ಇನ್ಮುಂದೆ ಮಂಡ್ಯದ ಹೊಸಹೊಳಲು ಕ್ಯಾಷ್ ಲೆಸ್ ಗ್ರಾಮ!
ಮಂಡ್ಯ, ಡಿಸೆಂಬರ್ 22: ನೋಟಿನ ಮೇಲೆಯೇ ಅವಲಂಬಿತರಾಗಿರುವ ಜನರನ್ನು ಡಿಜಿಟಲ್ ಮತ್ತು ಆನ್ ಲೈನ್ ಬ್ಯಾಂಕಿಂಗ್ ನತ್ತ ಕೊಂಡೊಯ್ಯುವ ಪ್ರಕ್ರಿಯೆಗೆ ದೇಶದಾದ್ಯಂತ ಒತ್ತು ನೀಡುತ್ತಿರುವ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮವನ್ನು ಡಿಜಿಟಲ್ ಮತ್ತು ಮೊಬೈಲ್ ಬ್ಯಾಂಕಿಂಗ್ ಗ್ರಾಮವನ್ನಾಗಿಸುವ ಯೋಜನೆಗೆ ಆಯ್ಕೆ ಮಾಡಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಡ್ಯ ಜಿಲ್ಲೆಯ ಚಂದಗಾಲು ಗ್ರಾಮವನ್ನು ಪ್ರಥಮವಾಗಿ ಡಿಜಿಟಲ್ ಗ್ರಾಮವನ್ನಾಗಿಸಿದ್ದು, ಎರಡನೆ ಗ್ರಾಮವಾಗಿ ಹೊಸಹೊಳಲು ಆಯ್ಕೆ ಮಾಡಲಾಗಿದೆ. ಆರ್ ಬಿಐ ಸೂಚನೆ ಮೇರೆಗೆ ಗ್ರಾಮವನ್ನು ಡಿಜಿಟಲ್ ಮಾಡಲು ವಿಜಯಾಬ್ಯಾಂಕ್ ಮುಂದಾಗಿದ್ದು, ಈ ಸಂಬಂಧ ಗ್ರಾಮದಲ್ಲಿ ಅರಿವು ಮೂಡಿಸುತ್ತಿದೆ.[ನೋಟು ನಿಷೇಧ ನಂತರದ 9 ಮಹತ್ವದ ಬದಲಾವಣೆಗಳು!]

ಜನಜಾಗೃತಿ ಮತ್ತು ಪ್ರಚಾರ ರಥ ಗ್ರಾಮದಲ್ಲಿ ಸಂಚರಿಸುತ್ತಿದ್ದು ವಿಜಯಾಬ್ಯಾಂಕ್ ಮಂಡ್ಯ ರೀಜಿನಲ್ ಕಚೇರಿಯ ಮುಖ್ಯ ವ್ಯವಸ್ಥಾಪಕರಾದ ವೆಂಕಟೇಶ್ ಹಾಗೂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಇನ್ನು ವಿಜಯಬ್ಯಾಂಕ್ ನ ಪ್ರತಿನಿಧಿಗಳು ಗ್ರಾಮದ ಮನೆ ಮನೆಗೆ ತೆರಳಿ ಉಳಿತಾಯ ಮಾಡಿಸುವುದು. ಮೊಬೈಲ್ ಮೂಲಕ ಹಣಕಾಸು ವ್ಯವಹಾರಗಳನ್ನು ಕೈಗೊಳ್ಳುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಇಡೀ ಗ್ರಾಮಕ್ಕೆ ವಿಜಯಾಬ್ಯಾಂಕ್ ವತಿಯಿಂದ ಜನವರಿ 7ರಿಂದ ವೈಫೈ ಸೌಲಭ್ಯ ಉಚಿತವಾಗಿ ಕಲ್ಪಿಸಿಕೊಡಲಾಗುತ್ತದೆ. ಎಟಿಎಂ ಕಾರ್ಡ್ ಸೌಲಭ್ಯ, ಕ್ರೆಡಿಟ್ ಕಾರ್ಡ್, ಎಸ್ಎಂಎಸ್ ಸೌಲಭ್ಯ, ಆರ್ ಟಿಜಿಎಸ್ ಮುಂತಾದ ಬ್ಯಾಂಕಿಂಗ್ ಸೌಲಭ್ಯವನ್ನು ಮೊಬೈಲ್ ಮೂಲಕವೇ ಪಡೆಯುವ ಬಗ್ಗೆಯೂ ತರಬೇತಿ ನೀಡುವ ಕಾರ್ಯ ನಡೆಯಲಿದೆ.[ನಿಟ್ಟೆ ಸಹಭಾಗಿತ್ವದಲ್ಲಿ ನಗದುರಹಿತ ಮುನ್ನೂರು ಗ್ರಾಮಕ್ಕೆ ಚಾಲನೆ]

ಹೊಸಹೊಳಲು ಗ್ರಾಮದ ಎಲ್ಲ ಕುಟುಂಬಗಳಿಗೂ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ತೆರೆದು, ಎಟಿಎಂ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು. ಪ್ರಸ್ತುತ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಮೊಬೈಲ್ ನಂಬರ್ ಗಳಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕಿನ ಉಳಿತಾಯ ಖಾತೆಯ ಸಂಖ್ಯೆಯನ್ನು ಜೋಡಿಸಿ ಅನುಕೂಲ ಮಾಡಿಕೊಡಲಿದ್ದಾರೆ.
2017ರ ಜನವರಿ ಅಂತ್ಯದೊಳಗೆ ಅಧಿಕೃತವಾಗಿ ಹೊಸಹೊಳಲು ಗ್ರಾಮವನ್ನು ಸಂಪೂರ್ಣ ಡಿಜಿಟಲ್ ಗ್ರಾಮವನ್ನಾಗಿ ಘೋಷಣೆ ಮಾಡಲಿದ್ದಾರೆ. ಅಲ್ಲದೆ ನಾಗಮಂಗಲ ತಾಲೂಕಿನ ಚುಂಚನಹಳ್ಳಿ, ಮದ್ದೂರಿನ ಚಿಕ್ಕರಸಿನಕೆರೆ, ಮಲ್ಲಕುಪ್ಪೆ, ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮಗಳನ್ನು ಡಿಜಿಟಲ್ ಗ್ರಾಮಗಳನ್ನಾಗಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ.












Click it and Unblock the Notifications