ಮಂಡ್ಯ ರಾಜಕಾರಣ : ಬಿಜೆಪಿ ಸೇರಿದ ಕೆ.ಎಸ್.ನಂಜುಂಡೇಗೌಡ
ಮಂಡ್ಯ, ನವೆಂಬರ್ 27 : ರೈತ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಕೆ.ಎಸ್.ನಂಜುಂಡೇಗೌಡ ಬಿಜೆಪಿ ಸೇರಿದ್ದಾರೆ. ಈ ಬೆಳವಣಿಗೆಯಿಂದಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಚುನಾವಣಾ ಕಣ ಕುತೂಹಲ ಮೂಡಿಸಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನ.25ರಂದು ಕೆ.ಎಸ್.ನಂಜುಂಡೇಗೌಡ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 35 ವರ್ಷಗಳ ರೈತ ಸಂಘದ ಜೊತೆಗಿನ ನಂಟನ್ನು ಕಡಿದುಕೊಂಡು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಸಿದ್ಧರಾಗುತ್ತಿದ್ದಾರೆ.
ಸತತ ಆರು ಬಾರಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಕೆ.ಎಸ್.ನಂಜುಂಡೇಗೌಡರು 61ನೇ ವಯಸ್ಸಿನಲ್ಲಿ ಬಿಜೆಪಿ ಸೇರಿ, ಚುನಾವಣೆಗೆ ಸ್ಪರ್ಧಿಸಲಿದ್ದಾರೆ. 2018ರ ಚುನಾವಣೆಗೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.
ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರು ಕೆ.ಎಸ್.ನಂಜುಂಡೇಗೌಡರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರುವ ಮೂಲಕ ನಂಜುಂಡೇಗೌಡ ಅವರು ಹೊಸ ರಾಜಕೀಯ ಹೆಜ್ಜೆ ಇಟ್ಟಿದ್ದಾರೆ. 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರು 2018ರಲ್ಲಿ ಗೆಲುವು ಕಾಣುವರೇ ಕಾದು ನೋಡಬೇಕು?....

ರೈತ ಸಂಘದ ಸುದೀರ್ಘ ಜೀವನ
ಪ್ರೊ.ಎಂ.ಡಿ.ನಂಜುಡಸ್ವಾಮಿ ಸ್ವಾಮಿ ನಾಯಕತ್ವದಲ್ಲಿ ರೈತ ಸಂಘ ಉದಯವಾಯಿತು. 1982ರಲ್ಲಿ ಮಂಡ್ಯದಲ್ಲಿ ರೈತ ಸಂಘ ಸ್ಥಾಪನೆಯಾದಾಗ ಆಗಷ್ಟೇ ಬಿಎಸ್ಸಿ ಪದವಿ ಮುಗಿಸಿದ್ದ ನಂಜುಂಡೇಗೌಡರು ರೈತ ಸಂಘ ಸೇರಿದರು. ನಂತರದ ಸುಧೀರ್ಘ ಅವಧಿಯನ್ನು ಅವರು ರೈತ ಸಂಘದಲ್ಲಿ ಕಳೆದಿದ್ದಾರೆ.

ಆರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ
ಕೆ.ಎಸ್.ನಂಜುಂಡೇಗೌಡರು ಆರು ಬಾರಿ ಚುನಾವಣೆಯನ್ನು ಎದುರಿಸಿ ಸೋಲು ಕಂಡಿದ್ದಾರೆ. 1989, 1994, 1999, 2004, 2008ರ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಯಾಗಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.

2013ರಲ್ಲೂ ಸ್ಪರ್ಧೆ
ರೈತ ಸಂಘದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಕೆ.ಎಸ್.ನಂಜುಂಡೇಗೌಡ ಅವರು 2013ರ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜೆಡಿಎಸ್ನ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಸೋಲು ಅನುಭವಿಸಿದ್ದರು.

1238 ಮತದಲ್ಲಿ ಸೋತಿದ್ದರು
2004ರ ಚುನಾವಣೆಯಲ್ಲಿ 26,000 ಮತಗಳನ್ನು ಪಡೆದಿದ್ದ ಕೆ.ಎಸ್.ನಂಜುಂಡೇಗೌಡರು ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ವಿರುದ್ಧ 1238 ಮತಗಳ ಅಂತದಿಂದ ಸೋಲು ಕಂಡಿದ್ದರು. 2013ರ ಚುನಾವಣೆಯಲ್ಲಿ 15 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಸೋತಿದ್ದರು.

ಕಾವೇರಿ ಹೋರಾಟದಲ್ಲಿ ಮುಂಚೂಣಿ
ರೈತ ಸಂಘದ ಮುಖಂಡರಾಗಿ ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಕಾವೇರಿ ಹೋರಾಟದಲ್ಲಿ ಕೆ.ಎಸ್.ನಂಜುಂಡೇಗೌಡ ಅವರು ಮುಂಚೂಣಿಯಲ್ಲಿದ್ದರು. ಸರಳವಾಗಿ ವಿವಾಹವಾಗಿರುವ ಇವರು ಜಿಲ್ಲೆಯಲ್ಲಿ ಸರಳವಾಗಿ ನಡೆಯುವ ವಿವಾಹದ ಪೌರೋಹಿತ್ಯ ವಹಿಸಿದ್ದಾರೆ.











Click it and Unblock the Notifications