ಸರಕಾರ ಟ್ರಯಲ್ ಬ್ಲಾಸ್ಟ್ ಮಾಡಿಸಿ ಗಣಿಗಾರಿಕೆಗೆ ಅನುಕೂಲ ಮಾಡಲು ಮುಂದಾಗಿದೆ: ಲಕ್ಷ್ಮಣ್ ಆರೋಪ
ಮಂಡ್ಯ, ಜುಲೈ 27: ಕೆ.ಆರ್.ಎಸ್. ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ಮಾಡಿಸುವ ಮೂಲಕ ಗಣಿಗಾರಿಕೆಗೆ ಅನುಕೂಲ ಮಾಡಿಕೊಡಲು ಸರಕಾರ ಮುಂದಾಗಿದೆ. ಈ ಮೂಲಕ ಮುಂದಿನ ಚುನಾವಣೆಗೆ ಹಣ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಜಿಲ್ಲೆಯಲ್ಲಿ ಬುಧವಾರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಆರ್ಎಸ್ ಡ್ಯಾಂಗೆ ಅಪಾಯವಿದೆಯೇ ಎನ್ನುವುದನ್ನು ತಿಳಿಯಲು ಟ್ರಯಲ್ ಬ್ಲಾಸ್ಟ್ ಮಾಡುವುದು ಮೂರ್ಖತನದ ಪರಮಾವಧಿ. ಜತೆಗೆ ಅದೊಂದು ಕ್ರಿಮಿನಲ್ ಅಪರಾಧ. ಆದರೆ ದೇಶದಲ್ಲಿ ಒಂದು ಡ್ಯಾಂ ಅಥವಾ ಕನಿಷ್ಠ ಒಂದು ಸಣ್ಣ ಕೆರೆ ಕಟ್ಟಿಸಲು ಸಾಧ್ಯವಾಗದ ಬಿಜೆಪಿ ಸರಕಾರ, ಇರುವ ಅಣೆಕಟ್ಟೆ ಉಳಿಸಿಕೊಳ್ಳಲು ನಿರ್ಲಕ್ಷ್ಯತನ ತೋರುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.
ಗಣಿಗಾರಿಕೆಯಿಂದ ಅಣೆಕಟ್ಟೆಯ ಸಮಸ್ಯೆಯಾಗಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಟ್ರಯಲ್ ಬ್ಲಾಸ್ಟ್ ಮಾಡುತ್ತಿದ್ದಾರಂತೆ. ಪ್ರಾಯೋಗಿಕ ಪರೀಕ್ಷೆ ಮಾಡಲೇಬೇಕೆಂದುಕೊಂಡರೆ ಬೇಕಾದಷ್ಟು ಜಾಗವಿದೆ. ಅಲ್ಲಿ ಪರೀಕ್ಷೆ ಮಾಡಿ ತಿಳಿದುಕೊಳ್ಳಲಿ. ಇಂತಹ ಸಮಯದಲ್ಲಿ ಬ್ಲಾಸ್ಟ್ ವ್ಯತಿರಿಕ್ತವಾಗಿ ಪರಿಣಾಮ ಬೀರಿ ಡ್ಯಾಂಗೆ ಅಪಾಯವಾದರೆ ಪರಿಸ್ಥಿತಿ ಏನಾಗಲಿದೆ ಎನ್ನುವ ಊಹೆ ಮಾಡುವುದಕ್ಕೂ ಆಗುವುದಿಲ್ಲ. ಬ್ಲಾಸ್ಟ್ ಸಮಯದಲ್ಲಿ ಕೂದಲೆಳೆಯಷ್ಟು ಬಿರುಕು ಕಾಣಿಸಿಕೊಂಡರೂ, ಕೆಲವೊತ್ತಿನಲ್ಲಿ ಅದರಿಂದಾಗುವ ಸಮಸ್ಯೆ ಏನೆಂದು ಇವರಿಗೆ ಗೊತ್ತೇ ಎಂದು ವಾಗ್ದಾಳಿ ನಡೆಸಿದರು.

ಡ್ಯಾಮ್ ಸುರಕ್ಷತೆಯೇ ಮುಖ್ಯ
ನ್ಯೂಕ್ಲಿಯರ್ ಬಾಂಬ್ ಅನ್ನು ಸಿದ್ಧಪಡಿಸಿದಾಗ ನಿರ್ಜನ ಪ್ರದೇಶದಲ್ಲಿ ಪ್ರಯೋಗ ಮಾಡಲಾಗಿತ್ತೆ ಹೊರತು ಜನರಿರುವ ಪ್ರದೇಶದಲ್ಲಿ ಅಲ್ಲ. ಬ್ಲಾಸ್ಟ್ ಆದ ನಂತರ ನೋಡಿಕೊಳ್ಳೋಣವೆಂದು ಯಾರೂ ನಿರ್ಧಾರ ಮಾಡುವುದಿಲ್ಲ. ಹೀಗಿರುವಾಗ ಡ್ಯಾಂ ರಕ್ಷಣೆ ದೃಷ್ಟಿಯಿಂದ ಅದರ ಸಮೀಪವೇ ಟ್ರಯಲ್ ಬ್ಲಾಸ್ಟ್ ಮಾಡುತ್ತೇವೆಂದು ಹೇಳುತ್ತಿರುವುದು ದುರಂತ. ಕೆಆರ್ಎಸ್ ಡ್ಯಾಂನ ಆಯುಷ್ಯ 120 ವರ್ಷ. ಈಗಾಗಲೇ 92 ವರ್ಷ ಆಗೋಗಿದೆ.
ಹೀಗಿರುವಾಗ ಪ್ರಾಯೋಗಿಕ ಪರೀಕ್ಷೆ ಮಾಡಬೇಕೇ ಎಂದು ಪ್ರಶ್ನಿಸಿದ ಅವರು, ಗಣಿಗಾರಿಕೆ ಮಾಡಲು ಬೇಕಾದಷ್ಟು ಜಾಗವಿದೆ. ಅಲ್ಲಿಗೆ ಹೋಗಿ ಮಾಡಲಿ. ಒಂದು ವೇಳೆ ಕಾಂಗ್ರೆಸ್ ಮುಖಂಡರು ಗಣಿಗಾರಿಕೆ ಮಾಡುತ್ತಿದ್ದರೂ ಅಷ್ಟೇ. ನಮಗೆ ಡ್ಯಾಂ ಸುರಕ್ಷಿತವಾಗಿರುವುದಷ್ಟೇ ಮುಖ್ಯ. ಇನ್ನು ಜಿಲ್ಲಾಡಳಿತ ಮತ್ತೆ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಮತ್ತೆಂದು ಅಂತಹ ಪರಿಕಲ್ಪನೆ ಮಾಡಿಕೊಳ್ಳುವುದು ಬೇಡ. ನಾವು ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಆ ವಿಜ್ಞಾನಿಗಳು ಯಾರು? ಎಲ್ಲಿಂದ ಬಂದಿದ್ದಾರೆ?
ಟ್ರಯಲ್ ಬ್ಲಾಸ್ಟ್ಗೆಂದು ಜಾರ್ಖಂಡ್ನಿಂದ ಬಂದಿರುವ ವಿಜ್ಞಾನಿಗಳ ಯಾರು?. ಅವರನ್ನು ಅಲ್ಲಿನ ಸರಕಾರ ಕಳಿಸಿದೆಯೇ? ಗಣಿ ಮಾಲೀಕರು ತಮಗೆ ಬೇಕಾದವರನ್ನು ಕರೆಸಿಕೊಂಡಿರಬಹುದು. ಆ ರಾಜ್ಯದ ಸಂಘ ಸಂಸ್ಥೆಯೊಂದರ ಸದಸ್ಯರನ್ನು ವಿಜ್ಞಾನಿಗಳೆಂದು ಕರೆಸಿದ್ದಾರೆ. ರಾಜ್ಯದ ಕಂದಾಯ ಇಲಾಖೆಯ ಅಧೀನದಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೇ ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯವಿದೆ ಎಂದು ವರದಿ ನೀಡಿದೆ. 2019 ಹಾಗೂ 2020ರಲ್ಲಿಯೂ ಮತ್ತೆ ವರದಿ ಕೊಟ್ಟಿದೆ. ಅದರಲ್ಲಿರುವಂತೆ ಗಣಿಗಾರಿಕೆ ನಿಲ್ಲಿಸಬೇಕು.

ಏಕಬಂಡೆಯ ಮೇಲೆ ಡ್ಯಾಮ್ ನಿರ್ಮಾಣ
ಸುಮಾರು 37 ಕಿ.ಮೀ ಏಕಬಂಡೆಯ ಮೇಲೆ ಡ್ಯಾಂ ನಿರ್ಮಾಣ ಮಾಡಲಾಗಿದೆ. ನೀರು ಸಂಗ್ರಹವಾಗುತ್ತದೆ ಎನ್ನುವ ಕಾರಣಕ್ಕೆ ಅಂದು ಕಾಮಗಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಮಾಡುತ್ತಿರುವ ಹಾಗೂ ಡ್ಯಾಂ ಕೆಳಗಿರುವ ಸ್ಥಳ ಒಂದೇ ಬಂಡೆಯ ಮೇಲಿದೆ. ಇದನ್ನು ಹಿಂದೆಯೇ ಸ್ಪಷ್ಟಪಡಿಸಲಾಗಿದೆ. ಹೀಗಿರುವಾಗ ಪರೀಕ್ಷೆ ಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಪ್ರಶ್ನಿಸಿದರು.

ಡ್ಯಾಮ್ಗೆ ತೊಂದರೆಯಾದರೆ ಬಾಟಲಿ ನೀರಿಗೂ ತೊಂದರೆ
ಟ್ರಯಲ್ ಬ್ಲಾಸ್ಟ್ನಿಂದ ಅನಾಹುತವಾದರೆ ಬರೋಬ್ಬರಿ 32 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಇರುವುದಿಲ್ಲ. ಬೆಂಗಳೂರಿನ ಜನರು ಬಾಟಲಿ ನೀರಿಗಾಗಿ ಪರದಾಡಬೇಕಾಗುತ್ತದೆ. ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗಿದೆ. ಈವರೆಗೂ ಸ್ಥಳ ಪರಿಶೀಲನೆಯನ್ನೂ ಮಾಡದ ಡಿಸಿ, ಟ್ರಯಲ್ ಬ್ಲಾಸ್ಟ್ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ವಿಪರ್ಯಾಸ. ಡ್ಯಾಂ ಸಮೀಪ ಸಂಪೂರ್ಣ ಗಣಿಗಾರಿಕೆ ನಿಂತಿಲ್ಲ. ಬ್ಲಾಸ್ಟ್ ನಡೆಸಲು ಮುಂದಾಗಿದ್ದ ಜಾಗದಿಂದ 50 ರಿಂದ 100 ಮೀಟರ್ ಅಂತರದಲ್ಲಿಯೇ ಸ್ಫೋಟ ನಡೆಯುತ್ತಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸುತ್ತಿಲ್ಲ. ಡಿಸಿ ಎಸ್.ಅಶ್ವಥಿ ಮಹಾರಾಣಿಯಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications