ಹೋಮ, ಪೂಜೆಯಿಂದ ಮಂಡ್ಯ ಫಲಿತಾಂಶ ಬದಲಾಗಲ್ಲ: ಅಭಿಷೇಕ್
Recommended Video
ಮಂಡ್ಯ, ಮೇ 13 : 'ಜನರು ಈಗಾಗಲೇ ತೀರ್ಮಾನ ಮಾಡಿಯಾಗಿದೆ. ಹೋಮ, ಪೂಜೆ ಮಾಡಿಸಿದರೆ ಯಾವುದೂ ಬದಲಾಗುವುದಿಲ್ಲ' ಎಂದು ದಿ.ಅಂಬರೀಶ್ ಪುತ್ರ ಅಭಿಷೇಕ್ ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಮಂಡ್ಯ ತಾಲೂಕಿನ ಹನಿಯಂಬಾಡಿಯಲ್ಲಿ ಸೋಮವಾರ ಗೃಹ ಪ್ರವೇಶ ಕಾರ್ಯಕ್ರಮವೊಂದರಲ್ಲಿ ಅಭಿಷೇಕ್ ಪಾಲ್ಗೊಂಡಿದ್ದರು. '10 ದಿನದಿಂದ ಮಂಡ್ಯಕ್ಕೆ ಬಂದಿರಲಿಲ್ಲ. ಜನರು ಪ್ರೀತಿಯಿಂದ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಅದಕ್ಕಾಗಿ ಬಂದಿದ್ದೇನೆ' ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶದ ಬಗ್ಗೆ ಮಾತನಾಡಿದ ಅಭಿಷೇಕ್, 'ಹೋಮ, ಪೂಜೆ ಮಾಡಿದರೆ ಯಾವುದೂ ಬದಲಾಗುವುದಿಲ್ಲ. ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಎಷ್ಟು ಸಮೀಕ್ಷೆ ಮಾಡಿಸಿದರೂ ಫಲಿತಾಂಶ ಬದಲಾಗುವುದಿಲ್ಲ' ಎಂದು ಪರೋಕ್ಷ ಟಾಂಗ್ ನೀಡಿದರು.
ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ..

ಇದು ವಿಶೇಷ ತಿಂಗಳು
'ಈ ತಿಂಗಳು ಅಂಬಿ ಕುಟುಂಬಕ್ಕೆ ವಿಶೇಷ ತಿಂಗಳಾಗಿದ್ದು ಮೇ 23ರಂದು ಅಮ್ಮನ ಫಲಿತಾಂಶ ಬರುತ್ತದೆ. ಮೇ 24ರಂದು ಅಮ್ಮನ ಚಿತ್ರ ಬಿಡುಗಡೆಯಾಗಲಿದೆ. ಮೇ 29ಕ್ಕೆ ಅಂತ ಚಿತ್ರ ಮರು ಬಿಡುಗಡೆಯಾಗಲಿದೆ. ಮೇ 29 ಅಪ್ಪನ ಹುಟ್ಟುಹಬ್ಬ 31ಕ್ಕೆ ಅಮರ್ ಚಿತ್ರ ಬಿಡುಗಡೆಯಾಗಲಿದೆ' ಎಂದು ಅಭಿಷೇಕ್ ಹೇಳಿದರು.

ನಮ್ಮನ್ನು ಪ್ರೀತಿಯಿಂದ ಕರೆಯುತ್ತಾರೆ
'ಕಾಫಿ, ಟೀ ಕುಡಿಯೋಕೆ ಮಂಡ್ಯಕ್ಕೆ ಬರಬೇಕಾ?' ಎಂಬ ಹೇಳಿಕೆಗೆ ಟಾಂಗ್ ಕೊಟ್ಟ ಅಭಿಷೇಕ್, 'ನಮ್ಮನ್ನು ಪ್ರೀತಿಯಿಂದ ಕರೆಯುತ್ತಾರೆ. ಅವರ ಪ್ರೀತಿಗಾಗಿ ಬರುತ್ತೇವೆ. ಪಾಪ ಕೆಲವರನ್ನು ಕರೆಯುವುದಿಲ್ಲವೇನೋ, ಅದಕ್ಕೆ ಅವರು ಬರುವುದಿಲ್ಲ' ಎಂದರು.

ಚಿತ್ರಕ್ಕೆ ಆಲ್ ದಿ ಬೆಸ್ಟ್
'ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಸಿನಿಮಾ ಮಾಡುವ ವಿಚಾರ ಕೇಳಿದ್ದೇನೆ. ಆ ಸಿನಿಮಾಗೆ ಗುಡ್ ಲಕ್. ಮೇ 23ಕ್ಕೆ ಫಲಿತಾಂಶ ಗೊತ್ತಾಗುತ್ತೆ. ನಾವು ನಮ್ಮ ಗೆಲುವು ಅಂತಾರೆ. ಈಗಾಗಲೇ ಫಲಿತಾಂಶ ಮತಯಂತ್ರದಲ್ಲಿದೆ' ಎಂದು ಅಭಿಷೇಕ್ ಹೇಳಿದರು.

ಮಂಡ್ಯದಲ್ಲೇ ಇರುತ್ತೇವೆ
'ಮಂಡ್ಯದಲ್ಲಿಯೇ ನಾವು ಇರುತ್ತೇವೆ. ಸೋಲು-ಗೆಲುವು ಮುಖ್ಯವಲ್ಲ. ಮಂಡ್ಯ ಜನರು ನಮ್ಮ ಕೈ ಹಿಡಿದಿದ್ದಾರೆ. ಅವರ ಕೈ ಬಿಡುವ ಪ್ರಶ್ನೆ ಇಲ್ಲ. ನಾನು ಮದ್ದೂರು ಹಿರೋ ಅಲ್ಲ, ಸದ್ಯಕ್ಕೆ ಸಿನಿಮಾ ಹಿರೋ. ರಾಜಕೀಯದಲ್ಲಿ ಯಾರೂ ಹಿರೋ ಇಲ್ಲ, ಜನಗಳೇ ಹಿರೋ' ಎಂದು ಹೇಳಿದರು.












Click it and Unblock the Notifications