ಕಾವೇರಿ ನೀರು: ಸುಮಲತಾ ಮೇಲೆ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯದ ಬಾಣ
Recommended Video
ಮಂಡ್ಯ, ಜೂನ್ 24: ಕಾವೇರಿ ನದಿ ನೀರು ವಿವಾದ ಬಗೆಹರಿಸುವ ಜವಾಬ್ದಾರಿಯನ್ನು ನಿಖಿಲ್ ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅವರ ಹೆಗಲಿಗೆ ಹೊರಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸಹ ಕಾವೇರಿ ವಿವಾದ ಬಗೆಹರಿಸುವ ಜವಾಬ್ದಾರಿಯನ್ನು ಸುಮಲತಾ ಅವರಿಗೆ ನೀಡಿದ್ದರು.
ಮಂಡ್ಯದ ಮಳವಳ್ಳಿಯಲ್ಲಿ ನಿಧನ ಹೊಂದಿದ ಜೆಡಿಎಸ್ ಕಾರ್ಯಕರ್ತರೊಬ್ಬರ ನಿವಾಸಕ್ಕೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕಾವೇರಿ ವಿವಾದವನ್ನು ಹೊಸ ಸಂಸದೆ ಸುಮಲತಾ ಅವರು ಬಗೆಹರಿಸುತ್ತಾರೆ ಎಂದು ಹೇಳಿದರು.
ನಮ್ಮ ಸಂಸದರು (ಸುಮಲತಾ) ಬಿಜೆಪಿ ಬೆಂಬಲಿತ ಅಭ್ಯರ್ಥಿ, ಅವರಿಗೆ ಬಹಳ ಕಾಂಟ್ಯಾಕ್ಟ್ಸ್ ಇದೆ, ಮೋದಿ ಸಹ ಅವರಿಗೆ ಪರಿಚಿತರು, ಅವರು ಕಾವೇರಿ ವಿವಾದವನ್ನು ಬಗೆಹರಿಸುತ್ತಾರೆ ಬಿಡಿ ಎಂದು ವ್ಯಂಗ್ಯವಾಗಿ ನಿಖಿಲ್ ಹೇಳಿದ್ದಾರೆ.

'ನಾವೆಲ್ಲಾ ಯಾರು ಸ್ವಾಮಿ, ನಾವೆಲ್ಲಾ ಸಣ್ಣವರು, ಜನ ಆರಿಸಿ ಕಳಿಸಿರುವ ಸಂಸದರು ಕಾವೇರಿ ವಿವಾದವನ್ನು ಬಗೆಹರಿಸುತ್ತಾರೆ, ಆ ವಿಶ್ವಾಸ ನನಗೆ ಇದೆ, ನಮ್ಮ ವಿಶ್ವಾಸವನ್ನು ಅವರು ಹುಸಿಗೊಳಿಸಲ್ಲ' ಎಂದು ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಕಾವೇರಿ ವಿಚಾರವಾಗಿ ನಮ್ಮ ಬೆಂಬಲ ಸದಾ ಇರುತ್ತದೆ, ದೇವೇಗೌಡ ಅವರು ದಶಕಗಳಿಂದಲೂ ಕಾವೇರಿ ವಿಚಾರವಾಗಿ ಹೋರಾಡುತ್ತಾ ಬಂದಿದ್ದಾರೆ, ಅದನ್ನೇ ನಾನೂ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ನಲ್ಲಿ ಅಧ್ಯಕ್ಷ ಪಟ್ಟದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ನ ರಾಜ್ಯಾಧ್ಯಕ್ಷ ಪಟ್ಟವಾಗಲಿ, ಯುವ ಘಟಕದ ಪಟ್ಟವಾಗಲಿ ಅಲಂಕರಿಸುವಷ್ಟು ಅನುಭವ ನನಗೆ ಇಲ್ಲ, ನಾನು ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದು ನಿಖಿಲ್ ಹೇಳಿದರು.












Click it and Unblock the Notifications