ತ.ನಾಡಿಗೆ ನೀರು ಹರಿಸಲು ಹೇಳಿದ್ದು ನಾನೇ : ದೇವೇಗೌಡ
ಮಂಡ್ಯ, ಸೆಪ್ಟೆಂಬರ್ 11 : ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಹೇಳಿದ್ದು ನಾನೇ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಾಜ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕೃಷ್ಣರಾಜ ಸಾಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಕಾವೇರಿ ಅಂತಿಮ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯು ಅ.18ರಂದು ಸುಪ್ರೀಂ ಕೋರ್ಟ್ನಲ್ಲಿ ಬರಲಿದ್ದು, ಅಲ್ಲಿ ನಾವು ಸಮರ್ಥವಾಗಿ ವಾದ ಮಂಡಿಸಬೇಕಾದರೆ ತಮಿಳುನಾಡಿಗೆ ನೀರು ಹರಿಸಬೇಕಾಗಿತ್ತು ಎಂದರು.
ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲಂಘನೆ ಮಾಡಿದ್ದರೆ ಕಾವೇರಿ ಹೈ ತೀರ್ಪಿನಲ್ಲಿ ವಾದ ಮಂಡಿಸಲು ಸಮಸ್ಯೆಯಾಗುತ್ತಿತ್ತು. ಕಾವೇರಿ ವಿವಾದದಲ್ಲಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬೇಕಾದರೆ ಅ.18ರ ಹೈ ತೀರ್ಪಿನಲ್ಲಿ ನಾವು ಗೆಲುವು ಸಾಧಿಸಬೇಕು. ಹಾಗಾಗಿ ಸರ್ಕಾರ ರಾಜ್ಯದ ನೀರಿನ ಸ್ಥಿತಿಗತಿ ಬಗ್ಗೆ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. [ದೇವೇಗೌಡರಿಂದ ಅಣೆಕಟ್ಟುಗಳ ವೈಮಾನಿಕ ಸಮೀಕ್ಷೆ ಆರಂಭ]
ಚರ್ಚೆ ಅನವಶ್ಯಕ : ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಬಗ್ಗೆ ಚರ್ಚೆ ಬೇಡ. ಮೂವರು ನ್ಯಾಯಾಧೀಶರು ಸ್ವತಂತ್ರ ಭಾರತದಲ್ಲಿ ತೀರ್ಪು ಕೊಟ್ಟಿದ್ದಾರೆ. ಆ ಬಗ್ಗೆ ಅನವಶ್ಯಕ ಚರ್ಚಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ರೈತರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವರಿಸಿದ್ದೇನೆ. ನಾನು ಇನ್ನೊಬ್ಬರ ದೂರೋದಕ್ಕೆ ಇಲ್ಲಿಗೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಆರೋಪ ಮಾಡುವುದಿಲ್ಲ ಎಂದು ಹೇಳಿದರು. [ಟ್ವಿಟ್ಟರ್ ನಲ್ಲಿ WeLoveKarnataka ಟ್ರೆಂಡ್ ಆಗಿತ್ತೇಕೆ?]
ಮಂಡ್ಯ ಜಿಲ್ಲೆಯಲ್ಲಿ ಪ್ರಸ್ತುತ ಬಿತ್ತನೆ ಮಾಡಿರುವುದನ್ನು ಉಳಿಸಬೇಕು. ಇನ್ನೂ ಉಳಿದ ಕಡೆ ಬಿತ್ತನೆಯಾಗಿಲ್ಲ. ಬೆಂಗಳೂರು ಮತ್ತು ಮಂಡ್ಯಕ್ಕೂ ಕುಡಿಯಲು ನೀರು ಕೊಡಬೇಕು. ಇಲ್ಲೇ ಸಾಕಷ್ಟು ಸಮಸ್ಯೆ ಇದೆ ಎಂದರು.
ನಾನು ರಾಜಕೀಯ ಮಾಡಲು ಬಂದಿಲ್ಲ, ರೈತರನ್ನು ಉಳಿಸಲು ಬಂದಿದ್ದೇನೆ. ಬೆಳೆಗೆ ನೀರು ಸಿಗದೆ ರೈತರು ಸತ್ತರೆ ಸರ್ಕಾರ ಪರಿಹಾರ ಕೊಡಬೇಕು ಎಂದ ಅವರು, ರೈತರು ಹೋರಾಟವನ್ನು ಶಾಂತಿಯುತವಾಗಿ ಮಾಡಿ ಎಂದು ಕೋರಿದರು.
ಇಲ್ಲಿ ನಮ್ಮ ತಿಥಿ ಆಗ್ತಿದೆ : ಕಾಯಿ ಹೊಡೆಯೋದು, ಜಯಲಲಿತಾ ತಿಥಿ ಮಾಡೋದಲ್ಲ. ಇಲ್ಲಿ ನಮ್ಮ ತಿಥಿ ಆಗ್ತಿದೆ. ವಿಷಯ ತಿಳಿದುಕೊಂಡು ಹೋರಾಟ ಮಾಡಬೇಕು. ಅಲ್ಲಿ ಜಯಲಲಿತಾ ಆರಾಮವಾಗಿದ್ದಾಳೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು, ಶಾಸಕರಾದ ಸಾ.ರಾ.ಮಹೇಶ್, ಶರವಣ, ಮಾಜಿ ಶಾಸಕ ಎಂ.ಶ್ರೀನಿವಾಸ್, ಜಿಪಂ ಅಧ್ಯಕ್ಷೆ ಪ್ರೇಮಕುಮಾರಿ, ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಲ್ಲಾಧಿಕಾರಿ ಜಿಯಾವುಲ್ಲಾ, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಶೋಭಾರಾಣಿ ಉಪಸ್ಥತರಿದ್ದರು. [ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯ, ಇಳಿಯದ ಕಾವು]