ಮಂಡ್ಯದಲ್ಲಿ ಒಡೆದ ವಿರಿಜಾ ನಾಲೆ: ರೈತರಿಗೆ ಮತ್ತೆ ಸಂಕಷ್ಟ
ಮಂಡ್ಯ, ಸೆಪ್ಟೆಂಬರ್ 7: ವಿರಿಜಾ ನಾಲೆ ಒಡೆದ ಪರಿಣಾಮ ಭತ್ತ ಹಾಗೂ ಕಬ್ಬಿನ ಗದ್ದೆ ಜಲಾವೃತಗೊಂಡು ಭಾರೀ ನಷ್ಟ ಸಂಭವಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದಲ್ಲಿ ನಡೆದಿದೆ.
ಮಳೆ ಸುರಿದ ಪರಿಣಾಮ ನೀರು ಹರಿದು ಬಂದು ಮೇಳಾಪುರ ಗ್ರಾಮದ 35 ಕಿ.ಮೀ.ಯ ವಿರಿಜಾ ನಾಲೆಗೆ ಸೇರಿದೆ. ನೀರಿನ ರಭಸಕ್ಕೆ ನಾಲೆಯ ತಡೆಗೋಡೆಯನ್ನು ಮೀರಿ ಹೆಚ್ಚುವರಿ ನೀರು ಹರಿದಿದೆ. ಇದರಿಂದ ನಾಲೆ ಏರಿಯು ಕೊರತೆಕ್ಕೊಳಗಾಗಿ ಒಡೆದ ಪರಿಣಾಮ ನೀರು ಪಕ್ಕದ ಜಮಿನಿಗೆ ನುಗ್ಗಿದೆ. ಇದರಿಂದ ಸುಮಾರು 50 ಎಕರೆಯಷ್ಟು ಜಮೀನು ಜಲಾವೃತಗೊಂಡಿದೆ. ನೀರಿನಲ್ಲಿ ಸಿಲುಕಿದ ಕಬ್ಬು ಮತ್ತು ಭತ್ತ ಬೆಳೆ ನಾಶವಾಗಿದ್ದು ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ನಾಲೆ ಒಡೆದಿದ್ದರಿಂದ ಬೆಳೆ ಕಳೆದುಕೊಂಡ ರೈತರು ನಾಲೆಯ ಪರಿಶೀಲನೆಗೆ ಆಗಮಿಸಿದ್ದ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ತಮ್ಮಣ್ಣಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಕೆ.ಆರ್.ನಗರದಲ್ಲಿ ನಾಲೆ ಒಡೆದು ಭತ್ತ, ಕಬ್ಬು ನಾಶ
ಈ ಸಂದರ್ಭ ತಮ್ಮ ಆಕ್ರೋಶ ವ್ಯಕ್ತಪಡಿಸಿದ ರೈತರು, ಕಳೆದ ವರ್ಷ ಸರ್ಕಾರ ರೈತರಿಗೆ ಬೆಳೆ ನೀರು ಕೊಡದೆ ನಾಲೆಗಳ ಆಧುನೀಕರಣ ಹೆಸರಿನಲ್ಲಿ ಹಸಿವಿಗೆ ಕೆಡವಿದ್ದರು. ಈ ಬಾರಿ ಬರಗಾಲದ ನಡುವೆಯೂ ರೈತರು ಕಾಮಗಾರಿಗೆ ಅವಕಾಶ ನೀಡಿ ಕಾಲುವೆಗಳ ಅಭಿವೃದ್ಧಿಗೆ ಸಹಕರಿಸಿದರೆ, ಇದೀಗ ಗುಣಮಟ್ಟದ ಕಾಮಗಾರಿ ನಡೆಯದೆ ನಾಲೆ ಒಡೆಯುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ನಾಲೆಗಳ ಎತ್ತರ ಮತ್ತು ಸರಾಗವಾಗಿ ನೀರು ಹರಿಯಲು ಅವಕಾಶ ಮಾಡದೆ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು. ಜತೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ರೈತರ ಮಾತನ್ನು ಸಮಾಧಾನದಿಂದಲೇ ಆಲಿಸಿದ ಅಧಿಕಾರಿ ತಮ್ಮಣ್ಣಗೌಡ ನಾಲೆಯ ಪಕ್ಕದ ಹಳ್ಳದ ಜಾಗ ಒತ್ತುವರಿಯಾಗಿರುವ ಪರಿಣಾಮ ಹಳ್ಳಕ್ಕೆ ಹರಿಯಲು ಸ್ಥಳವಿಲ್ಲದೆ, ಇಂತಹ ಪರಿಸ್ಥಿತಿ ಕಾರಣವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.