'ಮಾತೆ ಮಹಾದೇವಿ ಕಾಂಗ್ರೆಸ್ ಪಕ್ಷದ ವಕ್ತಾರರೋ?'
ಮಂಡ್ಯ, ಸೆಪ್ಟೆಂಬರ್ 14 : ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಕುರಿತು ಮಾತೆ ಮಹಾದೇವಿ ನೀಡಿರುವ ಹೇಳಿಕೆಯನ್ನು ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ಖಂಡಿಸಿದ್ದಾರೆ.
'ಕೇಂದ್ರ ಸರ್ಕಾರ ನಿಮ್ಮನ್ನು ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಿದೆ. ಹಾಗಾಗಿ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ತಟಸ್ಥರಾಗಿ ಇರಿ ಎಂದು ಬಿಜೆಪಿ ಮುಖಂಡರು ಒತ್ತಡ ಹೇರಿದ್ದಾರೆ' ಎಂದು ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಬುಧವಾರ ಹೇಳಿಕೆ ನೀಡಿದ್ದರು.

ಸಿ.ಟಿ.ಮಂಜುನಾಥ್ ಈ ಹೇಳಿಕೆಯನ್ನು ಖಂಡಿಸಿದ್ದಾರೆ. 'ಮಾತೆ ಮಹಾದೇವಿ ಹೇಳಿಕೆ ನಿಜಕ್ಕೂ ಖಂಡನೀಯ, ದೇಶಕ್ಕೆ ಅದೆಷ್ಟೋ ಅನರ್ಘ್ಯ ರತ್ನಗಳನ್ನು ನೀಡಿರುವ ಶ್ರೀ ಮಠ ಹಾಗು ಶ್ರೀ ಗಳು ಎಂದು ಪ್ರಶಸ್ತಿಗಳ ಹಿಂದೆ ಬಿದ್ದಿಲ್ಲ, ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಏನು ನೋಬೆಲ್ ಪ್ರಶಸ್ತಿ ಬಂದರೂ ಶ್ರೀಗಳಿದ ಆ ಪ್ರಶಸ್ತಿ ಗೌರವ ಹೆಚ್ಚುತ್ತದೆ' ಎಂದು ಹೇಳಿದ್ದಾರೆ.
'ಅನ್ನ, ಅಕ್ಷರ, ದಾಸೋಹ ಮಾಡುತ್ತಾ ತನ್ನ ಕಾಯಕದಲ್ಲೇ ಕೈಲಾಸವನ್ನು ಕಾಣುತ್ತಿರುವ ಶ್ರೀಗಳು ಎಂದಿಗೂ ಜನರ ಪಾಲಿನ ರತ್ನ, ಸಮಾಜ ಮುಖಿ ಕಾರ್ಯವನ್ನು ಮಾಡುತ್ತಿರುವ ಶ್ರೀ ಮಠ ಜಾತಿ, ಮತ, ಧರ್ಮವನ್ನು ಮೀರಿ ಬೆಳೆದಿದೆ' ಎಂದು ಮಂಜುನಾಥ್ ತಿಳಿಸಿದ್ದಾರೆ.
'ಮಾತೆ ಮಹಾದೇವಿಯವರು ತಮ್ಮ ಅಭಿಪ್ರಾಯವನ್ನು ಮಂಡಿಸಲಿ. ಆದರೆ, ಇಂತದ ಧರ್ಮ ಸೂಕ್ಷ್ಮ ವಿಚಾರದಲ್ಲಿ ಹಿರಿಯ ಶ್ರೀಗಳನ್ನು ಎಳೆತರುವುದು ನಿಜಕ್ಕೂ ನಾಚಿಕೆ ಗೇಡಿನ ವಿಚಾರ, ಮಾತೆ ಮಹಾದೇವಿಯವರು ಬಸವ ಧರ್ಮ ಪೀಠದ ಅಧ್ಯಕ್ಷರೋ ಇಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರರೋ ಎನ್ನುವ ಅನುಮಾನ ಮೂಡುತ್ತಿದೆ. ಈ ಕೂಡಲೇ ಅವರು ಬಹಿರಂಗವಾಗಿ ಶ್ರೀಗಳ ಕ್ಷಮೆ ಯಾಚಿಸಬೇಕು' ಎಂದು ಆಗ್ರಹಿಸಿದ್ದಾರೆ.











Click it and Unblock the Notifications