ಮೇಲುಕೋಟೆ ದೇವಾಲಯ; ಸಲಾಂ ಆರತಿ ಹೆಸರು ಬದಲು!
ಮಂಡ್ಯ, ಮೇ18: ಮೇಲುಕೋಟೆಯಲ್ಲಿ ಚಾಲ್ತಿಯಲ್ಲಿರುವ ಸಲಾಂ ಆರತಿ ಹೆಸರನ್ನು ಬದಲಾವಣೆ ಮಾಡಲಾಗುತ್ತದೆ. ಮೇಲುಕೋಟೆ ಸ್ಥಾನಿಕರಾದ ಶ್ರೀನಿವಾಸ್ ಸರ್ಕಾರಕ್ಕೆ ಮನವಿ ಮಾಡಿದ್ದ ಹಿನ್ನೆಲೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಸಲಾಂ ಆರತಿ ಹೆಸರು ಸಂಧ್ಯಾ ಆರತಿಯೆಂದು ಬದಲಿಸಲು ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿ ಹಸಿರು ನಿಶಾನೆ ತೋರಿಸಿದರು.
ಮೇಲುಕೋಟೆ ದೇವಾಲಯದಲ್ಲಿ ಪ್ರತಿ ದಿನ ಟಿಪ್ಪು ಸುಲ್ತಾನ್ ಸಲಾಂ ಆರತಿ ನಡೆಯುತ್ತಿತ್ತು. ಕೆಲ ಹಿಂದೂ ಸಂಘಟನೆಗಳು ಸಲಾಂ ಆರತಿಯನ್ನು ವಿರೋಧಿಸಿ, ಪೂಜೆ ಹೆಸರು ಬದಲಾಯಿಸಲು ಒತ್ತಾಯಿಸಿದ್ದವು. ಅದರಂತೆ ದೇಗುಲ ಮಂಡಳಿ ಹೆಸರು ಬದಲಿಸಲು ಅನುಮತಿ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
ಸದ್ಯ ಸಲಾಂ ಆರತಿ ಹೆಸರು ಬದಲಿಸಬಹುದು ಎಂದು ಜಿಲ್ಲಾಧಿಕಾರಿಯಿಂದ ಪತ್ರ ಬಂದಿದೆ. ಮಂಡ್ಯ ಜಿಲ್ಲಾಧಿಕಾರಿ ಅವರು ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದು, ಮುಜರಾಯಿ ಇಲಾಖೆ ಆಯುಕ್ತರಿಂದ ಅಧಿಕೃತ ಆದೇಶ ಬರಬೇಕಿದೆ.

ಮೇಲುಕೋಟೆ ಸ್ಥಾನಿಕರಾದ ಶ್ರೀನಿವಾಸ್ ಸಂಧ್ಯಾರತಿ ಹೆಸರು ಉಳಿಸಿಕೊಂಡು, ಸಲಾಂ ಪದವನ್ನು ಕೈ ಬಿಡಬೇಕು ಎಂದು ಸರ್ಕಾರ ಕೋರಿದರು. ತ್ರಿಕಾಲದಲ್ಲಿಯೂ ದೇವರಿಗೆ ಆರತಿ ಮಾಡುವ ಪದ್ಧತಿ ಎಲ್ಲ ದೇವಾಲಯಗಳಲ್ಲಿಯೂ ಇದೆ.
ಸಂಜೆ ವೇಳೆ ಮೇಲುಕೋಟೆ ದೇವಾಲಯದಲ್ಲಿ ನಡೆಯುವ ಸಂಧ್ಯಾರತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮುಸ್ಲಿಂ ದಾಳಿಕೋರರಿಂದ ದಾಳಿಯಾದ ಸಂದರ್ಭದಲ್ಲಿ ಅಥವಾ ಟಿಪ್ಪುವಿನ ಕಾಲದಲ್ಲಿ ಸಂಧ್ಯಾರತಿಗೆ ಸಲಾಂ ಪದ ಸೇರಿದೆ ಎಂದರು.

ಯಾರ ಆಕ್ಷೇಪಣೆಯೂ ಇಲ್ಲ; ಮೂಲ ಮೂರ್ತಿಗೆ ಆರತಿ ಆಗುವ ಸಂದರ್ಭದಲ್ಲಿ ದೇವಾಲಯದ ಹೊರಗಡೆ ದೀವಟಿಗೆ ಸಲಾಂ ಮಾಡಲಾಗುತ್ತದೆ. ಬಳಿಕ ದೇವಾಲಯ ಗರ್ಭಗುಡಿಯ ಬಳಿಯು ದೀವಟಿಗೆ ಸಲಾಂ ಮಾಡಲಾಗುತ್ತದೆ.
ಚೆಲುವನಾರಾಯಣ ಸ್ವಾಮಿ ಎಲ್ಲಾ ಉತ್ಸವ ಮುಗಿಸಿ ಆಸ್ಥಾನಕ್ಕೆ ಬರುವ ವೇಳೆ ಈ ದೀವಟಿಗೆ ಸಲಾಂ ಮಾಡಲಾಗುತ್ತದೆ. ಸಂಧ್ಯಾರತಿಗೆ ಯಾರ ಆಕ್ಷೇಪಣೆಯೂ ಇಲ್ಲ. ಆದರೆ ಇಲ್ಲಿ ಹೇಳಲಾಗುವ ಸಲಾಂ ಪದಕ್ಕೆ ಎಲ್ಲರ ಆಕ್ಷೇಪಣೆ ಇದೆ. ಸಲಾಂ ಪದ ರದ್ದು ಮಾಡಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಈ ವಿಚಾರವಾಗಿ ಸರ್ಕಾರ ಪರಿಶೀಲನೆ ಮಾಡಬೇಕೆಂದು ಕೋರಿದ್ದರು.












Click it and Unblock the Notifications