ಕೊಡಗಿನಲ್ಲಿ ಉರುಳಿಗೆ ಸಿಕ್ಕಿ ಮತ್ತೊಂದು ಹುಲಿ ಬಲಿ!
ಮಡಿಕೇರಿ, ಜ.30: ದಕ್ಷಿಣ ಕೊಡಗಿನಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದ್ದು, ನಾಗರಹೊಳೆ ಅಭಯಾರಣ್ಯದಿಂದ ಕಾಫಿ ತೋಟದತ್ತ ನುಗ್ಗುತ್ತಿರುವ ಹುಲಿಗಳು ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ. ಜತೆಗೆ ಕೆಲವು ಬೇಟೆಗಾರರು ಕಾಡುಹಂದಿಗಳಿಗೆ ಹಾಕಿದ ಉರುಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ.
ಇದಕ್ಕೆ ಸಾಕ್ಷಿ ಎಂಬಂತೆ ಶ್ರೀಮಂಗಲ ಬಳಿಯ ಕುಮಟೂರು ಗ್ರಾಮದ ಕಾಫಿ ತೋಟದ ಬಳಿಯ ಕಾಡಿನಲ್ಲಿ ಕಾಡುಹಂದಿಗೆ ಹಾಕಿದ್ದ ಉರುಳಿಗೆ ಸುಮಾರು ಐದು ವರ್ಷದ ಹೆಣ್ಣು ಹುಲಿ ಸಿಲುಕಿ ಸಾವನ್ನಪ್ಪಿದೆ. ಅಲ್ಲಿಗೆ ಕೊಡಗಿನಲ್ಲಿ ತಿಂಗಳೊಳಗೆ ಮೂರು ಹುಲಿಗಳು ಮೃತಪಟ್ಟಂತಾಗಿವೆ.
ಹುಲಿಗಳು ಗ್ರಾಮದಲ್ಲಿ ಆಗಾಗ ಕಾಣಿಸಿಕೊಂಡು, ದನಗಳ ಕೊಟ್ಟಿಗೆಗೆ ದಾಳಿ ಮಾಡುತ್ತಿರುವ ವಿಚಾರ ತಿಳಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಕಾಫಿ ಕೊಯ್ಲು ನಡೆಯುತ್ತಿರುವುದರಿಂದ ಹೆಚ್ಚಿನ ಜನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಹುಲಿಗಳ ಭಯದಿಂದಾಗಿ ಜೀವ ಕೈಯ್ಯಲ್ಲಿ ಹಿಡಿದು ಕೆಲಸ ಮಾಡುವಂತಾಗಿದೆ. ಈ ಹೆಣ್ಣು ಹುಲಿ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ ಸಾಧ್ಯತೆಯಿದೆ. ಇದರ ಕುತ್ತಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಉರುಳಿನ ಗಾಯ ಕಂಡು ಬಂದಿದೆ. ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಕಳೇಬರ ದೊರೆತಿದೆ.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ರಾಷ್ಟ್ರೀಯ ಹುಲಿ ಸಂರಕ್ಷಣಾ ವಿಭಾಗದ ಪ್ರತಿನಿಧಿ ರಾಜ್ ಕುಮಾರ್, ಜಿಲ್ಲಾ ವನ್ಯಜೀವಿ ಉಪ ಸಂರಕ್ಷಣಾಧಿಕಾರಿ ಜಯಾ ಸಿಬ್ಬಂದಿ ತೆರಳಿದ್ದು, ಹುಣಸೂರು ವಿಭಾಗದ ವನ್ಯಜೀವಿ ತಜ್ಞ ಡಾ.ಉಮಾಶಂಕರ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಳೇಬರವನ್ನು ಸುಡಲಾಗಿದೆ.
ಕೆಲ ದಿನಗಳ ಹಿಂದೆ ಕುಮಟೂರಿನ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಈ ಹುಲಿ, ಮತ್ರಂಡ ಶರತ್ ಎಂಬವರ ಕೊಟ್ಟಿಗೆಗೆ ನುಗ್ಗಿ ಹಸುವಿನ ಮೇಲೆ ದಾಳಿ ಮಾಡಿತ್ತು. ಅದರೆ ಹಸು ಪ್ರತಿರೋಧವೊಡ್ಡಿದ್ದರಿಂದ ಹಿಂತಿರುಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಾದರೂ ಎರಡು ದಿನದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಪರಿಶೀಲನೆಗೆ ಬಂದಿದ್ದರು.
ಹುಲಿಗಳ ಸಾವಿಗೆ ಅರಣ್ಯಾಧಿಕಾರಿಗಳೇ ಕಾರಣ ಎಂದು ಆರೋಪಿಸುತ್ತಿರುವ ಸಾರ್ವಜನಿಕರು, ಅರಣ್ಯ ಇಲಾಖೆ ಸಿಬ್ಬಂದಿ ಜನರಿಗೆ ಸ್ಪಂದಿಸದಿರುವುದರಿಂದಲೇ ಘಟನೆಗಳು ನಡೆಯುತ್ತಿವೆ ಎಂದು ದೂರಿದ್ದಾರೆ.