ಸುಂಟಿಕೊಪ್ಪ ಪಿಡಿಒಗಳ ಮೇಲೆ ಲಾಠಿ ಚಾರ್ಜ್; ಪೊಲೀಸರಿಗೆ ಖಂಡನೆ
ಮಡಿಕೇರಿ, ಮಾರ್ಚ್ 27: ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಪಿಡಿಒ ಗೂಳಪ್ಪ ಮತ್ತು ಕೊಡಗರಹಳ್ಳಿ ಪಿಡಿಒ ಗಿರೀಶ್ ಎಂಬಿಬ್ಬರು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಕುಶಾಲನಗರ ಡಿವೈಎಸ್ಪಿ ಅವರು ಲಾಠಿ ಬೀಸಿದ್ದು, ಇದಕ್ಕೆ ಪಿಡಿಒಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ತವ್ಯ ಮುಗಿಸಿ ತೆರಳುತ್ತಿರುವುದಾಗಿ ಹೇಳುತ್ತಿದ್ದರೂ ಎಲ್ಲ ನಿಮ್ಮಿಂದಲೇ ಎನ್ನುತ್ತಾ ನಿಂದಿಸಿ ಹಲ್ಲೆ ನಡೆಸಿದ್ದಾರೆ. ತಿರುಗಿ ಮಾತನಾಡಬೇಡಿ ಎಂದು ಗದರಿಸಿದ್ದಾರೆ ಎಂದು ಪಿಡಿಒಗಳು ಆರೋಪಿಸಿದ್ದಾರೆ. ಇದರಲ್ಲಿ ಕೊಡಗರಹಳ್ಳಿ ಪಿಡಿಒ ಅವರು ವಿಕಲ ಚೇತನರಾಗಿದ್ದು, ಅವರ ಮೇಲೂ ಲಾಠಿ ಚಾರ್ಜ್ ನಡೆಸಿರುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ಸೇವೆಯಲ್ಲಿ, ಅದರಲ್ಲೂ ಪ್ರಸ್ತುತ ಪರಿಸ್ಥಿತಿಯಲ್ಲಿ ಮನೆಯವರನ್ನು ಬಿಟ್ಟು ಕೆಲಸ ಮಾಡುತ್ತಿದ್ದೇವೆ. ನಮ್ಮ ಮೇಲೆ ಹಲ್ಲೆ ನಡೆಸಿದರೆ ನಾವು ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ನಾಕೂರು ಶಿರಂಗಾಲ ಗ್ರಾ.ಪಂ.ಪಿಡಿಒ ಈ ಹಲ್ಲೆ ಖಂಡಿಸಿ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ಈ ಕ್ರಮವನ್ನು ಸುಂಟಿಕೊಪ್ಪ ಸುತ್ತಲಿನ ಎಲ್ಲ ಪಿಡಿಒಗಳು ಖಂಡಿಸಿದ್ದಾರೆ.












Click it and Unblock the Notifications