ಶ್ರೀರಂಗಪಟ್ಟಣ ದಸರಾ ಉದ್ಘಾಟಿಸಲಿದ್ದಾರೆ ನಿರ್ಮಲಾನಂದನಾಥ ಸ್ವಾಮೀಜಿ
ಮಂಡ್ಯ, ಅಕ್ಟೋಬರ್ 07; ಮಂಡ್ಯ ಜಿಲ್ಲೆಯ ಶೀರಂಗಪಟ್ಟಣ ದಸರಾವನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. 2021ನೇ ಸಾಲಿನ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅಕ್ಟೊಬರ್ 9 ರಿಂದ 3 ದಿನಗಳ ಕಾಲ ನಡೆಯಲಿದೆ.
ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸಿ. ನಾರಾಯಣ ಗೌಡ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಫಲ ತಾಂಬೂಲ ನೀಡಿ, ಆನೆಯ ಕಲಾಕೃತಿಯ ಸ್ಮರಣಿಕೆಯನ್ನು ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮಂಡ್ಯ ಜಿಲ್ಲಾಡಳಿತದಿಂದ ಗೌರವಿಸಲಾಯಿತು. ಸ್ವಾಮೀಜಿಗಳು ಶ್ರೀರಂಗಪಟ್ಟಣ ದಸರಾ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಗಳು, "ನಾಡಿನ ಸಂಸ್ಕೃತಿಯ ಸಂಕೇತವಾಗಿರುವಂತಹ ದಸರಾವು ನಮ್ಮ ಶ್ರೀರಂಗಪಟ್ಟಣದಲ್ಲಿ ನಡೆಯುತ್ತದೆ. ಮೈಸೂರು ದಸರಾದ ರೀತಿಯಲ್ಲಿ ಮುಂಚೆ ಮೂಲವಾಗಿ ಪ್ರಾರಂಭವಾಗಿದ್ದು ನಮ್ಮ ಶ್ರೀರಂಗಪಟ್ಟಣದಲ್ಲಿ. ಇದೇ 9ರಂದು ದಸರಾ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ" ಎಂದರು.
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಅಕ್ಟೋಬರ್ 9ರಂದು ಕಿರಂಗೂರು ಬನ್ನಿಮಂಟಪದಿಂದ ಪಾರಂಪರಿಕ ದಸರಾ ಆಚರಣೆ ಜೊತೆಗೆ ದಸರಾ ಉತ್ಸವ ಹಲವು ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಮೈದಾನ ತಲುಪಲಿದೆ.

ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು
"ನಮ್ಮ ಹಿರಿಯರು ಅತ್ಯುತ್ತಮವಾದ ಸಂಸ್ಕೃತಿಯನ್ನು ನಮ್ಮ ನಾಡಿಗೆ ಬಿಟ್ಟು ಹೋಗಿದ್ದಾರೆ. ಆ ಸಂಸ್ಕೃತಿಯನ್ನು ಮುಂದಿನ ಪರಂಪರೆಗೆ ಬಡಿಸಿ, ಉಣಿಸಿ, ಆಚರಿಸಿಕೊಂಡು, ಉಳಿಸಿಕೊಂಡು ಹೋಗುವಂತದ್ದು ನಮ್ಮ ಪರಂಪರಾಗತ ಸಂಸ್ಕೃತಿ. ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಾಡಿನ ಭಕ್ತಾದಿಗಳು, ಸಮಸ್ತ ಸಾರ್ವಜನಿಕರು ಆಗಮಿಸಿ ಸರ್ಕಾರ ಮತ್ತು ಜಿಲ್ಲಾಡಳಿತ ಹಮ್ಮಿಕೊಂಡಿರುವ ಕ್ರೀಡೆ ಮತ್ತು ಇತರೆ ಮನೋರಂಜನಾ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿ" ಎಂದು ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಅರ್ಥಪೂರ್ಣವಾಗಿ ಆಚರಣೆ
ಸಚಿವ ಡಾ. ಕೆ. ಸಿ. ನಾರಾಯಣ ಗೌಡ ಮಾತನಾಡಿ, "ಮೈಸೂರು ದಸರಾದ ಮೂಲ ನೆಲೆ ಶ್ರೀರಂಗಪಟ್ಟಣ. ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೋನಾದಿಂದ ಶ್ರೀರಂಗಪಟ್ಟಣ ದಸರಾವನ್ನು ಸರಿಯಾಗಿ ಆಚರಿಸಲು ಆಗಿರಲಿಲ್ಲ. ಆದರೆ ಈ ಬಾರಿ ಅರ್ಥಪೂರ್ಣವಾಗಿ ಮತ್ತು ಸಾಂಪ್ರದಾಯಿಕವಾಗಿ ದಸರಾವನ್ನು ಆಚರಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ತಾವುಗಳು ಆಗಮಿಸಿ ದಸರಾವನ್ನು ಉದ್ಘಾಟಿಸಿ, ಜಂಬೂಸವಾರಿಗೆ ಚಾಲನೆ ನೀಡಿ" ಎಂದರು.
"ಮಹಾಮಾರಿ ಕೊರೊನಾ ಕಾರಣದಿಂದ ನಾವು ಈಗಾಗಲೇ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿದ್ದೇವೆ, ಇದು ಮತ್ತೆ ಮಹಾಮಾರಿ ಆಗಮಿಸದಿರಲಿ ಎಂಬ ಉದ್ದೇಶದಿಂದ ವಿಶ್ವಕ್ಕೆ ಒಳಿತಾಗಲಿ ಎಂಬ ಮನದಾಸೆಯಿಂದ ಶ್ರೀ ನಿರ್ಮಲಾನಂದ ಸ್ವಾಮಿಗಳು ದಸರಾವನ್ನು ಉದ್ಘಾಟಿಸಲಿದ್ದಾರೆ" ಎಂದು ಸಚಿವರು ಹೇಳಿದರು.

ಶ್ರೀರಂಗಪಟ್ಟಣ ದಸರಾಕ್ಕೆ ಸಿದ್ಧತೆ
ಅಕ್ಟೊಬರ್ 9 ರಿಂದ 3 ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ದಸರಾ ಉತ್ಸವವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಐತಿಹಾಸಿಕ ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಕಳೆಗಟ್ಟಿಸಲು ವಿದ್ಯುತ್ ದೀಪಾಲಂಕಾರ, ಕಿರಂಗೂರು ಬನ್ನಿಮಂಟಪ ಹಾಗೂ ಶ್ರೀರಂಗಪಟ್ಟಣವನ್ನು ತಳಿರು ತೋರಣಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗುತ್ತಿದೆ. ದಸರಾ ಮೆರವಣಿಗೆ ಸಾಗುವ ಮಾರ್ಗವನ್ನು ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ. ದಸರಾ ಉತ್ಸವದಲ್ಲಿ ಸ್ಪರ್ಧಿಸುವ ಕ್ರೀಡಾಳುಗಳಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.

ವಿವಿಧ ಕ್ರೀಡಾ ಚಟುವಟಿಕೆಗಳು
ಶ್ರೀರಂಗಪಟ್ಟಣ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ಇರಲಿದೆ. ಜಾನಪದ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಕುಸ್ತಿ, ಕಬಡ್ಡಿ ಇನ್ನಿತರ ಕ್ರೀಡೆಗಳನ್ನು ಪುರುಷ ಮತ್ತು ಮಹಿಳೆಯರಿಗೆ ವೈಯಕ್ತಿಕವಾಗಿ ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಗುತ್ತದೆ.
ಸಿರಿಧಾನ್ಯಗಳಲ್ಲಿ ದಸರಾ ಥೀಮ್ ಆಧಾರದ ಮೇಲೆ ಉತ್ತಮವಾದ ಸಿರಿಧಾನ್ಯ ಕಲೆಗಳನ್ನು ರಚಿಸಲಾಗುತ್ತದೆ. ಕೃಷಿಗೆ ಸಂಬಂಧಿಸಿದ ವಿವಿಧ ತಳಿಗಳ ಕುರಿತು ಪ್ರದರ್ಶನ ನಡೆಯಲಿದೆ. ಕೃಷಿ ತಳಿ ಸಂಶೋಧಕರನ್ನು ಆಹ್ವಾನಿಸಿ ತಳಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕಾರ್ಯವೂ ನಡೆಯಲಿದೆ.
ರೇಷ್ಮೆಯ ವಸ್ತು ಪ್ರದರ್ಶನ, ಮೀನುಗಾರಿಕೆಯ ಯೋಜನೆಗಳು, ಅಭಿವೃದ್ಧಿಯ ತಳಿಗಳ ಕುರಿತು ಜನರಿಗೆ ಸಂಪೂರ್ಣ ಮಾಹಿತಿ ದೊರೆಯುವಂತೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.












Click it and Unblock the Notifications