20 ವರ್ಷಗಳ ನಂತರ ಜೂನ್ನಲ್ಲಿ 100ರ ಗಡಿ ದಾಟಿದ ಕೆಆರ್ಎಸ್
ಮಂಡ್ಯ, ಜೂನ್ 18 : ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 101.90 ಅಡಿಗೆ ಏರಿಕೆಯಾಗಿದೆ. 20 ವರ್ಷಗಳ ಬಳಿಕ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿಯೇ ನೀರಿನ ಮಟ್ಟ ನೂರು ಅಡಿ ದಾಟಿದೆ.
ಏಪ್ರಿಲ್ ತಿಂಗಳಿನಲ್ಲಿ ನೀರಿನ ಮಟ್ಟ 73 ಅಡಿಗೆ ಕುಸಿದಿತ್ತು. ಆದ್ದರಿಂದ, ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು. ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ನೀರನ್ನು ಬಳಸಲಾಗುತ್ತಿತ್ತು.
ಕಳೆದ ಒಂದು ವಾರದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಆದ್ದರಿಂದ, ಜಲಾಶಯಕ್ಕೆ 23.55 ಅಡಿ ನೀರು ಹರಿದುಬಂದಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 67.86 ಅಡಿ ನೀರಿನ ಸಂಗ್ರವಿತ್ತು. ಈ ವರ್ಷ 101.90 ಅಡಿ ನೀರಿನ ಸಂಗ್ರಹವಿದೆ.

'20 ವರ್ಷಗಳ ಹಿಂದೆ ಜೂನ್ ತಿಂಗಳಿನಲ್ಲಿ ಕೆಆರ್ಎಸ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಈ ವರ್ಷ ಜೂನ್ ತಿಂಗಳಿನಲ್ಲಿ 100 ಅಡಿ ಗಡಿ ದಾಟಿದೆ' ಎಂದು ರೈತ ಸಂಘದ ಮುಖಂಡ ಹನಿಯಂಬಾಡಿ ನಾಗರಾಜ್ ಹೇಳಿದ್ದಾರೆ.
ಕೆಆರ್ಎಸ್ ಜಲಾಶಯದಲ್ಲಿ 18/6/2018ರಂದು 101.90 ಅಡಿ ನೀರಿನ ಸಂಗ್ರಹವಿದೆ. 11,297 ಕ್ಯೂಸೆಕ್ ನೀರಿನ ಒಳಹರಿವು ಇದೆ. 369 ಕ್ಯುಸೆಕ್ ಒಳಹರಿವು ಇದೆ.
ಕೆಆರ್ಎಸ್ ಜಲಾಶಯದ ನೀರನ್ನು ಮಂಡ್ಯ ಭಾಗದ ರೈತರು ಕೃಷಿಗಾಗಿ ಅವಲಂಬಿಸಿದ್ದಾರೆ. ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕೆಆರ್ಎಸ್ ಆಧಾರವಾಗಿದೆ.
ಈ ಬಾರಿ ಕಾವೇರಿ ಒಡಲು ಜೂನ್ ಅಂತ್ಯದ ವೇಳೆಗೆ ಭರ್ತಿಯಾಗುವ ನಿರೀಕ್ಷೆ ಇದೆ. ಡ್ಯಾಂ ತುಂಬುತ್ತಿದ್ದಂತೆ ಮುಖ್ಯಮಂತ್ರಿಗಳು ಬಾಗಿನ ನೀಡುವುದು ಸಂಪ್ರದಾಯ. ಜಲಾಶಯ ಭರ್ತಿಯಾದರೆ ರೈತರಿಗೆ ಮತ್ತು ಕುಡಿಯುವ ನೀರಿಗಾಗಿ ಕಾವೇರಿಯನ್ನು ಅವಲಂಬಿಸಿರುವ ಜನರಿಗೂ ಸಂತಸ.












Click it and Unblock the Notifications