ಕಾವೇರಿ ಕಿಚ್ಚು: ಮಂಡ್ಯದಲ್ಲಿ ಹೋರಾಟಕ್ಕೆ ಸಾಹಿತಿಗಳು, ಕಲಾವಿದರ ಸಾಥ್
ಮಂಡ್ಯ, ಸೆಪ್ಟೆಂಬರ್ 22: ತಮಿಳುನಾಡಿಗೆ ನೀರು ಹರಿಸುವುದಕ್ಕೆ ಹಾಗೂ ನೀರು ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ವಿರುದ್ಧ ಗುರುವಾರವೂ ನಗರದಲ್ಲಿ ಧರಣಿ ಮುಂದುವರಿಯಿತು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು, ಕಲಾವಿದರು, ಮೈಸೂರು ರಂಗಾಯಣ ಕಲಾವಿದರು, ಕಲಾವಿದರ ವೇದಿಕೆ, ಹವ್ಯಾಸಿ ರಂಗ ತಂಡ ಸೇರಿದಂತೆ ಹಲವರು ಕಾವೇರಿ ಬೆಂಬಲ ಸೂಚಿಸಿದರು.[ಸಿದ್ದರಾಮಯ್ಯ ಅವರಿಗೆ ನಾಲ್ಕು ಸಲಹೆ ನೀಡಿದ ಎಸ್ಸೆಂ ಕೃಷ್ಣ]
ಸಾಹಿತಿ ಡಾ. ಮರುಳಸಿದ್ದಪ್ಪ ಮಾತನಾಡಿ, ಒಕ್ಕೂಟ ವ್ಯವಸ್ಥೆ ಎಂದರೆ ಎಲ್ಲ ರಾಜ್ಯ, ಭಾಷೆಗಳನ್ನು ಸಮಾನ ದೃಷ್ಟಿಯಿಂದ ನೋಡುವಂತಹುದು. ಆದರೆ ಒಕ್ಕೂಟ ವ್ಯವಸ್ಥೆಯನ್ನು ಯಾರು ಉಳಿಸಬೇಕು ಎಂಬ ಪ್ರಶ್ನೆ ಎದುರಾಗಿದೆ ಎಂದರು.
ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬಂದಾಗ ರಾಷ್ಟ್ರದ ಮುಖ್ಯಸ್ಥರಾಗಿರುವವರು ಮಧ್ಯ ಪ್ರವೇಶ ಮಾಡಿ ಭಿನ್ನಾಭಿಪ್ರಾಯವನ್ನು ದೂರ ಮಾಡಬೇಕು. ಆದರೆ ಜವಾಬ್ದಾರಿಯನ್ನು ತೋರಿಸಬೇಕಾದ ಮನೆಯ ಯಜಮಾನ ನಾಯಕತ್ವ ವಹಿಸಲು ವಿಫಲರಾಗಿದ್ದಾರೆ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.[ದಯಾಮರಣ ಕೋರಿದ ಹೊಸಹಳ್ಳಿ ಬಿಜೆಪಿ ಮುಖಂಡ!]
ಕಾವೇರಿಗಾಗಿ ಕಲಾವಿದರು
ಸಾಹಿತಿ ಕಾಳೇಗೌಡ ನಾಗವಾರ, ಮೈಸೂರು ರಂಗಾಯಣ ನಿರ್ದೇಶಕ ಎಚ್. ಜನಾರ್ದನ (ಜನ್ನಿ), ಮುಖ್ಯಮಂತ್ರಿ ಚಂದ್ರು, ಡಾ.ಕೆ.ಮರಳಸಿದ್ದಪ್ಪ, ಪ್ರೊ.ಜಿ.ಕೆ.ಗೋವಿಂದರಾವ್, ಡಾ.ವಿಜಯಮ್ಮ, ಡಾ. ವಸುಂಧರ ಭೂಪತಿ, ಚಂಪಾ, ಡಾ.ಬಿ.ಟಿ.ಲಲಿತಾ ನಾಯಕ್, ಡಾ. ನಲ್ಲೂರು ಪ್ರಸಾದ್ ಸೇರಿದಂತೆ 35ಕ್ಕೂ ಹೆಚ್ಚು ಮಂದಿ ಬಸ್ ನಲ್ಲಿ ಬಂದು ಧರಣಿಯಲ್ಲಿ ಪಾಲ್ಗೊಂಡರು.
ಎಕರೆಗೆ 50 ಸಾವಿರ ಪರಿಹಾರ
ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಅಪ್ಪಾಜಿಗೌಡ ನೇತೃತ್ವದಲ್ಲಿ ಧರಣಿಯಲ್ಲಿ ಪಾಲ್ಗೊಂಡರು. ಈಗಾಗಲೇ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರನ್ನು ಹರಿಸುವ ಮೂಲಕ ರೈತರ ಹಿತ ಬಲಿಕೊಟ್ಟಾಗಿದೆ. ಇನ್ನು ಉಳಿದಿರುವುದು ಕಾವೇರಿ ಜಲಾನಯನ ಪ್ರಾಂತ್ಯದಲ್ಲಿ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿಗೆ ಕಾವೇರಿ ಬಳುವಳಿ
ಬರಿದಾಗದಿರಲಿ ಕಾವೇರಿ ಜಲ ಎಂದು ಚಿತ್ರ ರಚಿಸುವ ಮೂಲಕ ತೂಬಿನಕೆರೆ ಗೋವಿಂದು ಅವರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕಾವೇರಿ ಹೋರಾಟ ಬೆಂಬಲಿಸಿ ಕ್ರಾಂತಿ ಯುವ ವೇದಿಕೆ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಿಟ್ಟು ಇನ್ನಾದರೂ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕಾನೂನು ಭಂಗ ಹೋರಾಟ
ಕಾನೂನನ್ನು ಪರಿಪಾಲನೆ ಮಾಡುವುದು ಅಗತ್ಯ. ಆದರೆ ಅನ್ಯಾಯದ ಕಾನೂನು ಬಂದಲ್ಲಿ ಅದನ್ನು ಭಂಗ ಮಾಡುವ ಹೋರಾಟವನ್ನೂ ರೂಪಿಸುವುದು ಅಗತ್ಯ. ಸುಪ್ರೀಂ ಕೋರ್ಟ್ ಉದ್ದಟತನ, ನ್ಯಾಯಾಂಗ ದೌರ್ಜನ್ಯ ನಡೆಸುತ್ತಿದೆ. ಇದು ಸರಿಯಾದ ನಿರ್ಧಾರವಲ್ಲ. ಒಕ್ಕೂಟದ ವ್ಯವಸ್ಥೆಯೊಳಗೆ ರಾಜ್ಯ-ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಎರಡೂ ಸಂಸ್ಥೆಗಳು ನ್ಯಾಯ ಒದಗಿಸುವ ದಿಟ್ಟತನ ತೋರಬೇಕು ಎಂದು ಎಂದು ಸಾಹಿತಿ ಡಾ. ಚಂದ್ರಶೇಖರ ಪಾಟೀಲ (ಚಂಪಾ) ಅಭಿಪ್ರಾಯ ಪಟ್ಟರು.
ಕಾನೂನು ಕತ್ತೆ
ಕಾನೂನು ಒಂದು ಕತ್ತೆ. ಕತ್ತೆಗೆ ಕೇವಲ ಒದೆಯಲು ಮಾತ್ರ ಗೊತ್ತೇ ವಿನಾ ರಕ್ಷಣೆ ಮಾಡಲು ಆಗಲ್ಲ. ಆ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡುತ್ತಿದೆ. ರಕ್ಷಣೆ ಮಾಡಬೇಕಾದವರು ಒದೆಯುವ ಯತ್ನ ಮಾಡುತ್ತಿದ್ದಾರೆ ಎಂದು ಸಾಹಿತಿ ಮರುಳಸಿದ್ದಪ್ಪ ಟೀಕಿಸಿದರು.
ಟಿಕೆಟ್ ತಗಳಲ್ಲ
ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಗುರುವಾರದಿಂದ ಅಸಹಕಾರ ಚಳವಳಿ ಆರಂಭಿಸಿದ್ದು, ಸಾರಿಗೆ ನಿಗಮದ ಬಸ್ ನಲ್ಲಿ ಹೋರಾಟಗಾರರು ಹಣ ನೀಡದೆ ಪ್ರಯಾಣಿಸಿದರು.
ಮಂಡ್ಯದಿಂದ ಶ್ರೀರಂಗಪಟ್ಟಣಕ್ಕೆ ನಾಲ್ಕು ಬಸ್ ಗಳಲ್ಲಿ ತೆರಳಿದ ಹೋರಾಟಗಾರರು ಹಣ ನೀಡಲಿಲ್ಲ.
ಗುಡುಗಿದ ಮಾದೇಗೌಡ
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ, ಕಾವೇರಿ ನೀರು ನಿರ್ವಹಣಾ ಮಂಡಳಿ ರೂಪಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಸರ್ಕಾರಿ ಕಚೇರಿಗಳಿಗೆ ತೆರಳಿ ಬಾಗಿಲು ಮುಚ್ಚಿಸಿದರು.
ರಸ್ತೆಗಿಳಿದ ಸಂಗೀತ ನಿರ್ದೇಶಕ
ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿದರು.
ವಾಟಾಳ್, ಸಾರಾ, ಪ್ರವೀಣ್ ಶೆಟ್ಟಿ
ಮಂಡ್ಯದಲ್ಲಿ ನಡೆಯುತ್ತಿರುವ ಧರಣಿ ಬೆಂಬಲಿಸಿ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಪ್ರವೀಣ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.