ ಬಳಿ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯೆಗೆ ಸಂಬಂಧಿಸಿ ಪ್ರಮುಖ ಆರೋಪಿ ಎಂ.ನರೇಶ್ ಶೆಣೈ(39)ಯನ್ನು ನಗರದ ಸಿಸಿಬಿ ಪೊಲೀಸರು ಉಡುಪಿಯ ಹಜಮಾಡಿಯಿಂದ ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ(ಜೂನ್ 26) ಸಂಜೆ ಸುದ್ದಿಗೋಷ್ಠಿಯಲ್ಲಿ ಸಂಜೆ ಮಾತನಾಡಿದ ಅವರು, ಬಂಧಿತ ನರೇಶ್ ಶೆಣೈ ನಗರದ ವಿ.ಟಿ.ರಸ್ತೆಯಲ್ಲಿ ವಿವೇಕ್ ಟ್ರೇಡರ್ಸ್ ಎಂಬ ಆಯುರ್ವೇದಿಕ್ ಔಷಧ ವಿತರಣಾ ಸಂಸ್ಥೆಯನ್ನು ನಡೆಸಿಕೊಂಡಿದ್ದು, ಕೊಲೆಯ ರೂವಾರಿಯಾಗಿದ್ದಾರೆ. ಬಾಳಿಗಾ ಹತ್ಯೆಗಾಗಿ ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿ, ಹತ್ಯೆ ನಡೆದ ಬಳಿಕ ತಲೆಮರೆಸಿಕೊಂಡು ಸಾಕ್ಷಗಳನ್ನು ನಾಶಪಡಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದರು.[ವಿನಾಯಕ್ ಬಾಳಿಗ ಕೊಲೆ ಆರೋಪಿ ನರೇಶ್ ಶೆಣೈ ಶರಣು]
ಜಮ್ಮುಕಾಶ್ಮೀರ, ಗೋರಖ್ಪುರ್, ಲಕ್ನೋ, ನೇಪಾಲದಲ್ಲಿ ತಲೆ ಮರೆಸಿಕೊಂಡಿದ್ದರೆಂದು ತನಿಖೆಯಿಂದ ಗೊತ್ತಾಗಿದೆ. ನರೇಶ್ ಶೆಣೈಗೆ ಅಡಗುದಾಣ ಬದಲಾಯಿಸಲು ಹಾಗೂ ಆತನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆಂಬುದು ತನಿಖೆ ನಡೆಯಲಿದೆ.

ನರೇಶ್ ಶೆಣೈಯ ಕಚೇರಿ ಉದ್ಯೋಗಿ ಹಾಗೂ ನಿಕಟವರ್ತಿ ವಿಘ್ನೇಶ್ ನನ್ನು ಶೀಘ್ರದಲ್ಲೇ ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವುದಾಗಿ ಕಮಿಷನರ್ ಚಂದ್ರಶೇಖರ್ ಮಾಹಿತಿ ನೀಡಿದರು. [RTI ಬಾಳಿಗಾ ಕೊಲೆ ಪ್ರಕರಣ: ಜಿ ಎಸ್ ಬಿ ಸಮಾಜದ ಸ್ಪಷ್ಟನೆ]
ನರೇಶ್ ಶೆಣೈಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಪೊಲೀಸ್ ಕಸ್ಟಡಿಗೆ ಕೋರುವುದಾಗಿ ತಿಳಿಸಿದರು. ಪ್ರಕರಣದ ತನಿಖಾಧಿಕಾರಿ ಎಸಿಪಿ ತಿಲಕ್ಚಂದ್ರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ರವೀಶ್ ನಾಯಕ್, ಶಾಂತರಾಮ, ರಾಜೇಶ್, ಮಾರುತಿ ನಾಯ್ಕ್, ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಸಹಕಾರದಿಂದ ಆರೋಪಿ ನರೇಶ್ ಶೆಣೈಯನ್ನು ಬಂಧಿಸಲಾಗಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಸಾಕ್ಷಾಧಾರಗಳನ್ನುಸ ಸಂಗ್ರಹಿಸಿದ ಬಳಿಕ ಜೂನ್ 23ರಂದು ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸಹಿತ ಈ ಹಿಂದೆ ಬಂಧಿಸಲ್ಪಟ್ಟ ಆರೋಪಿಗಳಾದ ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶಿತ್ ದೇವಾಡಿಗ, ಶೈಲೇಶ್ ಮಂಜುನಾಥ ಶೆಣೈ ಎಂಬವರ ವಿರುದ್ಧ ನಗರದ ಜೆಎಂಎಫ್ಸಿ 3ನೇ ನ್ಯಾಯಾಲಯದಲ್ಲಿ 770 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ ತನಿಖೆಯನ್ನು ಮುಂದುವರಿಸಲು ನ್ಯಾಯಾಲಯದ ಅನುಮತಿ ಪಡೆಯಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಸಂಜೀವ್ ಎಂ. ಪಾಟಿಲ್, ಕೆ.ಎಂ.ಶಾಂತರಾಜು ಉಪಸ್ಥಿತರಿದ್ದರು.












Click it and Unblock the Notifications