ಹವಾಮಾನ ವೈಪರೀತ್ಯಕ್ಕೆ ನೆಲಕಚ್ಚಿದ ಕೊಡಗಿನ ಕಾಫಿ ಬೆಳೆ
ಮಡಿಕೇರಿ, ಜೂನ್ 28: ಕೊಡಗು ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯ ಕಾಫಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ಸಲದ ಕಾಫಿ ಉತ್ಪಾದನೆಯಲ್ಲಿ ಗಣನೀಯ ಕುಸಿತವಾಗಿದೆ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಾಫಿ ಉದ್ಯಮಕ್ಕೆ ಮತ್ತೊಂದು ಭಾರೀ ಹೊಡೆತ ಬೀಳಲಿದೆ.
ದೇಶದ ಕಾಫಿ ಉತ್ಪಾದನೆಯಲ್ಲಿ ಕೊಡಗು ಜಿಲ್ಲೆ ಹಲವು ವರ್ಷಗಳಿಂದ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹೆಚ್ಚು ಕಾಫಿ ಪ್ಲಾಂಟೇಶನ್ ಪ್ರದೇಶ ಹೊಂದಿರುವ ಚಿಕ್ಕಮಗಳೂರು ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಆದರೆ ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಕಾಫಿ ಉತ್ಪಾದನೆ ಗಣನೀಯವಾಗಿ ಕುಂಠಿತಗೊಂಡಿತ್ತು.
ಜಲಪ್ರಳಯ ಮತ್ತು ಮಳೆಯ ಹೊಡೆತಕ್ಕೆ ಕಾಫಿ ಫಸಲು ಮಾತ್ರವಲ್ಲದೆ ತೋಟಗಳು ಕೂಡ ಭೂಕುಸಿತದಲ್ಲಿ ಕೊಚ್ಚಿಕೊಂಡು ಹೋಗಿ, ಬೆಳೆಗಾರರು ನಿರೀಕ್ಷಿತ ಬೆಲೆ ಇಲ್ಲದೆ, ಅತ್ತ ತೋಟವೂ ಇಲ್ಲದೆ ತಲೆ ಮೇಲೆ ಕೈಹೊತ್ತು ಕೂರುವಂತಾಗಿತ್ತು. ಇದರಿಂದ ಆಘಾತಕ್ಕೊಳಗಾದ ಕಾಫಿ ಕೃಷಿಕರಿಗೆ ಕಡಿಮೆ ಪರಿಹಾರವನ್ನು ಸರ್ಕಾರ ಅತಿ ವಿಳಂಬವಾಗಿ ನೀಡುತ್ತಿದೆ. ಅಲ್ಲದೇ ಪ್ರತಿ ಎರಡು ಹೆಕ್ಟೇರ್ ಗೆ ನೀಡಲಾಗುವ ಪರಿಹಾರದ ಮೊತ್ತ 10 ವರ್ಷ ಮೇಲ್ಪಟ್ಟ ಕಾಫಿ ತೋಟಗಳ ಕನಿಷ್ಠ ನಿರ್ಮಾಣ ವೆಚ್ಚವನ್ನು ಕೂಡ ಭರಿಸಲಾಗದು ಎಂಬುದು ಸರ್ಕಾರಕ್ಕೆ ಮನವರಿಕೆಯಾಗುತ್ತಿಲ್ಲ. ಹೀಗಾಗಿ ಪರಿಹಾರದ ಮೊತ್ತವನ್ನು ಏರಿಕೆ ಮಾಡಬೇಕೆಂಬ ಕೂಗು ಕಾಫಿ ಬೆಳೆಗಾರರದ್ದು.

ಈ ಬಾರಿ ಏಪ್ರಿಲ್ - ಮೇ ತಿಂಗಳಲ್ಲಿ ಕಂಡುಬಂದ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಕಾಫಿ ಉತ್ಪಾದನೆ ಕುಂಠಿತಗೊಂಡಿದೆ. ಕಾಫಿ ಗಿಡದಲ್ಲಿ ಕಾಫಿಯ ಹಣ್ಣು ಸದೃಢವಾಗಬೇಕಾದ ಈ ತಿಂಗಳಲ್ಲಿ ಕಾಫಿ ಕಾಯಿಗಳು ಗಿಡದಲ್ಲಿ ನಿರೀಕ್ಷಿತ ರೀತಿಯಲ್ಲಿ ಬೆಳೆಯಲ್ಲಿಲ್ಲ.
ಭಾರತದಲ್ಲಿ ವರ್ಷಂಪ್ರತಿ ಸರಿಸುಮಾರು 3.50 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಈ ಪೈಕಿ ಶೇ. 75 ಕಾಫಿ ಕರ್ನಾಟಕದಿಂದಲೇ ಭಾರತದ ಕಾಫಿ ಮಾರುಕಟ್ಟೆಗೆ ರವಾನೆಯಾಗುತ್ತದೆ. ಕಾಫಿ ಉತ್ಪಾದನೆ ಕುಸಿತ ಮಾತ್ರವಲ್ಲದೆ ಹತ್ತು ವರ್ಷದಲ್ಲಿ ಬೆಲೆಯೂ ಏರಿಕೆಯಾಗಿಲ್ಲ. ಬೆಳೆಗಾರರಿಗೆ ಗರಿಷ್ಠ ಬೆಲೆ ಬರಲೇ ಇಲ್ಲ. ಆದರೆ ಉತ್ಪಾದನಾ ವೆಚ್ಚದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಗೊಬ್ಬರ, ಕಾರ್ಮಿಕರ ವೇತನ ಸೇರಿದಂತೆ ದುಬಾರಿ ನಿರ್ವಹಣೆಯಿಂದಾಗಿ ಬೆಳೆಗಾರರು ಲಕ್ಷಾಂತರ ರೂಪಾಯಿಗಳ ಸಾಲದಲ್ಲಿ ಮುಳುಗಿದ್ದಾರೆ.












Click it and Unblock the Notifications