ಮಂಡ್ಯದ ನಾಗಮಂಗಲ ಬಳಿ ಭೀಕರ ಅಪಘಾತ ಎಂಟು ಸಾವು
ಮಂಡ್ಯ, ನವೆಂಬರ್ 22: ಮಂಡ್ಯದ ನಾಗಮಂಗಲ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ನಾಗಮಂಗಲ ತಾಲ್ಲೂಕಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ರಾಮದೇವನಹಳ್ಳಿ ಬಳಿ ತಡ ರಾತ್ರಿ ಟಾಟಾ ಸುಮೋ ಹಾಗೂ ಗೂಡ್ಸ್ ಟೆಂಪೊ ನಡುವೆ ನೇರಾ-ನೇರಾ ಡಿಕ್ಕಿ ಸಂಭವಿಸಿದ್ದು, ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಗುರುವಾರ ರಾತ್ರಿ ನಾಗಮಂಗಲದಿಂದ ಬೆಳ್ಳೂರು ಕಡೆಗೆ ಸಂಚರಿಸುತ್ತಿದ್ದ ಟಾಟಾ ಸುಮೋಗೆ ಬೆಳ್ಳೂರಿನಿಂದ ನಾಗಮಂಗಲ ಕಡೆಗೆ ಸಂಚರಿಸುತ್ತಿದ್ದ ಗೂಡ್ಸ್ 407 ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಮುಂದೆ ಚಲಿಸುತ್ತಿದ್ದ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿದೆ ಎನ್ನಲಾಗಿದೆ.

ಘಟನೆಯಲ್ಲಿ ಗಾಯಗೊಂಡಿದ್ದ ಒಂಬತ್ತು ಮಂದಿಯನ್ನು ಆದಿಚಿಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಇಬ್ಬರು ಅಸುನೀಗಿದ್ದು, ಉಳಿದ ಏಳರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಮೃತಪಟ್ಟವರನ್ನು ಬಾಕರ್ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್ (50), ತಾಹೀರ್ ಬಿನ್ ಸುಲ್ತಾನ್ ಷರೀಫ್(30), ನೌಷದ್ ಬಿನ್ ಮಕ್ಬೂಲ್ ಪಾಷ(45), ಹಸೀನ್ ತಾಜ್ ಕೋಂ ಖಲೀಂ(50), ಮೆಹಬೂಬ್ ಜಾನ್ ಬಿನ್ ದಸ್ತರ್ ಖಾನ್(50), ಮಕ್ಸೂದ್ ಬಿನ್ ಮಹಮ್ಮದ್(25), ಸಾಯದಾ(35) ಮತ್ತು ಅಕ್ಬರ್ ಆಲಿ(40) ಎಂದು ಗುರುತಿಸಲಾಗಿದೆ .
ಭೀಕರ ರಸ್ತೆ ಅಪಘಾತದಿಂದಾಗಿ ಹೆದ್ದಾರಿಯ ವಾಹನ ಸಂಚಾರಕ್ಕೆಅಡ್ಡಿಯುಂಟಾಗಿತ್ತು. ಘಟನೆಯಲ್ಲಿ ಜಖಂಗೊಂಡಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿದ ಪೊಲೀಸರು ಇತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಜಿಲ್ಲಾ ಎಸ್ಪಿ ಪರಶುರಾಮ್, ಡಿವೈಎಸ್ ಪಿ ವಿಶ್ವನಾಥ್ ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications