7 ಸಾವಿರ ಪಡೆದು ಜನರನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ವಶಕ್ಕೆ
ಮಂಡ್ಯ, ಏಪ್ರಿಲ್ 14 : ಲಾಕ್ ಡೌನ್ ಹಿನ್ನಲೆಯಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಅಂಬ್ಯುಲೆನ್ಸ್ ಚಾಲಕರು ಹೆಚ್ಚಿನ ಹಣ ಪಡೆದು ಅಕ್ರಮವಾಗಿ ಜನರನ್ನು ಸಾಗಣೆ ಮಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಿಂದ ಹಾಸನ ಜಿಲ್ಲೆಯ ಬೇಲೂರಿಗೆ ಅಂಬ್ಯುಲೆನ್ಸ್ ಮೂಲಕ ಹೊರಟಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂಬ್ಯುಲೆನ್ಸ್ ಅನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ -75ರ ಹಾಸನ-ಮಂಡ್ಯ ಗಡಿಯಲ್ಲಿನ ಚೆಕ್ಪೋಸ್ಟ್ನಲ್ಲಿ ಅಂಬ್ಯುಲೆನ್ಸ್ ವಶಕ್ಕೆ ಪಡೆಯಲಾಗಿದೆ. ಕುಮಾರಸ್ವಾಮಿ ಲೇಔಟ್ನ ಐಯ್ಯಂಗಾರ್ ಕೇಕ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಐವರು ಬೇಲೂರಿಗೆ ಹೊರಟಿದ್ದರು ಇದಕ್ಕಾಗಿ ಅಂಬ್ಯುಲೆನ್ಸ್ ಚಾಲಕನಿಗೆ 7 ಸಾವಿರ ರೂ. ನೀಡಿದ್ದರು.

ಅಂಬ್ಯುಲೆನ್ಸ್ ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ನಿವಾಸಿಗೆ ಸೇರಿದ್ದಾಗಿದೆ. ಹಿರೀಸಾವೆ ಆಸ್ಪತ್ರೆಯಲ್ಲಿ ಎಲ್ಲರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಯುವಕರು ಆರೋಗ್ಯವಾಗಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಎಲ್ಲರಿಗೂ ಹೋಂ ಕ್ವಾರಂಟೈನ್ನಲ್ಲಿಡಲು ಆದೇಶ ನೀಡಲಾಗಿದೆ.
ಯುವಕರ ಪೋಷಕರನ್ನು ಕರೆಸಿದ ಬಳಿಕ ಮನೆಗಳಿಗೆ ಕಳಿಸಿಕೊಡಲಾಗುತ್ತದೆ. ಎಲ್ಲರ ವಿರುದ್ಧ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಪ್ರಕರಣ ದಾಖಲು ಮಾಡಲಾಗಿದೆ.
ಕಳೆದ ವಾರ ಶಿವಮೊಗ್ಗಕ್ಕೆ ಬೆಂಗಳೂರಿನಿಂದ ಜನರನ್ನು ಸಾಗಣೆ ಮಾಡುತ್ತಿದ್ದ ಅಂಬ್ಯುಲೆನ್ಸ್ ವಶಕ್ಕೆ ಪಡೆಯಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಸೊರಬಕ್ಕೆ ಹೊರಟಿದ್ದವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಲಾಗಿತ್ತು. ಅಂಬ್ಯುಲೆನ್ಸ್ನಲ್ಲಿ ಸಾಗಣೆ ಮಾಡಲು ಹಣ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.











Click it and Unblock the Notifications