ಮಂಡ್ಯದಲ್ಲಿ ಪ್ರೇಕ್ಷಕರ ಮೈಜುಮ್ಮೆನಿಸಿದ ಜೋಡೆತ್ತಿನ ಓಟದ ಸ್ಪರ್ಧೆ
ಮಂಡ್ಯ, ಡಿಸೆಬರ್.02:ಹೋ...ಹೊಯ್ಯ... ಎನ್ನುತ್ತಾ ಚಾಟಿ ಬೀಸುತ್ತಾ ವೇಗವಾಗಿ ಗಾಡಿ ಓಡಿಸುತ್ತಾ ತಾವೇ ಗೆಲ್ಲಬೇಕೆಂಬ ಹುಮ್ಮಸ್ಸಿನಲ್ಲಿದ್ದ ಸ್ಪರ್ಧಿಗಳು, ಶಿಳ್ಳೆ-ಕೇಕೆಯೊಂದಿಗೆ ಹುರಿದುಂಬಿಸುತ್ತಿದ್ದ ಪ್ರೇಕ್ಷಕರು. ಇದು ಮಂಡ್ಯ ಜಿಲ್ಲೆಯ ಶ್ರೀ ವಿನಾಯಕ ಮಿತ್ರ ಬಳಗ, ಹೊಸಹಳ್ಳಿ ಮತ್ತು ರಾಮನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಹಸು ಹಾಗೂ ಜೋಡೆತ್ತಿನ ಓಟದ ಸ್ಪರ್ಧೆಯಲ್ಲಿ ಕಂಡು ಬಂದ ರೋಚಕ ದೃಶ್ಯಗಳು..
ಕಾರು, ಬೈಕ್ ರೇಸ್ಗಳೇ ಜನಪ್ರಿಯವಾಗುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆದ ಈ ಜೋಡೆತ್ತಿನ ಸ್ಪರ್ಧೆ ಪ್ರೇಕ್ಷಕರಿಗೆ ಮುದ ನೀಡುವುದರೊಂದಿಗೆ ಮೈನವಿರೇಳಿಸುವಂತೆ ಮಾಡಿತು. ಗ್ರಾಮಗಳಲ್ಲದೆ, ಸುತ್ತಮುತ್ತಲಿನ ಊರುಗಳ ಕ್ರೀಡಾಪ್ರೇಮಿಗಳು ನೆರೆಯುವುದರೊಂದಿಗೆ ಸ್ಪರ್ಧೆಗೆ ಕಳೆಕಟ್ಟಿದರು.
ಸಾಮಾನ್ಯವಾಗಿ ಸದಾ ಜಮೀನಿನ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ಮಂದಿ ಈ ಸ್ಪರ್ಧೆಯನ್ನು ವೀಕ್ಷಿಸುವ ಸಲುವಾಗಿಯೇ ಬಂದಿದ್ದರು. ಇನ್ನೊಂದೆಡೆ ತಮ್ಮ ಎತ್ತಿನ ಗಾಡಿಯೊಂದಿಗೆ ಬಂದ ಸ್ಪರ್ಧಿಗಳು ತಾವೇ ಗೆಲ್ಲಬೇಕೆಂದು ಪಣತೊಟ್ಟು ನಿಂತಿದ್ದರೆ ಸ್ಪರ್ಧೆ ಆರಂಭವಾಗುತ್ತಿದ್ದಂತೆಯೇ ಎತ್ತುಗಳನ್ನು ಓಡಿಸಲಾರಂಭಿಸಿದರು.

ಎತ್ತುಗಳು ಧೂಳು ಎಬ್ಬಿಸುತ್ತಾ ಓಡುತ್ತಿದ್ದರೆ, ನೆರೆದಿದ್ದವರು ತಮ್ಮ ಪರವಾದ ಎತ್ತಿನ ಗಾಡಿಗಳನ್ನು ಶಿಳ್ಳೆ, ಚಪ್ಪಾಳೆಯೊಂದಿಗೆ ಕೇಕೆ ಹಾಕುತ್ತಾ ಹುರಿದುಂಬಿಸುತ್ತಿದ್ದರು. ಇನ್ನು ಸ್ಪರ್ಧೆಗೆ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಅವರು ಚಾಲನೆ ನೀಡಿ ಮಾತನಾಡಿ ಪಶು ಸಂಪತ್ತು ರೈತರ ಜೀವನಾಡಿ. ಹಸು, ಎತ್ತುಗಳು ಇಲ್ಲದೆ ರೈತರ ಜೀವನ ಪರಿಪೂರ್ಣವಾಗುವುದಿಲ್ಲ.
ರೈತನ ಬದುಕಿನ ಪ್ರತಿಯೊಂದು ಕ್ಷಣಗಳಲ್ಲೂ ಪಶು ಸಂಪತ್ತು ಬೆಸೆದುಕೊಂಡಿದೆ ಎಂದು ಹೇಳಿದರಲ್ಲದೆ, ರೈತರು ತಮ್ಮ ಕೃಷಿ ಚಟುವಟಿಕೆ, ಜೀವನ ನಡೆಸಲು ಹಾಲು, ಬೆಣ್ಣೆ, ಮೊಸರು ಇತ್ಯಾದಿಗಳನ್ನು ಪಡೆಯುವುದರಲ್ಲೇ ಪೂಜನೀಯ ಭಾವದಿಂದ ಪಶುಗಳನ್ನು ಕಾಣುವಂತಾಗಬೇಕೆಂದರು.

ಯುವಜನತೆ ಎತ್ತಿನಗಾಡಿ ಓಟದ ಮೂಲಕ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.











Click it and Unblock the Notifications