ಕೆಆರ್ಎಸ್, ಬೃಂದಾವನ ಗಾರ್ಡನ್ ಗೆ ಬಿಗಿ ಭದ್ರತೆ
ಶ್ರೀರಂಗಪಟ್ಟಣ, ಸೆ. 06: ಕಾವೇರಿ ನದಿ ನೀರು ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ಕರ್ನಾಟಕದ ವಿರುದ್ಧವಾಗಿ ಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೃಷ್ಣರಾಜಸಾಗರ ಅಣೆಕಟ್ಟು ಹಾಗೂ ಬೃಂದಾವನ ಉದ್ಯಾನವನಕ್ಕೆ ಭಾರಿ ಬಂದೋಬಸ್ತ್, ಬಿಗಿ ಭದ್ರತೆ ಒದಗಿಸಲಾಗಿದೆ. ಸೋಮವಾರದಿಂದ ನಾಲ್ಕು ದಿನಗಳ ಕಾಲ ಪ್ರವೇಶ ನಿಷೇಧಿಸಲಾಗಿದೆ.
ದಕ್ಷಿಣ ವಲಯ ಐಜಿ ಬಿ.ಕೆ.ಸಿಂಗ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಕೆಆರ್ಎಸ್ ಜಲಾಶಯದ ಸುತ್ತಲೂ ಪರಿಶೀಲನೆ ನಡೆಸಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. [ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]
ರಾಜ್ಯದ ವಿರುದ್ಧ ಸುಪ್ರಿಂ ಕೋರ್ಟ್ ತೀರ್ಪು ನೀಡಿರುವುದರಿಂದ ಜಲಾಶಯದ ಸುತ್ತಲೂ ಯಾವ ರೀತಿ ಬಿಗಿ ಭದ್ರತೆ ಒದಗಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್ ಐಎಸ್ ಎಫ್) ಪಹರೆ ಕಾಯುತ್ತಿದೆ. [Live : ಮಂಡ್ಯ ಬಂದ್, ಕೆಆರ್ಎಸ್ಗೆ 4 ದಿನ ಪ್ರವೇಶ ನಿಷೇಧ]

ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಕೈಗಾರಿಕಾ ಭದ್ರತಾ ಪಡೆ ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ಪಡೆದುಕೊಂಡರು. ಈಗಾಗಲೇ ಭದ್ರತಾ ಪಡೆಯಲ್ಲದೆ, ಸ್ಥಳೀಯ ಪೊಲೀಸರನ್ನು ಹೊರ ಭಾಗದಲ್ಲಿ ನಿಯೋಜಿಸಲಾಗಿದ್ದು, ಇದರ ಜೊತೆಗೆ ಹಲವು ತುಕಡಿಗಳ ಕೆಎಸ್ಆರ್ ಪಿ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕೆಆರ್ಎಸ್ ಜಲಾಶಯದ ಕೆಳ ಭಾಗದ ಕಾವೇರಿ ನದಿ ತೀರದಿಂದ ಪಟ್ಟಣದ ಸ್ನಾನದ ಘಟ್ಟ ಸೇರಿದಂತೆ ಕಾವೇರಿ ನದಿ ತೀರ ಪ್ರದೇಶಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅವಲೋಕಿಸಿದರು. ಕೆಆರ್ಎಸ್ ಜಲಾಶಯದ ಮುಂದಿನ ಗೇಟ್ ಹಾಗೂ ಸೇತುವೆ ಬಳಿಯ ಕೆಳ ಭಾಗದ ಗೇಟ್ ಗಳನ್ನು ಸುರಕ್ಷಿತವಾಗಿ ಬಿಗಿ ಭದ್ರತೆಗೊಳಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಟ್ಟಾರೆ ಕೆಆರ್ಎಸ್ ಗೆ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಸುತ್ತಮುತ್ತಲಿನ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ.
124 ಅಡಿ ಗರಿಷ್ಠ ಸಾರ್ಮರ್ಥ್ಯದ ಜಲಾಶಯದಲ್ಲಿ ಸದ್ಯ 93 ಅಡಿ ನೀರಿನ ಸಂಗ್ರಹವಿದೆ. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 15,000 ಕ್ಯೂಸೆಕ್ ನೀರನ್ನು 10 ದಿನಗಳ ಕಾಲ ಹರಿಸಬೇಕಾಗಿದೆ.












Click it and Unblock the Notifications