ಬಂಡೂರು ಕುರಿಗೆ ಬಂಪರ್ ರೇಟ್, 1.5 ಲಕ್ಷ ರೂ.ಗೆ ಖರೀದಿ
ಮಂಡ್ಯ, ಜೂ26: ಬಂಡೂರು ಕುರಿಗೆ ಬಂಪರ್ ರೇಟ್ ಬಂದಿದೆ. ಬಂಡೂರು ಕುರಿ 1.5 ಲಕ್ಷ ರೂ.ಗಳಿಗೆ ಮಾರಾಟವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸಾಮಾನ್ಯವಾಗಿ 20 ರಿಂದ 40 ಸಾವಿರ ರೂ.ಗಳಿಗೆ ಕುರಿಗಳು ಮಾರಾಟವಾಗುವುದೇ ಹೆಚ್ಚು. ಆದರೆ ಬಂಡೂರು ಕುರಿಗೆ ಇನ್ನೂ ಬೇಡಿಕೆ ಇದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.
ಮಂಡ್ಯದ ಮಳವಳ್ಳಿ ತಾಲೂಕಿನಲ್ಲಿ ಸರ್ಕಾರದ ಬಂಡೂರು ಕುರಿ ಸಾಕಾಣಿಕೆ ಕೇಂದ್ರವಿದೆ. ಈ ಕುರಿಗಳನ್ನು ಮಂಡ್ಯದ ಮುಬಾರಕ್ ಬಾಬು ಎಂಬುವರು 1.5 ಲಕ್ಷ ರೂ. ನೀಡಿ ಖರೀದಿ ಮಾಡಿದ್ದಾರೆ. ಈ ಕೇಂದ್ರದಲ್ಲಿ ಕುರಿ ಮರಿಗಳನ್ನು ಬೆಳೆಸಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಕುರಿ ಸಾಕಾಣಿಕೆ ಕೇಂದ್ರದಲ್ಲಿ ಕೆಜಿಗೆ ದರವನ್ನು ನಿಗದಿ ಮಾಡಲಾಗಿದೆ.
ಕತ್ತಿನಲ್ಲಿದ್ದ ಕೊಳ್ಳುಮಾಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಾ, ಹುಲ್ಲು ತಿಂದು ಬಾಯಿ ಚಪ್ಪರಿಸುವ ಬಂಡೂರು ಕುರಿಗಳ ಚೆಂದವನ್ನು ವರ್ಣಿಸುವುದು ಕಷ್ಟ. ಈ ತಳಿಯ ಕುರಿ ಏಕಕಾಲಕ್ಕೆ ಮೂರು ಮರಿಗಳನ್ನು ಹಾಕುತ್ತದೆ. ಒಂದೇ ವರ್ಷದಲ್ಲಿ 80 ಕೆಜಿ ವರೆಗೆ ತೂಕ ಬರುತ್ತದೆ. ಇದಕ್ಕೆ 3 ಲಕ್ಷದವರೆಗೂ ಬೆಲೆ ಇದೆ.

1.5 ಲಕ್ಷ ರೂ. ನೀಡಿ ಖರೀದಿಸಿದ ಮಂಡ್ಯದ ಮುಬಾರಕ್
ಕಳೆದ ಒಂದೂವರೆ ವರ್ಷದ ಹಿಂದೆ ನಗರದ ಕ್ಯಾತುಂಗೆರೆಯ ರೈತ ಶರತ್ ಎಂಬುವರು ಕುರಿ ಸಾಕಾಣಿಕೆ ಕೇಂದ್ರದಿಂದ 20 ಸಾವಿರ ರೂ.ಗಳಿಗೆ ಕುರಿ ಮರಿಗಳನ್ನು ಖರೀದಿಸಿ ಉತ್ತಮ ರೀತಿಯಲ್ಲಿ ಸಾಕಾಣಿಕೆ ಮಾಡಿದ್ದರು. ಇದರಿಂದಾಗಿ ಕುರಿಗಳು ಸಹ ಮಜಬೂತಾಗಿ ಬೆಳೆದಿವೆ. ಈಗ ಅವುಗಳಿಗೆ ಭಾರೀ ಬೇಡಿಕೆ ಬಂದಿದೆ. ಈ ಕುರಿಗಳನ್ನು ಮಂಡ್ಯದ ಮುಬಾರಕ್ ಬಾಬು ಎಂಬುವರು 1.5 ಲಕ್ಷ ರೂ. ನೀಡಿ ಖರೀದಿ ಮಾಡಿದ್ದಾರೆ.
ಈ ಬೆಲೆ ಹಲವರ ಹುಬ್ಬೇರುವಂತೆ ಮಾಡಿದ್ದು ಸತ್ಯ. ಕುರಿ ಸಾಕಾಣಿಕೆಯಿಂದಲೂ ಹೆಚ್ಚು ಲಾಭ ಗಳಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಇಂತಹ ಆಡು, ಕುರಿಗಳ ಪೈಕಿ ಪ್ರದೇಶಗಳಿಗೆ ಅನುಗುಣವಾಗಿ ಹಲವಾರು ತಳಿ ವೈವಿಧ್ಯಗಳು ಕಂಡು ಬರುತ್ತವೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದ ಕುರಿ ತಳಿಯಿಂದಲೇ ಪ್ರಸಿದ್ಧಿ.

ನೋಡುಗರ ಗಮನ ಸೆಳೆಯುತ್ತಿರುವ ಬಂಡೂರು ಕುರಿ
ಮಂಡಿಯಲ್ಲಿ ದಟ್ಟ ಕೂದಲು, ಉದ್ದನೆಯ ಮತ್ತು ಅಗಲ ಶರೀರ, ಕುಳ್ಳನೆ ದೇಹ ಹೊಂದಿರುವ ಬಿಳಿ ಬಣ್ಣದ ಕುರಿ ನೋಡುಗರ ಗಮನ ಸೆಳೆಯುತ್ತವೆ. ಮುದ್ದಾದ ಈ ಬಂಡೂರು ಕುರಿಗಳ ಆಕರ್ಷಣೆಗೆ ಮನಸೋತು, ಬಳಿ ತೆರಳಿ ಬೆಲೆ ವಿಚಾರಿಸಿದವರು ಮಾತ್ರ ಹುಬ್ಬೇರಿಸದೇ ಇರುವುದಿಲ್ಲ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಂಡೂರು ಈ ಕುರಿಯ ಮೂಲ. ಅಳಿವಿನ ಅಂಚಿನಲ್ಲಿರುವ ಈ ತಳಿಯನ್ನು ಜತನದಿಂದ ಕಾಪಾಡುತ್ತಿರುವವರು ಮಳವಳ್ಳಿಯ ಕ್ಯಾತುಂಗೆರೆಯ ರೈತ ಶರತ್. ಈ ತಳಿಯ ಏಕೈಕ ಕುರಿ ಸಂವರ್ಧನ ಕೇಂದ್ರವನ್ನು ಇವರು ನಡೆಸುತ್ತಿದ್ದಾರೆ.
"ಬಂಡೂರು ಕುರಿಯ ದುಬಾರಿ ಬೆಲೆಗೆ ಕಾರಣ ರುಚಿಯಾದ ಮಾಂಸ. ಸಾಮಾನ್ಯವಾಗಿ ಎಲ್ಲಾ ಕುರಿಗಳಲ್ಲಿ ಕೊಬ್ಬು ಮಾಂಸದಿಂದ ಪ್ರತ್ಯೇಕವಾಗಿರುತ್ತದೆ. ಆದರೆ, ಬಂಡೂರು ಕುರಿಯಲ್ಲಿ ಮಾಂಸದ ನಡುವಿನಲ್ಲಿಯೇ ತೆಳುವಾದ ಕೊಬ್ಬಿನ ಎಳೆ ಇರುತ್ತದೆ. ಇದೇ ಮಾಂಸದ ರುಚಿಗೆ ಮುಖ್ಯ ಕಾರಣ" ಎನ್ನುತ್ತಾರೆ ರೈತ ಶರತ್.

ವಿದೇಶಗಳಲ್ಲಿ ಕುರಿಯ ಹಾಲಿಗೆ ಉತ್ತಮ ಬೇಡಿಕೆ ಇದೆ
"ಬಂಡೂರು ಕುರಿ ವಂಶಾವಳಿ ಕಾಪಾಡುವುದು ನಮ್ಮ ಆದ್ಯತೆ, ಸ್ಥಳೀಯ ರೈತರಿಂದ ಮಾತ್ರ ಕುರಿಗಳನ್ನು ಖರೀದಿಸುತ್ತೇವೆ. ಸಾಕಷ್ಟು ವಿಚಾರಿಸಿ, ಶುದ್ಧ ಬಂಡೂರು ತಳಿಯ ಕುರಿ ಎಂಬುದು ಖಾತ್ರಿಯಾದ ನಂತರವೇ ವ್ಯಾಪಾರ ಕುದುರಿಸುತ್ತಾರೆ. 15 ಕೆಜಿ ತೂಕದ ಶುದ್ಧ ತಳಿಯ ಕಪನಿ ಮರಿಯೊಂದಕ್ಕೆ 1.7 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ ಉದಾಹರಣೆ ಇದೆ" ಎನ್ನುತ್ತಾರೆ ಶರತ್.
"ನಮ್ಮ ದೇಶದಲ್ಲಿ ಕುರಿಗಳ ಸಾಕಣೆ ಮಾಂಸದ ಉದ್ದೇಶಕ್ಕೆ ಮಾತ್ರ ಸೀಮಿತವಾಗಿದೆ. ಕುರಿ ಹಾಲಿನ ಬಳಕೆ ಕಡಿಮೆ ಇರುವುದರಿಂದ ಬೇಡಿಕೆಯೂ ಇಲ್ಲ. ವಿದೇಶಗಳಲ್ಲಿ ಕುರಿಯ ಹಾಲಿಗೆ ಉತ್ತಮ ಬೇಡಿಕೆ ಇದೆ. ದೇಶದಲ್ಲಿ ಹೆಚ್ಚು ಹಾಲು ಉತ್ಪಾದನೆಯಾದರೆ ರಫ್ತು ಮಾಡಲು ಸುಲಭವಾಗುತ್ತದೆ. ರೈತರಿಗೆ ಲಾಭವೂ ಸಿಗುತ್ತದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸುವ ಅಗತ್ಯವೂ ಇದೆ" ಎಂದರು.

ರೈತನಿಗೆ ಹಣವೊದಗಿಸುವ ಬಂಡೂರು ಕುರಿ
ಮಾನವನು ಒಂದೆಡೆ ನೆಲೆನಿಂತು ಆಹಾರ ಉತ್ಪಾದನೆಗಾಗಿ ಕೃಷಿಯತ್ತ ಹೆಜ್ಜೆಯಿಟ್ಟಲ್ಲಿಂದಲೂ ಹಲವಾರು ಪಶುಪಕ್ಷಿಗಳು ಅವನ ಜೊತೆಯಲ್ಲಿ ಸಾಗಿ ಬಂದಿವೆ. ಅವುಗಳನ್ನು ಪಾಲನೆ ಮಾಡುತ್ತ ಹಾಲು, ಹೈನು, ಉಣ್ಣೆ, ಮಾಂಸ, ಮೊಟ್ಟೆ ಚರ್ಮ ಗೊಬ್ಬರ ಮುಂತಾದ ಹತ್ತು ಹಲವು ಉಪಯೋಗಗಳನ್ನು ಮನುಷ್ಯನು ಪಡೆದುಕೊಂಡು ಬಂದಿದ್ದಾನೆ.
ಕೃಷಿಯಿಂದ ಇಂದು ಜಗತ್ತಿಗೆ ಅನ್ನ ಒದಗುತ್ತಿದೆ. ಮಾನವನಷ್ಟೇ ಕೊಡುಗೆಯನ್ನು ಅವನು ಸಾಕಿದ ಪ್ರಾಣಿಗಳು ನೀಡಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ಪ್ರಾಣಿಗಳಲ್ಲಿ ಹಸು, ಕುರಿ, ಆಡು ಮುಖ್ಯವಾದವುಗಳು. ಎತ್ತುಗಳು ಹೊಲ, ಗದ್ದೆಗಳಲ್ಲಿ ದುಡಿಯಲು ಹಾಗೂ ಸಾಗಾಣಿಕೆಗೆ ಬಳಕೆಯಾದವು.
ಕುರಿ ಹಾಗೂ ಆಡುಗಳನ್ನು ಮುಖ್ಯವಾಗಿ ಮಾಂಸ, ಚರ್ಮ, ಉಣ್ಣೆಗಾಗಿ ಸಾಕಲಾಗುತ್ತಿವೆ. ಇತ್ತೀಚಿನ ದಿನಗಳಲ್ಲಂತೂ ಕೃಷಿಕರಿಗೆ ಅದರಲ್ಲೂ ಮಧ್ಯಮ ವರ್ಗದ ರೈತರಿಗೆ ಆಡು ಕುರಿಗಳಂತೂ ನಡೆದಾಡುವ ಎಟಿಎಂಗಳಂತಿದ್ದು ಆರ್ಥಿಕ ಸಂಕಷ್ಟದಲ್ಲಿ ರೈತನಿಗೆ ಹಣವೊದಗಿಸುವ ಆಪದ್ಬಾಂಧವರೆನಿಸಿಕೊಂಡಿವೆ.












Click it and Unblock the Notifications