ಮಂಡ್ಯ: ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ, 8 ಜನರಿಗೆ ಗಾಯ
ಮಂಡ್ಯ, ಅಕ್ಟೋಬರ್ 5: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಎರಡು ಗುಂಪುಗಳ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡ ಪರಿಣಾಮ ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಧಿಕಾರ, ಹಣದ ಕಾರಣಕ್ಕೆ ಸಿದ್ದರಾಮಯ್ಯರಿಂದ ಇಂಥ ಮಾತು: ಎಚ್ ಡಿಡಿ
ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆಯಲ್ಲಿ ತಾಪಂ ಸದಸ್ಯ ಬಿ.ಎನ್.ದಿನೇಶ್, ಸಹೋದರ ಪುನೀತ್, ಅವರ ತಾಯಿ ಗ್ರಾ.ಪಂ.ಸದಸ್ಯೆ ಮಂಜಮ್ಮ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ನಾರಾಯಣ ಗೌಡ ವರ್ಸಸ್ ಬಿ.ಎನ್.ದಿನೇಶ್
ಶಾಸಕ ನಾರಾಯಣಗೌಡ ಅವರು ಬುಧವಾರ ಬೆಳಿಗ್ಗೆ ಬಿಲ್ಲೇನಹಳ್ಳಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಾಗೂ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಬೇಕಾಗಿತ್ತು. ಈ ಕಾರ್ಯಕ್ರಮಕ್ಕೆ ಶಾಸಕ ನಾರಾಯಣಗೌಡ ಅವರು ತಮ್ಮದೇ ಪಕ್ಷದ ತಾಲೂಕು ಪಂಚಾಯಿತಿ ಸದಸ್ಯ ಬಿ.ಎನ್.ದಿನೇಶ್ ಅವರನ್ನು ಆಹ್ವಾನಿಸಿರಲಿಲ್ಲಿ.
ಆಕ್ರೋಶಕ್ಕೆ ಕಾರಣವಾದ ಕುಮಾರ್ ಸೇರ್ಪಡೆ
ಜತೆಗೆ ಇದೇ ಸಂದರ್ಭದಲ್ಲಿ ತಾ.ಪಂ.ಸದಸ್ಯ ಬಿ.ಎನ್.ದಿನೇಶ್ ಅವರ ವಿರುದ್ಧ ಪರ್ಯಾಯ ನಾಯಕತ್ವವನ್ನು ಗ್ರಾಮದಲ್ಲಿ ಹುಟ್ಟು ಹಾಕಲು ಕಾಂಗ್ರೆಸ್ ಪಕ್ಷದ ಮಾಜಿ ತಾಪಂ ಸದಸ್ಯ ಬಿ.ಆರ್.ಕುಮಾರ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು ಎನ್ನಲಾಗಿದೆ.
ಪರ ವಿರೋಧ ಗುಂಪುಗಳ ಘರ್ಷಣೆ
ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಸಕರ ಪರ ಮತ್ತು ತಾ.ಪಂ.ಸದಸ್ಯ ದಿನೇಶ್ ಪರ ಎರಡು ಗುಂಪುಗಳು ಸೃಷ್ಠಿಯಾಗಿ ಇದು ಗ್ರಾಮದಲ್ಲಿ ಗುಂಪು ಗರ್ಷಣೆಗೆ ಕಾರಣವಾಗಿದೆ. ಮಧ್ಯಾಹ್ನದವರೆಗೆ ಈ ಕುರಿತು ಯಾವುದೇ ಜಟಾಪಟಿಗಳು ನಡೆದಿರಲಿಲ್ಲ. ಆದರೆ ಸಂಜೆ 4.30ರ ವೇಳೆ ಶಾಸಕರ ಬೆಂಬಲಿಗರೆನ್ನಲಾದ ಕೆಲವು ಯುವಕರ ಗುಂಪು ತಾಲೂಕು ಪಂಚಾಯಿತಿ ಸದಸ್ಯ ಬಿ.ಎನ್.ದಿನೇಶ್ ಅವರ ಮನೆಗೆ ದಾಳಿ ನಡೆಸಿದೆ.
ಮನೆಯ ಬಾಗಿಲು, ಕಿಟಕಿ ಗಾಜುಗಳನ್ನು ಈ ಗುಂಪು ಜಖಂಗೊಳಿಸಿದೆ. ಅಲ್ಲದೆ, ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಪುಡಿಪುಡಿ ಮಾಡಿದೆ. ಇದರಿಂದ ತಾ.ಪಂ.ಸದಸ್ಯ ಬಿ.ಎನ್.ದಿನೇಶ್, ಸಹೋದರ ಪುನೀತ್, ತಾಯಿ ಮಂಜಮ್ಮ ಸೇರಿದಂತೆ ಸುಮಾರು ಎಂಟು ಮಂದಿಗೆ ಗಾಯಗಳಾಗಿವೆ.
ಸ್ಥಳದಲ್ಲಿ ಬಿಗಿ ಬಂದೋಬಸ್ತ್
ಗ್ರಾಮದಲ್ಲಿ ಘರ್ಷಣೆ ನಡೆಯುತ್ತಿರುವ ವಿಚಾರ ತಿಳಿದು ಸಿಪಿಐ ವೆಂಕಟೇಶಯ್ಯ ನೇತೃತ್ವದ ಪೊಲೀಸರ ತಂಡವು ಬಿಲ್ಲೇನಹಳ್ಳಿ ಗ್ರಾಮಕ್ಕೆ ತೆರಳಿ ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ ಶಾಸಕ ನಾರಾಯಣಗೌಡ ಅವರು ಯುವಕರಿಗೆ ಪ್ರಚೋದನೆ ನೀಡಿದ್ದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.