ಕೆಎಂ ದೊಡ್ಡಿಯಲ್ಲಿ ನಿರ್ಮಾಣಗೊಂಡಿಲ್ಲ ಹುತಾತ್ಮ ಯೋಧ ಗುರು ಸ್ಮಾರಕ
ಮಂಡ್ಯ, ಫೆಬ್ರವರಿ 15: ಪುಲ್ವಾಮಾ ದಾಳಿಯ ವರ್ಷದ ಕರಾಳ ನೆನಪಿನಲ್ಲಿ ಇಡೀ ದೇಶ, ಹುತಾತ್ಮರಾದ ಯೋಧರಿಗೆ ಗೌರವ ಸಮರ್ಪಿಸಿದೆ. ಆದರೆ ಅದೇ ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಕೆ.ಎಂ.ದೊಡ್ಡಿಯ ಗುಡಿಗೆರೆ ಕಾಲೊನಿಯ ಎಚ್.ಗುರು ಅವರ ಸಮಾಧಿ ಇನ್ನೂ ನಿರ್ಮಾಣಗೊಂಡಿಲ್ಲ.
2019ರ ಫೆ.16 ರಂದು ಗುರು ಅವರ ಪಾರ್ಥಿವ ಶರೀರವನ್ನು ತಂದು ಸೇನಾ ಗೌರವದೊಂದಿಗೆ ಮಳವಳ್ಳಿ - ಮದ್ದೂರು ರಸ್ತೆಯ ಮೆಳ್ಳಹಳ್ಳಿಯ ಹೊರವಲಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದು, ಅದೇ ಜಾಗದಲ್ಲಿ ಈ ಯೋಧನಿಗೆ ಒಂದು ಸ್ಮಾರಕ ನಿರ್ಮಿಸುವುದಾಗಿ ಆ ಸಂದರ್ಭದಲ್ಲಿ ಸಚಿವರಾಗಿದ್ದ ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದರು. ಸಂಸದೆ ಸುಮಲತಾ ಅಂಬರೀಷ್, ಸ್ಮಾರಕ ನಿರ್ಮಾಣಕ್ಕೆ 20 ಗುಂಟೆ ಜಮೀನು ನೀಡುವುದಾಗಿ ಘೋಷಿಸಿ, ಯೋಧನ ಪತ್ನಿ ಕಲಾವತಿ ಹೆಸರಿಗೆ 20 ಗುಂಟೆ ಜಮೀನನ್ನು ನೋಂದಣಿ ಮಾಡಿಸಿಕೊಟ್ಟಿದ್ದಾರೆ.
ಆದರೆ, ಸಮಾಧಿ ಇರುವ ಸ್ಥಳ ಮಾತ್ರ ಹಿಂದೆ ಇದ್ದಂತೆಯೇ ಇದೆ. ಈ ನಡುವೆ ಯೋಧ ಗುರು ಕುಟುಂಬದ ಪರಿಸ್ಥಿತಿಯೂ ಬದಲಾದಂತೆ ಕಾಣುತ್ತಿಲ್ಲ. ಯೋಧ ಗುರು ಮನೆಯವರಿಗೆ ಎಲ್ಲೆಡೆಯಿಂದಲೂ ನೆರವು ಬಂದ ನಂತರ ಆ ವಿಚಾರವಾಗಿಯೇ ಕುಟುಂಬದಲ್ಲಿ ಕಲಹ ಏರ್ಪಟ್ಟಿತ್ತು. ನೆರವಿನ ಹಣಕ್ಕಾಗಿ ಅತ್ತೆ, ಸೊಸೆ ನಡುವೆ ಜಗಳವಾಗಿತ್ತು. ತಿಂಗಳಾಗುತ್ತಿದ್ದಂತೆ ಪತ್ನಿ ಕಲಾವತಿ ತವರಿನತ್ತ ತೆರಳಿದ್ದರು.

ಗುರು ಮನೆಯವರು ಸಮಾಧಿ ಜಾಗದಲ್ಲಿ ನಿನ್ನೆ ಪುಣ್ಯತಿಥಿ ನಡೆಸಿ ಅನ್ನದಾನ ಏರ್ಪಡಿಸಿದ್ದರು. ಆದರೆ ಇದೀಗ, ಒಂದು ದಿನವೂ ಕಲಾವತಿ, ಯೋಧ ಗುರು ಸಮಾಧಿಗೆ ಬಂದು ಪೂಜೆ ಸಲ್ಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಆರೋಪವನ್ನು ಅಲ್ಲಗಳೆದಿರುವ ಕಲಾವತಿ ಕುಟುಂಬ, ಗುರು ಅವರನ್ನು ಫೆ.16ಕ್ಕೆ ಅಂತ್ಯಸಂಸ್ಕಾರ ಮಾಡಲಾಗಿದ್ದು, ಅದೇ ಒಂದು ವರ್ಷ ಸರಿಯಾಗಿ ಭಾನುವಾರ ಸಮಾಧಿ ಸ್ಥಳದಲ್ಲೇ ಪುಣ್ಯಸ್ಮರಣೆ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ಕನಕಪುರ ತಾಲೂಕಿನ ಸಾಸಲಪುರ ಗ್ರಾಮದಲ್ಲಿ ಕಲಾವತಿ ತಾಯಿ ಜಯಮ್ಮ ಸ್ಪಷ್ಟಪಡಿಸಿದರು. ಆದರೆ ಈ ಕಾರ್ಯಕ್ಕೆ ಗುರು ಕುಟುಂಬದವರು ಬರುವುದಿಲ್ಲ ಎಂದೂ ಮಾಹಿತಿ ನೀಡಿದ್ದಾರೆ.












Click it and Unblock the Notifications