ಕನಗನಮರಡಿ ಬಸ್ ದುರಂತ: ಚಾಲಕನಿಗೆ ಷರತ್ತು ಬದ್ಧ ಜಾಮೀನು
ಮೈಸೂರು, ಡಿಸೆಂಬರ್ 11: ಕನಗನಮರಡಿ ಬಸ್ ದುರಂತದಲ್ಲಿ 9 ಮಕ್ಕಳು ಸೇರಿದಂತೆ 30 ಮಂದಿಯ ಸಾವಿಗೆ ಕಾರಣನಾದ ಚಾಲಕನಿಗೆ ಪಟ್ಟಣದ ಸಿವಿಲ್ ನ್ಯಾಯಾಲಯ ಬಂಧನವಾದ ಕೇವಲ ಒಂದು ದಿನದೊಳಗೆ ಷರತ್ತು ಬದ್ಧ ಜಾಮೀನು ನೀಡಿದೆ.
ದುರಂತ ನಡೆದ ಬಳಿಕ ಆರೋಪಿ ಶಿವಣ್ಣ ತಲೆಮರೆಸಿಕೊಂಡಿದ್ದ.ದುರಂತಕ್ಕೆ ಬಸ್ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿತ್ತು. ಹೀಗಾಗಿ ಚಾಲಕನ ಬಂಧನಕ್ಕಾಗಿ ತೀವ್ರ ಶೋಧ ನಡೆಸಲಾಗಿತ್ತು. ಅಷ್ಟೇ ಅಲ್ಲ, ಸಿಪಿಐ ದೀಪಕ್ ನೇತೃತ್ವದ ಪೊಲೀಸ್ ತಂಡ ಬೆಂಗಳೂರಿಗೆ ತೆರಳಿತ್ತು.
ಆನಂತರ ಚಾಲಕನನ್ನು ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ಬೆಸ್ತರಕೊಪ್ಪಲಿನ ಸಂಬಂಧಿಕರೊಬ್ಬರ ಮನೆಯಲ್ಲಿ ಭಾನುವಾರ ಬೆಳಗ್ಗೆ 4ಕ್ಕೆ ಬಂಧಿಸಿ, ಪಾಂಡವಪುರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು.

ಆಗ ಚಾಲಕ "ನನ್ನ ಅಜಾಗರೂಕತೆಯಿಂದಲೇ ಬಸ್ ನಾಲೆಗೆ ಉರುಳಿತು. ಕನಗನಮರಡಿ ವಿ.ಸಿ. ನಾಲೆಯ ಬಳಿ ಬಸ್ ಚಾಲನೆ ಮಾಡುತ್ತಿದ್ದಾಗ ಎದುರಾದ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆಯುತ್ತದೆ ಎಂದುಕೊಂಡು ಸ್ವಲ್ಪ ಎಡಕ್ಕೆ ತಿರುಗಿಸಿದಾಗ ನಾಲೆಗೆ ಉರುಳಿ ಬಿದ್ದಿತು. ನಾಲೆಯಿಂದ ಪಾರಾಗಿ ಬರಲು ಅಲ್ಲಿದ್ದ ರೈತರೊಬ್ಬರು ಸಹಾಯ ಮಾಡಿದರು. ಭಯಗೊಂಡ ನಾನು ಅಲ್ಲಿಂದ ಪರಾರಿಯಾಗಿ ಬೆಂಗಳೂರಿಗೆ ಬಂದು ತಲುಪಿದೆ" ಎಂದು ಶಿವಣ್ಣ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.
ಇದರೊಟ್ಟಿಗೆ ಪ್ರಕರಣದ ಪ್ರಮುಖ ಆರೋಪಿ ಎಂದೇ ಚಾಲಕ ಶಿವಣ್ಣನನ್ನು ಗುರುತಿಸಲಾಯಿತು. ಆದರೆ ಕೇವಲ 24 ಗಂಟೆಯೊಳಗೆ ಆರೋಪಿಗೆ ಪಾಂಡವಪುರ ಜೆ ಎಂ ಎಫ್ ಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಕೆಲವೇ ಗಂಟೆಗಳಲ್ಲಿ ಶಿವಣ್ಣನನ್ನು ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಬಿಡುಗಡೆ ಮಾಡಿ ಕಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ್ ಬಿಸೇ ರೊಟ್ಟಿ ಆದೇಶ ನೀಡಿದ್ದಾರೆ.
ಕನಗನಮರಡಿ ಬಸ್ ದುರಂತದ ನಂತರ ಸರ್ಕಾರ ಎಚ್ಚತ್ತುಕೊಂಡಿದ್ದು, ನಾಲೆಗೆ ತಡೆಗೋಡೆಯನ್ನು ನಿರ್ಮಿಸಿದೆ. ಅಷ್ಟೇ ಅಲ್ಲ, ಅಪಘಾತ ನಡೆದ ಮಾರನೇ ದಿನದಿಂದಲೇ ಈ ಭಾಗದಲ್ಲಿ ಸರ್ಕಾರಿ ಬಸ್ ಸಂಚಾರವನ್ನು ಆರಂಭಿಸಿದೆ.. ಸದ್ಯ ಗ್ರಾಮದ ಮಾರ್ಗವಾಗಿ ದಿನಕ್ಕೆ ನಾಲ್ಕು ಬಾರಿ ಸರ್ಕಾರಿ ಬಸ್ ಸಂಚರಿಸುತ್ತಿದೆ.












Click it and Unblock the Notifications