ಮಂಡ್ಯ; ಮನ್ಮುಲ್ ಕಲಬೆರಕೆ ಪ್ರಕರಣ, ಸಿಐಡಿ ತನಿಖೆಗೆ ಆದೇಶ
ಮಂಡ್ಯ, ಜೂನ್ 30; ಕರ್ನಾಟಕ ಸರ್ಕಾರ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಮನ್ಮುಲ್) ಹಗರಣದ ಸಿಐಡಿ ತನಿಖೆಗೆ ಆದೇಶ ಹೊರಡಿಸಿದೆ. ಹಳ್ಳಿಗಳಿಂದ ಹಾಲನ್ನು ತುಂಬಿಕೊಂಡು ಬರುವಾಗ ನೀರನ್ನು ಮಿಶ್ರಣ ಮಾಡಿಕೊಂಡು ಬರುವುದು ಮೇ ತಿಂಗಳಿನಲ್ಲಿ ಬೆಳಕಿಗೆ ಬಂದಿತ್ತು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೂನ್ 14ರಂದು "ಹಗರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಈ ಕುರಿತು ಸಿಐಡಿ ತನಿಖೆಗೆ ವಹಿಸಲು ತೀರ್ಮಾನ ಮಾಡಲಾಗಿದೆ" ಎಂದು ಹೇಳಿದ್ದರು.
ಬುಧವಾರ ಸರ್ಕಾರದ ಒಳಾಡಳಿತ ಇಲಾಖೆ ಉಪ ಕಾರ್ಯದರ್ಶಿ ಬಿ. ಎಸ್. ನಾಗರತ್ನಮ್ಮ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಿಐಡಿ ತಂಡವು ಈ ಪ್ರಕರಣದ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು, ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಪ್ರಕರಣವು ಗಂಭೀರ ಹಾಗೂ ಸೂಕ್ಷ್ಮ ಸ್ವರೂಪದ್ದಾಗಿದೆ. ಪಾರದರ್ಶಕವಾದ ಹಾಗೂ ತೀವ್ರತೆರನಾದ ತನಿಖೆ ನಡೆಸುವುದು ಅಗತ್ಯ ಇರುವುದರಿಂದ ಸಿಐಡಿ ತನಿಖೆ ನಡೆಸುವುದು ಸೂಕ್ತವೆಂದು, ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸುವಂತೆ ಸಹಕಾರ ಇಲಾಖೆ ಕೋರಿದ್ದು, ಅದರ ಅನ್ವಯ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಬುಧವಾರ ಆದೇಶ ಹೊರಡಿಸಿದೆ.
ಏನಿದು ಹಗರಣ?; ಮಂಡ್ಯ ಹಾಲು ಒಕ್ಕೂಟದಲ್ಲಿ ನೀರು ಮಿಶ್ರಿತ ಹಾಲು ಸರಬರಾಜು ಪ್ರಕರಣ ಮೇ ತಿಂಗಳಿನಲ್ಲಿ ಬೆಳಕಿಗೆ ಬಂದಿತ್ತು. ಹಳ್ಳಿಗಳಿಂದ ಹಾಲನ್ನು ತುಂಬಿಕೊಂಡು ಬರುವಾಗ ಅಪಾರ ಪ್ರಮಾಣದ ನೀರನ್ನು ಮಿಶ್ರಣ ಮಾಡಿಕೊಂಡು ಬಂದು ಒಕ್ಕೂಟಕ್ಕೆ ನಷ್ಟ ಉಂಟು ಮಾಡಲಾಗಿತ್ತು.
ಈ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಒಕ್ಕೂಟಕ್ಕೆ ಭೇಟಿ ನೀಡಿದ್ದರು. 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಆದರೆ ಲಾರಿ ಚಾಲಕನೊಬ್ಬನನ್ನು ಬಂಧಿಸಿರುವುದು ಬಿಟ್ಟರೆ ಹೆಚ್ಚಿನ ಬೆಳವಣಿಗೆ ನಡೆದಿರಲಿಲ್ಲ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿ ಮಂಡ್ಯ ಹಾಲು ಒಕ್ಕೂಟದ ಕಚೇರಿ ಇದೆ. ಪ್ರತಿದಿನ ಸುಮಾರು 9.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಇಲ್ಲಿನ ಆಡಳಿತ ಜೆಡಿಎಸ್ ಪಕ್ಷದ ವಶದಲ್ಲಿದೆ. ಹಗರಣ ಬೆಳಕಿಗೆ ಬಂದ ನಂತರ ರಾಜಕೀಯ ನಾಯಕರ ನಡುವೆ ವಾಗ್ಯುದ್ಧಗಳು ನಡೆದಿದ್ದವು.












Click it and Unblock the Notifications