ಬಜೆಟ್ ನಲ್ಲಿ ಸಾಲಮನ್ನಾ ಮಾಡದಿದ್ದಕ್ಕೆ ನೊಂದು ರೈತ ಆತ್ಮಹತ್ಯೆ
ಮಂಡ್ಯ, ಮಾರ್ಚ್. 15 : 2017ರ ರಾಜ್ಯ ಬಜೆಟ್ ನಲ್ಲಿ ಸಾಲಮನ್ನಾ ಮಾಡದ್ದರಿಂದ ನೊಂದ ರೈತನೊಬ್ಬ ಜಮೀನಿನ ಬೇಲಿಗೆ ಹಾಕಿದ್ದ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಬಳಿಯ ನಾಟನಹಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ನಾಟನಹಳ್ಳಿ ಗ್ರಾಮದ ರೈತ ಚೆಲುವೇಗೌಡ(68) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಸುಮಾರು ಮೂರೂವರೆ ಎಕರೆ ಜಮೀನು ಹೊಂದಿದ್ದು, ಈ ಜಮೀನಿನಲ್ಲಿ ಕೃಷಿ ಮಾಡುವ ಸಲುವಾಗಿ ಕೆ.ಆರ್.ಪೇಟೆ ಪಿಎಲ್ ಡಿ ಬ್ಯಾಂಕ್ನಲ್ಲಿ 1ಲಕ್ಷ ರು ಹಾಗೂ ಲಕ್ಷಾಂತರ ರು. ಕೈಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಚೆಲುವೇಗೌಡ ಇದ್ದರು.
ಆದರೆ, ಸಾಲ ಮನ್ನಾ ಮಾಡುವುದಿಲ್ಲ ಎಂಬುವುದು ತಿಳಿಯುತ್ತಿದ್ದಂತೆಯೇ ತನ್ನ ಜಮೀನ ಸುತ್ತ ಹಾಕಿದ್ದ ಬೇಲಿಗೆ ಬೆಂಕಿ ಅಚ್ಚಿ ಅದರಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಗಿರೀಶ್ ಅವರು ಅಗ್ನಿಶಾಮಕ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲೇ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದ ರೈತ ಚೆಲುವೇಗೌಡ ಸಾವನ್ನಪ್ಪಿದ್ದರು
ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂದು ನಿರೀಕ್ಷೆಯಲ್ಲಿದ್ದರು. ಆದರೆ, ಸಾಲ ಮನ್ನಾ ಮಾಡಲಿಲ್ಲ ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರೈತ ಹೆಂಡತಿ ಪಾರ್ವತಮ್ಮ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.