ಮಂಡ್ಯ: ವಿಷ ಆಹಾರ ಸೇವಿಸಿ ಸತ್ತವಾ ಜಾನುವಾರುಗಳು?
ಮಂಡ್ಯ, ಜನವರಿ. 16 : ವಿಷಯುಕ್ತ ಆಹಾರ ಸೇವಿಸಿದ್ದರಿಂದ ನಾಲ್ಕು ಜಾನುವಾರು ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಜಾನುವಾರು ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ.
ವಿಷ ಆಹಾರ ಸೇವಿಸಿದ್ದರಿಂದ ಎರಡು ಸೀಮೆ ಹಸು ಹಾಗೂ ಎರಡು ಎತ್ತು ಬಲಿಯಾಗಿವೆ. ಹಾಲುಕೊಡುವ ಹಸು ಮತ್ತು ಹೆಗಲಿಗೆ ಹೆಗಲಾಗಿ ದುಡಿಯುತ್ತಿದ್ದ ಎತ್ತುಗಳನ್ನು ಕಳೆದುಕೊಂಡ ರೈತ ಕರಿಯಪ್ಪ ಅವರು ಮುಂದೆ ಜೀವನ ಹೇಗೆ ಎಂಬ ಚಿಂತೆಗೀಡಾಗಿದ್ದಾರೆ.
ಕರಿಯಪ್ಪ ಅವರು ಹೇಳುವ ಪ್ರಕಾರ ಅವರು ಜಾನುವಾರುಗಳಿಗೆಂದು ಆಹಾರ ತಯಾರಿಸಿಟ್ಟಿದ್ದರಂತೆ. ಬಳಿಕ ತೋಟದಲ್ಲಿ ಕಟ್ಟಿದ್ದ ಜಾನುವಾರುಗಳನ್ನು ಸಂಜೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕುವ ಮುನ್ನ ಮೊದಲೇ ತಯಾರಿಸಿಟ್ಟಿದ್ದ ಆಹಾರವನ್ನು ತಂದು ಜಾನುವಾರುಗಳಿಗೆ ನೀಡಿದ್ದಾರೆ.
ಆಹಾರವನ್ನು ತಿಂದ ಸ್ವಲ್ಪ ಹೊತ್ತಿನಲ್ಲಿ ಜಾನುವಾರುಗಳು ಕುಸಿದು ಬಿದ್ದು ಸಾವನ್ನಪ್ಪಿವೆ. ದಿಢೀರ್ ಆದ ಬೆಳವಣಿಗೆಯಿಂದ ದಿಕ್ಕು ತೋಚದ ಪರಿಸ್ಥಿತಿ ರೈತ ಕರಿಯಪ್ಪ ಅವರದ್ದಾಗಿದೆ.
ತಾವೇ ತಯಾರಿಸಿಟ್ಟಿದ್ದ ಆಹಾರಕ್ಕೆ ಹೇಗೆ ವಿಷ ಬೆರೆಯಿತು ಎಂಬುದು ಅಚ್ಚರಿಯಾಗಿದ್ದು, ಯಾರೋ ತಮಗಾಗದವರು ವಿಷ ಬೆರೆಸಿದ್ದಾರೆ ಎಂದು ಅಳಲು ತೋಡಿಕೊಂಡಿರುವ ಅವರು ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ ಭೇಟಿ ನೀಡಿ ರಾಷ್ಟ್ರೀಯ ವಿಪತ್ತು ನಿಧಿಯಿಂದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಜಾನುವಾರುಗಳನ್ನು ಕಳೆದು ಕೊಂಡಿರುವ ರೈತ ಕರಿಯಪ್ಪ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ಜಾನುವಾರುಗಳ ಸಾವಿಗೆ ಕಾರಣವಾದ ವಿಷ ಪಶುಆಹಾರಕ್ಕೆ ಹೇಗೆ ಬೆರಕೆಯಾಯಿತು ಎಂಬುದು ಪೊಲೀಸರ ತನಿಖೆಯಿಂದಷ್ಟೆ ತಿಳಿಯಬೇಕಿದೆ.