ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಸಿಡಿ ಉತ್ಸವಕ್ಕೆ ಬಿತ್ತು ಬ್ರೇಕ್
ಮಂಡ್ಯ, ಫೆಬ್ರವರಿ 09: ಪ್ರತಿ ವರ್ಷದಂತೆ ನಡೆಯುತ್ತಿದ್ದ ದೊಡ್ಡರಸಿನಕೆರೆಯ ಏಳೂರಮ್ಮನ ಸಿಡಿ ಉತ್ಸವ ಈ ಬಾರಿ ನಡೆಯಲಿಲ್ಲ. ಮೌಢ್ಯ ಆಚರಣೆ ನಿರ್ಬಂಧ ಕಾಯ್ದೆ ಹಿನ್ನೆಲೆಯಲ್ಲಿ ಸಿಡಿ ಕಂಬಕ್ಕೆ ಕಟ್ಟಿ ಎಳೆಯುವುದನ್ನು ನಿಷೇಧಿಸಿದ್ದು, ಪರಿಣಾಮ ಈ ಬಾರಿಯ ಸಿಡಿ ಉತ್ಸವ ರದ್ದುಗೊಂಡಿದೆ. ಇನ್ನುಳಿದ ಎಲ್ಲ ಧಾರ್ಮಿಕ ಸಂಪ್ರದಾಯಗಳು ಎಂದಿನಂತೆ ಮುಂದುವರೆದಿವೆ.
ಐತಿಹಾಸಿಕ ಏಳೂರಮ್ಮ ದೇವತೆಯ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ಸಿಡಿಯನ್ನು ಹೊರತುಪಡಿಸಿ ಉಳಿದ ಎಲ್ಲ ಪೂಜಾ ಕೈಕಂಕರ್ಯಗಳು ಜರುಗಿದವು. ಸುತ್ತಮುತ್ತಲ ಏಳು ಗ್ರಾಮದ ಭಕ್ತಾದಿಗಳು ಉತ್ಸವದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿ ಭಕ್ತಿಭಾವ ಮೆರೆದರು. ಪೂಜೆ, ಹೋಮ, ಹವನ, ಬಂಡಿ ಮೆರವಣಿಗೆ, ಕೊಂಡೊತ್ಸವ ಕಣ್ತುಂಬಿಕೊಂಡು ಸಂಭ್ರಮಿಸಿದರು.
ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಮುಟ್ಟನಹಳ್ಳಿ, ದೇವರಹಳ್ಳಿ, ಕುರಿಕೆಂಪನದೊಡ್ಡಿ, ಗುರುದೇವರಹಳ್ಳಿ, ಗೌಡಯ್ಯನದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಸಾವಿರಾರು ಭಕ್ತರು ನೆರೆದು ಏಳೂರಮ್ಮನ ಉತ್ಸವದಲ್ಲಿ ಮಿಂದೆದ್ದರು. ಶುಕ್ರವಾರ ಬೆಳಿಗ್ಗೆ ದೇವತೆಗಳಿಗೆ ಹೋಮ ನಡೆಸಿ ಮಹಾಮಂಗಳಾರತಿ ಮಾಡಲಾಯಿತು. ಸಂಜೆ ವೇಳೆ ಮಡೆ ಆಚರಣೆಯನ್ನು ಮಹಿಳೆಯರು ನಡೆಸಿಕೊಟ್ಟರು. ಮಾರಮ್ಮ ದೇವಸ್ಥಾನದಲ್ಲಿ ಐದು ಕೊಂಡಾಬಂಡಿಗಳನ್ನು ಕಟ್ಟಿ ಏಳೂರಮ್ಮ, ಕಾಳಮ್ಮ, ಹಿರಿಯಮ್ಮ ದೇವಸ್ಥಾನದ ಸುತ್ತ ಪ್ರದರ್ಶನ ಮಾಡಿ ಗ್ರಾಮದ ಪ್ರಮುಖ ಬೀದಿಯಲ್ಲಿ ಕೊಂಡಾಬಂಡಿ ಮೆರವಣಿಗೆ ನಡೆಯಿತು. ಭಕ್ತಾದಿಗಳು ಪೂಜೆ ಸಲ್ಲಿಸಿದರು.

ಅದೇ ರೀತಿ ಚಿಕ್ಕತಾಯಮ್ಮ, ಹಿರಿಸತ್ಕೆ, ಉಪಾಸನೆ ಜೊತೆಗೆ ಹೂ-ಹೊಂಬಾಳೆ, ಕೋಲಾಟ, ಬೈಲಾಟ, ಪೂಜಾಕುಣಿತ, ವೀರಗಾಸೆ ಕುಣಿತ ಜಾನಪದ ವೈಭವವನ್ನು ಮೇಳೈಸಿತು. ರಾತ್ರಿಪೂರ ಮಡೆ, ಬಾಯಿಬೀಗ, ಧಾರ್ಮಿಕ ಪೂಜೆಯನ್ನು ಭಕ್ತರು ನೆರವೇರಿಸಿಕೊಟ್ಟರು. ಸಾವಿರಾರು ಮಹಿಳೆಯರು ಶನಿವಾರ ಏಳೂರಮ್ಮ ದೇವಸ್ಥಾಕ್ಕೆ ಕಿಚಡಿಅನ್ನ, ಮಡೆಅನ್ನ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಏಳೂರಮ್ಮ ದೇವಸ್ಥಾನದ ಬಳಿ ಕೊಂಡೋತ್ಸವವನ್ನು ಏಳೂರಮ್ಮನ ಗುಡ್ಡಪ್ಪ ಮತ್ತು ಕಾಳಮ್ಮನ ಪೂಜಾರಿ, ಕ್ಯಾಲಮ್ಮನ ಪೂಜಾರಿ ಕರಗ ಹೊತ್ತು ನೇರವೇರಿಸಿದರು. ಸಾವಿರಾರು ಭಕ್ತರು ಹರ್ಷೊದ್ಘಾರದ ನಡುವೆ ಕೊಂಡೋತ್ಸವವನ್ನು ಕಣ್ತುಂಬಿಕೊಂಡರು. ಗ್ರಾಮದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೊಬಸ್ತ್ ಮಾಡಲಾಗಿತ್ತು.












Click it and Unblock the Notifications