ಮಳೆಕಾಡಿನ ರಕ್ಷಣೆಗೆ ಮುಂದಾದ ಮಡಿಕೇರಿಯ ನರಿಕೊಡವ ರೈಡರ್ಸ್!
ಮಡಿಕೇರಿ, ಆಗಸ್ಟ್ 16: ಕೊಡಗಿನಲ್ಲಿ ಮರಕಾಡು ಕಡಿಮೆಯಾಗುತ್ತಿದೆ ಪರಿಣಾಮ ಮಳೆ ಕಡಿಮೆಯಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಕೆಲವು ಯುವಕರು ಟೀಂ ನರಿ ಕೊಡವ ರೈಡರ್ಸ್ ಗ್ರೂಪ್ ಮಾಡಿಕೊಂಡು ಗಿಡನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಹಲವು ಕಡೆಗಳಲ್ಲಿ ಗಿಡನೆಡುವ ಮೂಲಕ ತಮ್ಮ ಚಟಿವಟಿಕೆಯನ್ನು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳಿದ್ದರೂ ಹೆಚ್ಚಿನ ಸಂಸ್ಥೆಗಳು ಕೇವಲ ಕ್ರೀಡಾಕೂಟ ಇನ್ನಿತರ ಚಟುವಟಿಕೆಗಳಲ್ಲಿ ಮಗ್ನವಾಗಿವೆ. ಆದರೆ ಪರಿಸರ ಕಾಳಜಿ ವಹಿಸುವ ಸಂಘಟನೆಗಳ ಅಗತ್ಯತೆ ಇಲ್ಲಿದೆ. ಹೀಗಾಗಿ ಪರಿಸರ ಕಾಳಜಿ ವಹಿಸುವ ಸಲುವಾಗಿಯೇ ಹುಟ್ಟಿಕೊಂಡ ಗ್ರೂಪ್ ಇದೀಗ ತನ್ನ ಕಾರ್ಯವೈಖರಿಯಿಂದ ಗಮನಸೆಳೆಯುತ್ತಿದೆ.

ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಗ್ರೂಪ್ ತೆರೆದು ತನ್ನ ಗ್ರೂಪ್ ಬಗ್ಗೆ ಕಾಳಜಿ ಮೂಡಿಸುತ್ತಿದ್ದಾರೆ. ಕುಂಚೆಟ್ಟಿರ ಅರುಣ್ ಬೆಳ್ಯಪ್ಪ, ಕೆಚ್ಚಟಿರ ಮದನ್ ಮಾದಯ್ಯ, ಪೆಮ್ಮುಡಿಯಂಡ ಅಭಿಷೇಕ್ ಉತ್ತಪ್ಪ ಸೇರಿದಂತೆ 20 ಸದಸ್ಯರು ಗ್ರೂಪ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಬುಲೇಟ್, ಜಾವ, ಎಜ್ಡಿ ಮೊದಲಾದ ಬೈಕ್ ಗಳಲ್ಲಿ ಕೊಡಗು ಮಾತ್ರವಲ್ಲದೆ, ಬೇರೆ ರಾಜ್ಯಗಳ ಪ್ರವಾಸಿತಾಣಗಳಿಗೆ ತೆರಳಿ ಅಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗ್ರತಿ ಮೂಡಿಸುತ್ತಿದ್ದಾರೆ.
ಮಡಿಕೇರಿ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಇಲಾಖಾ ವತಿಯಿಂದ ಮಾವು, ನೇರಳೆ, ನೆಲ್ಲಿಕಾಯಿ ಗಿಡಗಳನ್ನು ಪಡೆದು ಮಡಿಕೇರಿ ತಾಲೂಕು ಮಕ್ಕಂದೂರಿನ ಪುಟ್ಟ ಹಳ್ಳಿಯಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೆಡುವ ಮೂಲಕ ತಮ್ಮ ಕಾರ್ಯ ಆರಂಭಿಸಿದ್ದಾರೆ.
ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಕೊಡಗಿನ ಪರಿಸರದ ಮೇಲೆ ಹಾನಿಯಾಗುತ್ತಿದ್ದು, ಮರಕಾಡುಗಳು ನಶಿಸುತ್ತಿವೆ. ಗದ್ದೆಗಳು ಕಾಂಕ್ರಿಟ್ ಕಾಡುಗಳಾಗುತ್ತಿವೆ. ಇದು ಮುಂದುವರೆದರೆ ಭಾರೀ ಗಂಡಾಂತರಗಳನ್ನು ಎದುರಿಸುವುದು ನಿಶ್ಚಿತ. ಹೀಗಾಗಿ ಈಗಿನಿಂದಲೇ ಪರಿಸರದತ್ತ ಕಾಳಜಿ ವಹಿಸಿ ಗಿಡಮರಗಳನ್ನು ರಕ್ಷಿಸುವ ಅನಿವಾರ್ಯತೆಯಿದ್ದು ಅದರನ್ನು ನಮ್ಮ ಗ್ರೂಪ್ ಮಾಡುತ್ತಿದೆ ಗ್ರೂಪ್ ನ ಸಂಚಾಲಕ ಅಭಿಷೇಕ್ ಉತ್ತಪ್ಪ ಹೇಳಿದ್ದಾರೆ.












Click it and Unblock the Notifications