ಕೆ.ಆರ್.ಪೇಟೆಯ ದೇವೀರಮ್ಮಣ್ಣಿ ಕೆರೆಯಲ್ಲೀಗ ನೀರ ಹಾಡು...
ಮಂಡ್ಯ, ಸೆಪ್ಟೆಂಬರ್ 25: ನೀರಿಲ್ಲದೆ ಒಣಗಿ ಬರಡಾಗಿದ್ದ ಕೆರೆಗಳಿಗೆ ಈ ಬಾರಿ ಜೀವ ಕಳೆ ಬಂದಿದೆ. ಅದರಲ್ಲಿಯೂ ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿರುವ ಹಲವು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ಕೆಲವು ಕೆರೆಗಳ ಏರಿ ಮೇಲೆ ನೀರು ಧುಮುಕುವ ಸುಂದರ ದೃಶ್ಯ ನೋಡುಗರ ಮನಸೆಳೆಯುತ್ತಿದೆ.
ಈ ನಡುವೆ ಕೆ.ಆರ್.ಪೇಟೆಯ ಇತಿಹಾಸ ಪ್ರಸಿದ್ಧವಾದ ದೇವೀರಮ್ಮಣ್ಣಿ ಕೆರೆಯು ಸುರಿದ ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದು ಏರಿಯಿಂದ ಕೆಳಗೆ ಧುಮುಕುವಾಗ ಜಲಪಾತವನ್ನೇ ಸೃಷ್ಟಿ ಮಾಡಿದೆ. ಇದನ್ನು ನೋಡಲೆಂದೇ ಜನ ಬರತೊಡಗಿದ್ದಾರೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ಇಂತಹ ಸಣ್ಣಪುಟ್ಟ ಜಲಪಾತಗಳನ್ನು ಅಲ್ಲಲ್ಲಿ ಕಾಣಬಹುದಾದರೂ ಬಯಲು ಸೀಮೆಯಲ್ಲಿ ಜಲಧಾರೆಯನ್ನು ನೋಡಬೇಕಾದರೆ ಕೆರೆಗಳು ತುಂಬಲೇ ಬೇಕಾಗುತ್ತದೆ.
ಮಳೆಯ ಕೊರತೆಯಿಂದ ದೇವೀರಮ್ಮಣ್ಣಿ ಬರಿದಾಗಿತ್ತು. ಆದರೆ ಹೇಮಾವತಿ ಜಲಾಶಯ ಯೋಜನೆಯ ಎಡದಂಡೆ ನಾಲೆಯ ವಿತರಣಾ ನಾಲೆಯ ಮೂಲಕ ಹರಿದುಬಂದ ನೀರು ಮತ್ತು ಸುರಿದ ಭಾರೀ ಮಳೆಯಿಂದ ಕೇವಲ ನಾಲ್ಕೇ ದಿನದಲ್ಲಿ ಕೆರೆಯು ಭರ್ತಿಯಾಗಿ ಕೋಡಿ ಬಿದ್ದಿದೆ. ಮೈಸೂರು ಸಂಸ್ಥಾನದ ಅರಸರ ಉಪಪತ್ನಿಯಾಗಿದ್ದ ದೇವೇರಮ್ಮಣ್ಣಿ ಅವರು ಲೋಕಕಲ್ಯಾಣಾರ್ಥವಾಗಿ ಕಟ್ಟಿಸಿದ್ದ ತಾಲೂಕಿನ ಅತಿ ದೊಡ್ಡ ಕೆರೆಗಳಲ್ಲಿ ದೇವೀರಮ್ಮಣ್ಣಿ ಕೆರೆಯೂ ಒಂದು. ಈ ಕೆರೆಯಿಂದ ಕೃಷ್ಣರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮತ್ತು ಬೇಸಾಯಕ್ಕೂ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಭೀಕರ ಬರಗಾಲದಿಂದ ಕೆರೆಯು ಖಾಲಿಯಾಗಿತ್ತು.

ಇದೀಗ ಕೃಷ್ಣರಾಜಪೇಟೆ ತಾಲೂಕಿನ ಕೆರೆ-ಕಟ್ಟೆಗಳಿಗೆ ಹೇಮಾವತಿ ನದಿಯಿಂದ ನೀರನ್ನು ತುಂಬಿಸಲಾಗಿದೆ. ಜತೆಗೆ ಮಳೆಯೂ ಬಂದಿರುವುದರಿಂದ ಕೆರೆಗಳು ನೀರು ಭರ್ತಿಯಾಗಿ ಇತಿಹಾಸ ನಿರ್ಮಾಣ ಮಾಡಿವೆ. ಇಲ್ಲಿರುವ ಇನ್ನಿತರ ಕೆರೆಗಳಾದ ವಳಗೆರೆಮೆಣಸ ದೊಡ್ಡಕೆರೆ, ಅಗ್ರಬಾಚಹಳ್ಳಿ ಕೆರೆ, ಕೃಷ್ಣರಾಜಪೇಟೆ ದೇವೀರಮ್ಮಣ್ಣಿ ಕೆರೆ, ಹೊಸಹೊಳಲು ದೊಡ್ಡಕೆರೆಗಳು ಕೇವಲ ನಾಲ್ಕು ದಿನದಲ್ಲಿ ಭರ್ತಿಯಾಗಿವೆ.
ದೇವೀರಮ್ಮಣ್ಣಿ ಕೆರೆಯನ್ನು ಅಭಿವೃದ್ಧಿಪಡಿಸಿದ್ದೇ ಆದರೆ ಸುಂದರ ಪ್ರವಾಸಿ ತಾಣವಾಗಲಿದೆ. ಆದರೆ ಕೆರೆಯಲ್ಲಿ ಗಿಡಗಂಟಿಗಳು ಬೆಳೆದು ಗಬ್ಬು ನಾರುತ್ತಿವೆ. ಇದನ್ನು ಶುಚಿಗೊಳಿಸಿ, ಜಲಪಾತ ವೀಕ್ಷಣೆಗೆ ಸೌಲಭ್ಯ ಮತ್ತು ಬೋಟಿಂಗ್ ವ್ಯವಸ್ಥೆ ಮಾಡಿದ್ದೇ ಆದರೆ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications