ಮುಂಬೈ ವ್ಯಕ್ತಿಯಿಂದ ಮಂಡ್ಯದ ನಾಗಮಂಗಲಕ್ಕೆ ಬಂತು ಕೊರೊನಾ
ಮಂಡ್ಯ, ಏಪ್ರಿಲ್ 27: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬನಿಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡುವುದರೊಂದಿಗೆ ಗ್ರಾಮಸ್ಥರೆಲ್ಲರನ್ನು ಆರೋಗ್ಯ ತಪಾಸಣೆಗೊಳಪಡಿಸಲಾಗಿದೆ.
Recommended Video
ಗ್ರಾಮದ ಸುಮಾರು 50 ವರ್ಷದ ವ್ಯಕ್ತಿಯೊಬ್ಬ ಏ.22ರಂದು ಮುಂಬೈನಿಂದ ಗ್ರಾಮಕ್ಕೆ ಬಂದಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಏ.25ರಂದು ಆತನ ಗಂಟಲು ದ್ರವವನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಿದ್ದಾರೆ. ಸೋಮವಾರ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತ ವ್ಯಕ್ತಿಯ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತ್ನಿ, ಮಗ ಮತ್ತು ಬಾಮೈದನನ್ನು ಹೋಂ ಕ್ವಾರೈಂಟನ್ ಗೆ ಒಳಪಡಿಸಿದ್ದಾರೆ.
ರಾತ್ರೋರಾತ್ರಿ ಗ್ರಾಮ ಸೀಲ್ಡ್ ಡೌನ್: ಸೋಂಕಿತನ ವರದಿ ಅಧಿಕೃತವಾಗಿ ಪ್ರಕಟವಾಗುವ ಮುನ್ನವೇ, ಅಂದರೆ ಭಾನುವಾರ ರಾತ್ರಿ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಸೋಂಕಿತ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ಥಳಾಂತರಿಸುವ ಜತೆಗೆ ಗ್ರಾಮಕ್ಕಿರುವ ಎಲ್ಲ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿದ್ದು, ಇಡೀ ಗ್ರಾಮವನ್ನು ಲಾಕ್ ಡೌನ್ ಮಾಡಲಾಗಿತ್ತು. ಇದರಿಂದ ಗ್ರಾಮಸ್ಥರು ಮತ್ತು ಸುತ್ತಲಿನ ಗ್ರಾಮದ ನಿವಾಸಿಗಳು ಆತಂಕಕ್ಕೊಳಗಾಗಿ ಪಕ್ಕದ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮಗಳ ರಸ್ತೆಯನ್ನು ಬಂದ್ ಮಾಡಿದ್ದಾರೆ.

ಕೊರೊನಾ ಸೋಂಕು ದೃಢವಾಗುತ್ತಿದ್ದಂತೆಯೇ ಗ್ರಾಮದಲ್ಲಿರುವ ಪ್ರತಿಯೊಬ್ಬರಿಗೂ ಆರೋಗ್ಯ ಇಲಾಖೆ ವತಿಯಿಂದ ನಾಲ್ಕು ತಂಡಗಳನ್ನು ರಚಿಸಿಕೊಂಡು ಇಡೀ ಗ್ರಾಮದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಇಷ್ಟಲ್ಲದೆ ಪಕ್ಕದ ಗ್ರಾಮದ ನಿವಾಸಿಗಳಿಗೂ ಆರೋಗ್ಯ ಇಲಾಖೆಯ ತಂಡ ಪರೀಕ್ಷೆ ನಡೆಸುತ್ತಿದೆ. ಸೋಂಕು ಧೃಡವಾಗುತ್ತಿದ್ದಂತೆ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಕುಂಞಿಅಹಮದ್, ತಾಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ, ಪಿಎಸ್ ಐ ಬಸವರಾಜು ಭೇಟಿ ನೀಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಜತೆಗೆ ಸ್ಥಳೀಯ ಕೊರೊನಾ ಸೈನಿಕರಿಗೆ ಧೈರ್ಯ ತುಂಬಿದರು.












Click it and Unblock the Notifications