ನ.1ರಿಂದ ನನ್ನ ರಾಜಕೀಯ ಜಾಗ್ವಾರ್ ಆರಂಭ : ಎಚ್ಡಿಕೆ

ಮಂಡ್ಯ, ಅಕ್ಟೋಬರ್ 12 : 2018ರ ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಜೆಡಿಎಸ್ ಸಂಪೂರ್ಣ ಬಹುಮತದ ಸರ್ಕಾರ ಸ್ಥಾಪನೆಯಾಗಲಿದೆ. ನವೆಂಬರ್ 1ರಿಂದ ನನ್ನ ರಾಜಕೀಯ ಜಾಗ್ವಾರ್ ಆರಂಭ ಅಂತ ಮಂಡ್ಯದ ಗಂಡುಮೆಟ್ಟಿನ ನೆಲದಲ್ಲಿ ಕುಮಾರಸ್ವಾಮಿ ಗುಟುರು ಹಾಕಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಜನಮನ್ನಣೆ ದೊರೆಯುವುದಿಲ್ಲ. ಇದಕ್ಕೆ ರಾಜ್ಯದ ಉತ್ತರ ಕರ್ನಾಟಕ, ಹಳೇ ಮೈಸೂರು ಹಾಗೂ ಹೈದರಾಬಾದ್ ಕರ್ನಾಟಕದಲ್ಲೂ ಮತದಾರರ ಬೆಂಬಲ ಜೆಡಿಎಸ್ ಗೆ ವ್ಯಕ್ತವಾಗಲಿದೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ನಗರದ ಗುರುಶ್ರೀ ಚಿತ್ರಮಂದಿರದಲ್ಲಿ ಬುಧವಾರ ತಮ್ಮ ಪುತ್ರ ನಿಖಿಲ್ ಅಭಿನಯದ ಜಾಗ್ವಾರ್ ಚಿತ್ರ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ, ಕಾವೇರಿ ಸೇರಿದಂತೆ ರಾಜ್ಯದ ಎಲ್ಲ ಸಮಸ್ಯೆಗಳಿಗೂ ಪಕ್ಷದ ನಿಲುವು ಒಂದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದರು. [ವಿಮರ್ಶೆ : ಮಿಂಚಿನ ವೇಗದ 'ಜಾಗ್ವಾರ್' ಚಿಂದಿ ಚಿತ್ರಾನ್ನ]

My Jaguar will begin from November 1 : HD Kumaraswamy

ಕಾವೇರಿಯಾಗಲಿ, ಕೃಷ್ಣೆಯಾಗಲಿ ಒಂದೇ ನಿಲುವು : ರಾಜ್ಯದ ನೆಲ, ಜಲದ ವಿಚಾರವಾಗಿ ಜೆಡಿಎಸ್ ಪಕ್ಷದ ನಿಲುವು ದೃಢವಾಗಿದ್ದು, ಕಾವೇರಿ ವಿಚಾರವಾಗಿ ತೆಗೆದುಕೊಂಡ ಹೋರಾಟದ ಬದ್ಧತೆಯನ್ನು ಮಹದಾಯಿ ನದಿ ವಿಚಾರದಲ್ಲೂ ವ್ಯಕ್ತಪಡಿಸಲಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಹದಾಯಿ ನದಿ ನೀರಿನ ಹಂಚಿಕೆ ಸಂಬಂಧ ಅ.21ರಂದು ಮುಖ್ಯಮಂತ್ರಿಗಳ ಸಭೆಗೆ ತೆರಳುವ ಮುನ್ನ ರಾಜ್ಯದ ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದ ಅವರು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಅ.19ರಂದು ನಡೆಯಲಿರುವ ಸರ್ವಪಕ್ಷ ಸಭೆಗೆ ಆಹ್ವಾನ ಬಂದರೆ ತೆರಳುವುದಾಗಿ ತಿಳಿಸಿದ ಅವರು, ಅಂತಿಮ ಮಾತುಕತೆಯಲ್ಲಿ ರಾಜ್ಯದ ಪರವಾಗಿ ನ್ಯಾಯ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು. [ಅಧ್ಯಯನ ತಂಡದ ಜತೆ ರಮ್ಯಾ, ಅಂಬಿಯಣ್ಣ ಎಲ್ಲಿ?]

ರಾಜಧಾನಿ ಬೆಂಗಳೂರಿನ ಚಾಲುಕ್ಯ ವೃತ್ತದಿಂದ ಹೆಬ್ಬಾಳ ವೃತ್ತದವರೆಗಿನ 6 ಕಿ.ಮೀ. ವಿಸ್ತೀರ್ಣದ ಸ್ಟೀಲ್ ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣಕ್ಕೆ 1800 ಕೋಟಿ ರೂ. ವ್ಯಯಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಕಿ.ಮೀ. ಒಂದಕ್ಕೆ 264 ಕೋಟಿ ರೂ. ವ್ಯಯಿಸಿ ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಮುಂದಾಗಿರುವ ಸರ್ಕಾರ, ಮೂರುವರೆ ವರ್ಷದ ಅವಧಿಯಲ್ಲಿ ಪ್ಯಾಕೇಜ್ ಹೆಸರಿನಲ್ಲಿ ಬೃಹತ್ ಕಂಪನಿಗಳನ್ನು ಪೋಷಿಸಿ ವಸೂಲಿ ಮಾಡುತ್ತಿರುವುದು ಮುಂದಿನ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳ ಚುನಾವಣಾ ನಿಧಿಗಾಗಿಯೇ ಎಂದು ವ್ಯಂಗ್ಯವಾಡಿದರು. [ಮೆಟ್ಟೂರು ಅಣೆಕಟ್ಟಿನ ಪರಿಶೀಲನೆ ನಡೆಸಿದ ಝಾ ತಂಡ]

ಸದರಿ ಕಾಮಗಾರಿ ಸಂಬಂಧ ನಾನು ಮುಖ್ಯಮಂತ್ರಿಯಾಗಿದ್ದಾಗ ಅಂಡರ್‌ಪಾಸ್ ರಸ್ತೆ ನಿರ್ಮಿಸಲು ಕೊರಿಯಾ ಮೂಲದ ಕಂಪನಿ ಮುಂದಾಗಿತ್ತು. ಅದನ್ನು ಕಡೆಗಣಿಸಿ ಸ್ಟೀಲ್ ಬ್ರಿಡ್ಜ್ ನೆಪದಲ್ಲಿ 1800 ಕೋಟಿ ರೂ. ಖರ್ಚು ಮಾಡಲು ಮುಂದಾಗಿರುವುದು ತೆರಿಗೆ ಹಣ ಲೂಟಿ ಮಾಡಲೇ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಅಧ್ಯಕ್ಷ ಬೇಲೂರು ಶಶಿಧರ್ ಹಾಜರಿದ್ದರು.

ಮೊದಲ ವಾರದಲ್ಲೇ 16 ಕೋಟಿ ಗಳಿಕೆ

ನಿಖಿಲ್ ಚೊಚ್ಚಲ ಅಭಿನಯದ ಜಾಗ್ವಾರ್ ಚಿತ್ರಕ್ಕೆ ನಾಡಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ನುರಿತ ಚಲನಚಿತ್ರ ನಟರಿಗೂ ಮೀರಿದ ದಾಖಲೆಯ ಬೆಂಬಲ ರಾಜ್ಯದ ಜನತೆಯಿಂದ ಸಿಕ್ಕಿದೆ. ಬಿಡುಗಡೆಯಾದ ಪ್ರಥಮ ವಾರದಲ್ಲೇ 15ರಿಂದ 16 ಕೋಟಿ ರೂ. ಗಳಿಕೆ ಕಂಡಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದರು. ['ಜಾಗ್ವಾರ್' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ ಗಳಿವು..]

ನಿಖಿಲ್ ನಟಿಸಿರುವ ಪ್ರಥಮ ಚಿತ್ರದಲ್ಲೇ ಅನುಭವಿ ನಟರಿಗಿಂತ ಕಡಿಮೆ ಇಲ್ಲದಂತೆ ನಟಿಸಿದ್ದಾನೆ ಎಂದು ಮಗನಿಗೆ ಶಭಾಸ್ ಗಿರಿ ಕೊಟ್ಟ ಅವರು, ತೆಲುಗು ಭಾಷೆಯಲ್ಲೂ ಚಿತ್ರ ಬಿಡುಗಡೆಯಾಗಿದ್ದು, 4.5 ಕೋಟಿ ರೂ. ಲಾಭಾಂಶ ದೊರೆಯುವ ನಿರೀಕ್ಷೆ ಇದೆ ಎಂದು ಆನಂದತುಂದಿಲರಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಚಿತ್ರ ನಿರ್ಮಿಸಲು ಮುಂದಾಗುತ್ತೇನೆ. ಆ ಮೂಲಕ ಚಿತ್ರರಂಗಕ್ಕೆ ಹೊಸ ಕಲಾವಿದರನ್ನು ಕೊಡುಗೆಯಾಗಿ ನೀಡುವ ವಿಶ್ವಾಸ ವ್ಯಕ್ತಪಡಿಸಿದರು. [ಚೊಚ್ಚಲ ಚಿತ್ರದಲ್ಲೇ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+