ನವೆಂಬರ್ 23 ರಿಂದ ಐತಿಹಾಸಿಕ ತೊಣ್ಣೂರು ಕೆರೆ ಉತ್ಸವ
ಮಂಡ್ಯ, ನವೆಂಬರ್.22:ಈಗಾಗಲೇ ಜಲಪಾತೋತ್ಸವವನ್ನು ನಡೆಸಿದ ಸರ್ಕಾರ ಇದೀಗ ಕೆರೆ ಉತ್ಸವ ನಡೆಸಲು ಮುಂದಾಗಿದ್ದು, ಮೊದಲ ಬಾರಿಗೆ ಪಾಂಡವಪುರ ಬಳಿಯ ತೊಣ್ಣೂರಿನಲ್ಲಿ ಈ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ತೊಣ್ಣೂರು ಕೆರೆಯು ಐತಿಹಾಸಿಕ ಕೆರೆಯಾಗಿದ್ದು, ಈ ಕೆರೆ ಕಾರ್ತಿಕ ಮಾಸದಲ್ಲಿ ಭರ್ತಿಯಾಗಿರುವ ಹಿನ್ನಲೆಯಲ್ಲಿ ಉತ್ಸವವನ್ನು ನಡೆಸಲಾಗುತ್ತಿದ್ದು, ನ.23 ರಿಂದ ಆರಂಭವಾಗುವ ಉತ್ಸವವು 25ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಅಲ್ಲದೆ ಈ ಉತ್ಸವವನ್ನು ಮುಂದುವರೆಸಿಕೊಂಡು ಹೋಗಲು ಸರ್ಕಾರ ನಿರ್ಧರಿಸಿದೆ.
ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರ ನೇತೃತ್ವದಲ್ಲಿ ನಡೆಯಲಿರುವ ಕೆರೆ ಉತ್ಸವದಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಉತ್ಸವಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಚಾಲನೆ ನೀಡಲಿದ್ದಾರೆ.
ನ.23ರಂದು ಸಂಜೆ 6 ಗಂಟೆಗೆ ಮೇಲುಕೋಟೆಯಿಂದ ಬೃಹತ್ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೆರೆತೊಣ್ಣೂರಿಗೆ ಕರೆತರಲಾಗುವುದು. ಬಳಿಕ ತೊಣ್ಣೂರು ಕೆರೆ ನೀರಿನ ಮೇಲೆ ನಿರ್ಮಿಸಲಾಗಿರುವ ಬೃಹತ್ ತೇಲುವ ವೇದಿಕೆಯಲ್ಲಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ವೇದಿಕೆ ಕಾರ್ಯಕ್ರಮದ ಬಳಿಕ ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮುಂದೆ ಓದಿ...

ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ
ಉತ್ಸವದ ಹಿನ್ನಲೆಯಲ್ಲಿ ತೊಣ್ಣೂರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಪೆಟ್ಲಿಂಗ್ ಹಾಗೂ ಮೋಟಾರ್ ಬೋಟ್ ವ್ಯವಸ್ಥೆ ಮಾಡಲಾಗಿದೆ. ಉತ್ಸವಕ್ಕೆ ಬರುವ ಜನರಿಗೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿಗಳಿಂದ ಚಾಲನೆ
ಅಂದೇ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿದ್ದು, 718.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.

ನೃತ್ಯ ಕಾರಂಜಿ ನಿರ್ಮಾಣ
ಈಗಾಗಲೇ ತನ್ನದೇ ಆದರ ನಿಸರ್ಗ ಸೌಂದರ್ಯವನ್ನು ತನ್ನೊಡಲಲ್ಲಿ ಹೊತ್ತುಕೊಂಡಿರುವ ತೊಣ್ಣೂರು ಕೆರೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಸುಂದರ ಪ್ರವಾಸಿ ತಾಣವನ್ನಾಗಿ ಮಾಡುವ ಕುರಿತು ಮಾಹಿತಿ ನೀಡಿರುವ ಉಸ್ತುವಾರಿ ಸಚಿವ ಪುಟ್ಟರಾಜು ಅವರು ಅಲ್ಲಿ ಕೆ.ಆರ್.ಎಸ್. ಮಾದರಿಯಲ್ಲಿ ಬೃಂದಾವನ ಹಾಗೂ ಸಂಗೀತ ನೃತ್ಯ ಕಾರಂಜಿಯನ್ನು ನಿರ್ಮಿಸುವ ಬಗ್ಗೆಯೂ ತಿಳಿಸಿದ್ದಾರೆ.

ಶಂಕುಸ್ಥಾಪನೆ , ಭೂಮಿ ಪೂಜೆ
ನ.23ರಂದು ಮಧ್ಯಾಹ್ನ 3 ಗಂಟೆಗೆ ದುದ್ದ ಕೇಂದ್ರ ಸ್ಥಾನದಲ್ಲಿ 144 ಕೋಟಿ ರೂ. ವೆಚ್ಚದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ನಂತರ ಶಿವಳ್ಳಿ, ದುದ್ದ, ಎಲೆಕೆರೆ ಬಸ್ ಶೆಲ್ಟರ್ ಕಾಮಗಾರಿಗೆ ಅಡಿಗಲ್ಲು ಹಾಕಲಿದ್ದು, ಬಳಿಕ ಜಕ್ಕನಹಳ್ಳಿ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿಪೂಜೆ, ಪಾಂಡವಪುರ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು ಹಾಗೂ ಬಸ್ ಡಿಪೋ ಕಾಂಕ್ರೀಟ್ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ ಎಂದು ಸಚಿವ ಪುಟ್ಟರಾಜು ತಿಳಿಸಿದ್ದಾರೆ.












Click it and Unblock the Notifications