ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಲಘುವಾಗಿ ಮಾತನಾಡಲ್ಲ-ಕುಮಾರಸ್ವಾಮಿ
ಮಂಡ್ಯ, ಡಿಸೆಂಬರ್ 23 : ನಾಡಿನ ಯುವ ಜನಾಂಗ, ರೈತರು ಹಾಗೂ ಬಡವರ ಅಭ್ಯುದಯಕ್ಕೆ ಅಗತ್ಯವಿರುವ ಶಾಶ್ವತ ಯೋಜನೆಗಳನ್ನು ಸಾಕಾರಗೊಳಿಸಲು ಜಿಲ್ಲೆಯ ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ಮಾತನಾಡಿದ ಅವರು, 5 ವರ್ಷಗಳ ನಿಶ್ಚಿತ ಸರ್ಕಾರವನ್ನು ಜೆಡಿಎಸ್ಗೆ ರಾಜ್ಯದ ಜನತೆ ನೀಡಿದರೆ, ಜನರಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ ಫಲವಾಗಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದರೂ ರೈತರ 27 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಯಿತು. 2023ರಲ್ಲಿ ನಿಶ್ಚಿತ ಸರ್ಕಾರ ಅಧಿಕಾರಕ್ಕೆ ಬಂದರೆ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಕೃಷಿಕರ ಬಾಳು ಹಸನಾಗಲು ಸೂಕ್ತ ಯೋಜನೆ ಜಾರಿಗೊಳಿಸುವುದು ನನ್ನ ಮುಂದಿರುವ ಸವಾಲು ಎಂದು ತಿಳಿಸಿದರು.

ರವೀಂದ್ರ ಶ್ರೀಕಂಠಯ್ಯ ನೇರವಾದಿ..ಕುತಂತ್ರ ರಾಜಕಾರಣಿಯಲ್ಲ
ಮಾತು ಮುಂದುವರಿಸಿದ ಕುಮಾರಸ್ವಾಮಿ, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ಸೇರಿದಂತೆ 40 ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದ್ದು, ಆ ಭಾಗದ 50 ತಾಲೂಕುಗಳಲ್ಲಿ ರಥಯಾತ್ರೆ ಸಂಚರಿಸಲಿದೆ. ಭತ್ತ, ಕಬ್ಬು, ತೆಂಗು ಸೇರಿದಂತೆ ವಿವಿಧ ಬೆಳೆ ಬೆಳೆಯುವ ರೈತರ ಸಂಕಷ್ಟ ಹೇಳತೀರದಾಗಿದೆ. ರೈತರ ಮನೆ ಬಾಗಿಲಿಗೆ ಖರೀದಿ ವ್ಯವಸ್ಥೆಯನ್ನು ಜಾರಿಗೊಳಿಸಿ ಆ ವರ್ಗವನ್ನು ಶಾಶ್ವತವಾಗಿ ನೆಮ್ಮದಿಯಾಗಿರಿಸುವ ಯೋಜನೆ ಜಾರಿಗೊಳಿಸಲು ಬದ್ಧನಾಗಿದ್ದೇನೆ. ವಿಧವೆ, ಅಂಗವಿಕಲ ಹಾಗೂ ವೃದ್ಧಾಪ್ಯ ವೇತನಗಳ ಹೆಚ್ಚಳ, ಎಲ್.ಕೆ.ಜಿ.ಯಿಂದ ಪಿಯುಸಿ ವರೆಗೆ ಗುಣಮಟ್ಟದ ಉಚಿತ ಶಿಕ್ಷಣ, ಯುವಕರಿಗೆ ಉದ್ಯೋಗ ನೀಡುವ ಯೋಜನೆಗಳು ಪಕ್ಷದ ಪ್ರಣಾಳಿಕೆಯಾಗಲಿವೆ ಎಂದು ಭರವಸೆ ನೀಡಿದರು
ಈ ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಯೋಚನೆ ಇಲ್ಲ. ರೈತರ ಪಕ್ಷ ಜೆಡಿಎಸ್ಗೆ ಅಧಿಕಾರ ಕೊಡಿ. ರೈತರ ಸ್ವಾಭಿಮಾನದ ಬದುಕಿಗೆ ಅವಕಾಶ ನೀಡಿ. ನಿಮ್ಮೆಲ್ಲರ ಆಶೀರ್ವಾದದಿಂದ 120ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕಿದೆ. ಆ ಮೂಲಕ ರಾಜ್ಯವನ್ನ ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಸವಾಲು ಸ್ವೀಕರಿಸಿದ್ದೇನೆ. ಶಾಸಕ ರವೀಂದ್ರ ಶ್ರೀಕಂಠಯ್ಯರನ್ನ ಮತ್ತೆ ಗೆಲ್ಲಿಸಿ. ಶಾಸಕ ರವೀಂದ್ರ ಶ್ರೀಕಂಠಯ್ಯ ನೇರವಾದಿ. ಕುತಂತ್ರ ರಾಜಕಾರಣಿಯಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ರಮೇಶ್ ಬಂಡೀಸಿದ್ದೇಗೌಡರಿಗೆ ಟಾಂಟ್ ನೀಡಿದರು.

ಮಣ್ಣಿನ ಮಕ್ಕಳ ಸರ್ಕಾರವನ್ನು ತರಲು ಅವಕಾಶ ನೀಡಿ
ರಾಜ್ಯದಲ್ಲಿ ಎಲ್ಲಾ ಜಾತಿಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಂತಹ, ಹೊಸ ಭವಿಷ್ಯವನ್ನು ಬರೆಯುವಂತಹ ಮಣ್ಣಿನ ಮಕ್ಕಳ ಸರ್ಕಾರವನ್ನು ತರಲು ಎಲ್ಲಾ ಮತದಾರರು ಜೆಡಿಎಸ್ ಪಕ್ಷವನ್ನು ಒಕ್ಕೊರಲಿನಿಂದ ಬೆಂಬಲಿಸುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಪ್ರತಿ ಹಂಗಾಮಿನಲ್ಲಿ ರೈತರು ಭಿತ್ತನೆ ಕಾರ್ಯ ಪ್ರಾರಂಭಿಸುವ ಮುನ್ನವೇ, ಪ್ರತಿ ಎಕರೆಗೆ 10 ಸಾವಿರ ರು. ಸಹಾಯ ಧನ ನೀಡುವ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಸಹಾಯಧನವು ಪ್ರತಿ ಹಂಗಾಮು ಪ್ರಾರಂಭವಾಗುವ ಮೊದಲೇ ರೈತರ ಕೈಗೆ ಸಿಗುವಂತೆ ಮಾಡಲಾಗುವುದು. ಇದರಿಂದಾಗಿ ರೈತರು ಯಾವುದೇ ಸಾಲ ಮಾಡದೇ ಕೃಷಿ ಕಾರ್ಯದಲ್ಲಿ ತೊಡಗಲು ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸದೃಢವಾಗಿ ಬದುಕುವ ರೀತಿಯಲ್ಲಿ ಪಂಚರತ್ನ ಯೋಜನೆಯಲ್ಲಿ ಅಳವಡಿಸಿದ್ದೇನೆ
ಇನ್ನು ರೈತರ ಸಾಲಮನ್ನಾ ಮಾಡಿದ್ದು ನಿಮ್ಮ ಕುಮಾರಸ್ವಾಮಿ, ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆಗೆ ಅವಕಾಶ ಕೊಡಿ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಲ ಮನ್ನಾ ಮಾಡಿದ್ದೇನೆ. ಸಾಲ ಮನ್ನಾದಿಂದ ಶಾಶ್ವತ ಪರಿಹಾರಗಳಿಲ್ಲ. ರೈತರು ಸಾಲ ಮಾಡಿಕೊಳ್ಳದ ರೀತಿಯಲ್ಲಿ ಆರ್ಥಿಕವಾಗಿ ಸದೃಢವಾಗಿ ಬದುಕುವ ರೀತಿಯಲ್ಲಿ ಪಂಚರತ್ನ ಯೋಜನೆಯಲ್ಲಿ ಅಳವಡಿಸಿದ್ದೇನೆ. ಈ ಬಗ್ಗೆ ಮಾಹಿತಿಗಳನ್ನು ರಾಜ್ಯದ ಪ್ರತೀ ಮನೆ ಮನೆಗಳಿಗೆ ತಲುಪಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ. ರೈತರ ಆತ್ಮಹತ್ಯೆ ಮತ್ತೆ ಪ್ರಾರಂಭವಾಗಿದೆ. ಅದಕ್ಕೆ ಕಾರಣ ಮೂರು ವರ್ಷಗಳಿಂದ ಮಳೆಯಿಂದ ಬೆಳೆ ಹಾನಿ ಸೂಕ್ತ ಪರಿಹಾರ ನೀಡದಿರುವುದು ಹಳೇ ಕಾಲದ ಪ್ರಕಾರ ಬೆಳೆ ಪರಿಹಾರ ನೀಡುತ್ತಿರುವುದು ರೈತರು ಮಾಡುವ ಖರ್ಚಿಗೂ ಸಾಲದು ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.

ವಿರೋಧ ಪಕ್ಷವನ್ನು ಕಟ್ಟಿಹಾಕುವ ಉದ್ದೇಶಕ್ಕೆ ನಮ್ಮ ಸಹ ಮತವಿಲ್ಲ
ಕೊರೊನಾ ಮಾರ್ಗಸೂಚಿ ಜಾರಿ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಮೊದಲ ಹಂತದಲ್ಲಿ ಕೆಲವು ಗೈಡ್ ಲೈನ್ ಕೊಟ್ಟಿದ್ದಾರೆ. ಮುಂದೆ ಯಾವ ರೀತಿ ಬದಲಾವಣೆ ಆಗುತ್ತದೆ ಗೊತ್ತಿಲ್ಲ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಲಘುವಾಗಿ ಮಾತನಾಡಲ್ಲ. ಚೀನಾದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಕೊರೊನಾ ಅನಾಹುತ ಹೆಚ್ಚಾಗಿದೆ. ಹೆಚ್ಚಿನ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ರಾಜ್ಯ, ರಾಷ್ಟ್ರದಲ್ಲಿ ಸಮಸ್ಯೆಗಳು ಏನಾಗುತ್ತದೆ ನೋಡೋಣ. ನಾವು ಸಹಕಾರ ಕೊಡುತ್ತೇವೆ. ಆದರೆ ರಾಜಕೀಯ ಉದ್ದೇಶಕ್ಕಾಗಿ ಬೇರೆ ರೀತಿಯಲ್ಲಿ ವಿರೋಧ ಪಕ್ಷವನ್ನು ಕಟ್ಟಿಹಾಕುವ ವಾತಾವರಣ ನಿರ್ಮಾಣ ಮಾಡಲು ಹೋದರೆ. ಅದಕ್ಕೆ ನಮ್ಮ ಸಹ ಮತವಿಲ್ಲ ಎಂದರು.












Click it and Unblock the Notifications