ಎಸಿಬಿ ಬಲೆಗೆ ಬಿದ್ದ ಮಂಡ್ಯದ ತೋಟಗಾರಿಕೆ ಅಧಿಕಾರಿ
ಮಂಡ್ಯ, ಡಿಸೆಂಬರ್ 21 : ತೋಟಗಾರಿಕೆಗಾಗಿ ಹಸಿರು ಮನೆಯನ್ನು ನಿರ್ಮಿಸುವ ಉದ್ದೇಶ ಹೊಂದಿದ್ದ ಕೃಷಿಕರಿಂದ ಸಹಾಯಧನಕ್ಕಾಗಿ ಲಂಚ ಕೇಳಿ ಸಿಕ್ಕಿಬಿದ್ದ ಸಹಾಯಕ ತೋಟಗಾರಿಕಾ ಅಧಿಕಾರಿ ಮತ್ತು ಇದಕ್ಕೆ ಸಹಾಯ ಮಾಡಿದ ವ್ಯಕ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ, ತಮ್ಮ ಕೃಷಿ ಭೂಮಿಯಲ್ಲಿ ಹಸಿರು ಮನೆ ನಿರ್ಮಾಣ ಮಾಡಿ ತೋಟಗಾರಿಕೆ ಕೈಗೊಳ್ಳಲು ಸರ್ಕಾರವು ಉತ್ತೇಜನ ನೀಡುವ ಸಲುವಾಗಿ, ಹಸಿರು ಮನೆ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚದ ಶೇ.90ರಷ್ಟು ಸಹಾಯಧನವನ್ನು (ಸಬ್ಸಿಡಿ) ನೀಡುತ್ತದೆ.
ಮಂಡ್ಯ ಜಿಲ್ಲೆಯಲ್ಲಿನ ಕೃಷಿಕರೊಬ್ಬರು ತಮ್ಮ ಕೃಷಿ ಭೂಮಿಯಲ್ಲಿ ತೋಟಗಾರಿಕೆ ಮಾಡಲು ಹಸಿರು ಮನೆಯನ್ನು ನಿರ್ಮಾಣ ಮಾಡಲು ಉದ್ದೇಶಿಸಿ, ಹಸಿರು ಮನೆಯನ್ನು ನಿರ್ಮಾಣ ಮಾಡಲು, ಸಹಾಯಧನವನ್ನು ಮಂಜೂರು ಮಾಡುವಂತೆ ಕೋರಿ, ಇದಕ್ಕೆ ತಗುಲಬಹುದಾದ ಅಂದಾಜು ವೆಚ್ಚದ ಪಟ್ಟಿಯನ್ನು ಸಂಬಂಧಪಟ್ಟ ತೋಟಗಾರಿಕಾ ಇಲಾಖೆ ಕಛೇರಿಗೆ ಸಲ್ಲಿಸಿದ್ದರು.[ಲಂಚ ಸ್ವೀಕಾರ, ಭೂ ದಾಖಲೆಗಳ ಉಪನಿರ್ದೇಶಕ ಎಸಿಬಿ ಬಲೆಗೆ]

ಆದರೆ, ಮಂಡ್ಯದ ಸಹಾಯಕ ತೋಟಗಾರಿಕಾ ಅಧಿಕಾರಿಯಾದ ಸಂಪತ್ ಕುಮಾರ್ ಹಸಿರು ಮನೆಯನ್ನು ನಿರ್ಮಾಣ ಮಾಡಲು ಸರ್ಕಾರದಿಂದ ನೀಡುವ ಸಹಾಯಧನವನ್ನು ಮಂಜೂರು ಮಾಡಲು ರೂ.2,30,000/- ಗಳ ಲಂಚದ ಹಣವನ್ನು ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು. ಈ ಬಗ್ಗೆ ದೂರುದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದರು.
ದೂರುದಾರರು ನೀಡಿದ ದೂರಿನನ್ವಯ ಭ್ರಷ್ಟ ಸಂಪತ್ ಅವರನ್ನು ಬಲೆಗೆ ಕೆಡವಲು ಹೊಂಚು ಹಾಕಲಾಗಿತ್ತು. ಜಗದೀಶ್ ಎಂಬ ಖಾಸಗಿ ವ್ಯಕ್ತಿಯ ಮುಖಾಂತರ 74,000 ರು.ಗಳ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಸಂಪತ್ ಕುಮಾರ್ ಹಾಗೂ ಜಗದೀಶ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಇಬ್ಬರೂ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.











Click it and Unblock the Notifications