ಮಂಡ್ಯದಲ್ಲೂ ಕೊರೊನಾ ಶಂಕೆ: ಇಬ್ಬರ ಮೇಲೆ ತೀವ್ರ ನಿಗಾ
ಮಂಡ್ಯ, ಮಾರ್ಚ್ 17: ಮಂಡ್ಯ ಜಿಲ್ಲೆಯಲ್ಲಿ ಇಬ್ಬರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ನಾಗಮಂಗಲ ತಾಲೂಕಿನ 50 ವರ್ಷದ ಮಹಿಳೆ ಹಾಗೂ ಶ್ರೀರಂಗಪಟ್ಟಣದ ವ್ಯಕ್ತಿಯೊಬ್ಬರು ಜ್ವರ, ಗಂಟಲು ಕೆರೆತ, ಕೆಮ್ಮು, ಶೀತದಿಂದ ಬಳಲುತ್ತಿದ್ದು, ಈ ಇಬ್ಬರ ದ್ರಾವಕವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ನಾಗಮಂಗಲ ಪಟ್ಟಣ ನಿವಾಸಿಯಾದ ಮಹಿಳೆ ಫೆ.15ರಂದು ಬೆಂಗಳೂರು ಏರ್ಪೋರ್ಟ್ ಮೂಲಕ ಸೌದಿ ಅರೇಬಿಯಾದ ಜಿದ್ದಾ ಏರ್ಪೋರ್ಟ್ಗೆ ಹೋಗಿ ಅಲ್ಲಿಂದ ಮೆಕ್ಕಾಗೆ ಪ್ರಯಾಣ ಬೆಳೆಸಿದ್ದರು. ಪ್ರವಾಸ ಮುಗಿಸಿ ಮಾ.7ರಂದು ಬೆಂಗಳೂರಿಗೆ ವಾಪಸ್ಸಾಗಿ ನಂತರ ನಾಗಮಂಗಲದಲ್ಲಿನ ತಮ್ಮ ಮನೆ ಸೇರಿಕೊಂಡಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಸರ್ವೇಲೆನ್ಸ್ ಅಧಿಕಾರಿಗಳು ನಡೆಸಿದ ಪರಿಶೀಲನೆಯಂತೆ ಮೆಕ್ಕಾದಿಂದ ಆಗಮಿಸಿದ ಬಳಿಕ ಮಹಿಳೆ ಜ್ವರ, ಗಂಟಲು ಕೆರೆತದಿಂದ ಬಳಲುತ್ತಿದ್ದರು. ಕೇಂದ್ರ ಸರ್ಕಾರದ ನಿಯಮಾವಳಿಗಳನ್ವಯ ಅವರನ್ನು ಮಿಮ್ಸ್ ಐಸೋಲೇಷನ್ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿದೆ. ಆ ಮಹಿಳೆ ಸಂಪೂರ್ಣ ಆರೋಗ್ಯದಿಂದ ಇದ್ದು, ಅವರ ಗಂಟಲು ಹಾಗೂ ಮೂಗಿನ ದ್ರಾವಕವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಶ್ರೀರಂಗಪಟ್ಟಣ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಲ್ಲೂ ಕೊರೊನಾ ಶಂಕೆ ವ್ಯಕ್ತಗೊಂಡಿದೆ. ಅವರು ಥಾಯ್ಲೆಂಡ್ ಮೂಲಕ ಆಸ್ಟ್ರೇಲಿಯಾದ ಮೆಲ್ಬರ್ನ್ ಗೆ ಎರಡು ತಿಂಗಳ ತರಬೇತಿಗೆ ಹೋಗಿ ಮಾ.1ರಂದು ಬೆಂಗಳೂರಿಗೆ ವಾಪಸಾಗಿದ್ದರು. ಆ ಸಂದರ್ಭದಲ್ಲಿ ಅವರನ್ನು ಸ್ಕ್ರೀನಿಂಗ್ ಮಾಡಲಾಗಿತ್ತು. ಮನೆಗೆ ಬಂದಿದ್ದ ಅವರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಕೆಮ್ಮು ಹೆಚ್ಚಾಗಿದ್ದು, ಎದೆಯ ಭಾಗದಲ್ಲಿ ಉಸಿರಾಟಕ್ಕೂ ಕಷ್ಟವಾಗಿದೆ. ಇವರಿಂದಲೂ ದ್ರಾವಕ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.












Click it and Unblock the Notifications