ಕಾಡಂಚಿನ ಕಾಫಿ ತೋಟದಿಂದ ನಿಗೂಢವಾಗಿ ಕಣ್ಮರೆಯಾಗಿದ್ದ 2 ವರ್ಷದ ಕಂದಮ್ಮ ಪತ್ತೆಯಾಗಿದ್ದು ಎಲ್ಲಿ?
ಮಡಿಕೇರಿ, ಜನವರಿ 7: ಕೊಡಗಿನಲ್ಲಿ ಈಗಾಗಲೇ ಕಾಫಿ ಕೊಯಿಲು ಶುರುವಾಗಿದೆ. ಕೂಲಿ ಕಾರ್ಮಿಕರ ಅಲಭ್ಯತೆಯಿಂದಾಗಿ ಹೊರಜಿಲ್ಲೆ, ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತಂದು ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಕುಯ್ಯಿಸಲಾಗುತ್ತಿದೆ. ಹಾಗೆಯೇ ವೀರಾಜಪೇಟೆ ತಾಲ್ಲೂಕಿನ ಕೇರಳ ಗಡಿ ಭಾಗ ವೆಸ್ಟ್ ನೆಮ್ಮೆಲೆ ಗ್ರಾಮದ ಪೆಮ್ಮಂಡ ರಾಜ್ ಕುಶಾಲಪ್ಪರವರವರ ತೋಟಕ್ಕೆ, ಜನವರಿ 5ರಂದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಿಂದ 11 ಜನ ಕೂಲಿಕಾರ್ಮಿಕರು ತೋಟದ ಕೆಲಸಕ್ಕೆ ಬಂದಿಳಿದುಕೊಂಡಿದ್ದರು.
ಅದರಲ್ಲಿ, ಕಾರ್ಮಿಕ ನಾಗರಾಜು ಮತ್ತು ಸೀತಾ ದಂಪತಿ ಕೂಡ ಇದ್ದರು. ಅವರ ಒಂದು ವರ್ಷ 9 ತಿಂಗಳು ಪ್ರಾಯದ ಹೆಣ್ಣು ಮಗು ನಿತ್ಯಾಶ್ರೀ ಇನ್ನು ಹಸುಗೂಸು, ಕೊಂಚ ನಡೆಯಲು ಕಲಿತಿತ್ತು. ಎಂದಿನಂತೆ ಭಾನುವಾರ ಕಾಫಿ ಕೊಯ್ಯಲು ಹೋದಾಗ ನಿದ್ರೆಗೆ ಜಾರಿದ ಮಗುವನ್ನು ಎರಡು ಕಾಫಿ ಗಿಡಗಳ ನಡುವೆ ಸೀರೆಯಲ್ಲಿ ಜೋಲಿ ಕಟ್ಟಿ ಮಲಗಿಸಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.

ಜೋಲಿಯಲ್ಲಿ ಮಗುವೇ ಇರಲಿಲ್ಲ!
ಸಂಜೆ ಸುಮಾರು ನಾಲ್ಕು ಗಂಟೆ ಸಮಯಕ್ಕೆ ಬಂದು ಜೋಲಿ ನೋಡಿದಾಗ ಮಗು ಆರಾಮವಾಗಿ ಮಲಗಿತ್ತು. ಸಂಜೆ ಐದಕ್ಕೆ ಕೆಲಸ ಕೈಬಿಟ್ಟಾಗ ಹೋಗಿ ಜೋಲಿ ನೋಡಿದ ತಾಯಿಗೆ ಆಶ್ಚರ್ಯ ಕಾದಿತ್ತು. ಜೋಲಿಯಲ್ಲಿ ಮಗುವೇ ಇರಲಿಲ್ಲ. ಜೋಲಿಯನ್ನು ಭೂಮಿಗೆ ತಾಗುವಂತೆ ಕಟ್ಟಿದ್ದರಿಂದ ಮಗು ಜೋಲಿಯಿಂದ ಇಳಿದು ನಡೆದುಕೊಂಡು ಎಲ್ಲೋ ಹೋಗಿರಬಹುದೆಂದು ತಂದೆ-ತಾಯಿ ಸುತ್ತಮುತ್ತ ಹುಡುಕುವ ಯತ್ನ ಮಾಡಿದ್ದಾರೆ. ಆದರೆ ಅಷ್ಟಾರಲ್ಲಾಗಲೇ ಕತ್ತಲು ಆವರಿಸಿದ್ದರಿಂದ ಇನ್ನು ಹುಡುಕಿ ಪ್ರಯೋಜನವಿಲ್ಲ ಎಂದು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಷ್ಟಾರಲ್ಲಾಗಲೇ ರಾತ್ರಿ ಏಳು ಗಂಟೆಯಾಗಿತ್ತು. ಮಗು ಕಾಣೆಯಾದ ಜಾಗ ನಾಗರಹೊಳೆಯ ಕಾಡಂಚಿಗೆ ಹೊಂದಿಕೊಂಡಿರುವ ಜಾಗ. ಜೊತೆಗೆ ಹುಲಿ, ಚಿರತೆಗಳು ಆಗಾಗ್ಗೆ ಪ್ರತ್ಯಕ್ಷವಾಗುವ ಜಾಗವಾದ್ದರಿಂದ ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿತ್ತು.

ರಾತ್ರಿಯೆಲ್ಲಾ ಅಲೆದರೂ ಸಿಗಲಿಲ್ಲ ಮಗು
ನಂತರ ಅವರು ಕುಟ್ಟ ಪೊಲೀಸ್ ಠಾಣೆಯ ನೆರವನ್ನು ಕೇಳಿದರು. ಜೊತೆಗೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿಯಾದ ಮರಿ ಬಸವಣ್ಣನವರ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಸಹಕರಿಸುವಂತೆ ಶ್ರೀಮಂಗಲ ಪೊಲೀಸರು ಕೇಳಿಕೊಂಡರು. ಅಲ್ಲಿಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ 50 ಜನರ ತಂಡವೊಂದು ಮಗುವನ್ನು ಹುಡುಕುವ ಕಾರ್ಯಾಚರಣೆಗೆ ಇಳಿದಿತ್ತು.
ಕೊರೆಯುವ ಚಳಿ, ಜೊತೆಗೆ ಕಾಡುಪ್ರಾಣಿಗಳ ಭಯ, ಕಗ್ಗತ್ತಲು ಬೇರೆ. ಮೊದಲನೆಯದಾಗಿ, ಕಾಡುಪ್ರಾಣಿಗಳ ಕಣ್ಣಿಗೆ ಮಗು ಬಿದ್ದರೂ ಮಗುವಿನ ಪಕ್ಕ ಬರಬಾರದು ಎಂದು ಒಂದೊಂದು ತುದಿಯಲ್ಲಿ ಇಬ್ಬಿಬ್ಬರು ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ನಿಂತು ಜೋರಾಗಿ ಬೊಬ್ಬೆ ಹಾಕುವುದು, ಬೆಂಕಿ ಹಾಕಿ ಜೋರು ಸದ್ದು ಮಾಡುವುದು ಮಾಡುತ್ತಾ ಸಾಗಿದರಂತೆ. ಒಂದೇ ರೀತಿ ಹುಡುಕಿದರೆ ಸರಿಹೋಗಲಾರದು ಎಂದು ಹೆಣ್ಣು ಮಗುವಾದ್ದರಿಂದ ಯಾರಾದರೂ ಹೊತ್ತೊಯ್ದಿರಬಹುದು ಎನ್ನುವ ಶಂಕೆಯಿಂದಲೂ ಹುಡುಕಾಟ ಆರಂಭಿಸುವ ಎರಡು ಇಲಾಖೆಗಳಿಗೆ ರಾತ್ರಿಯೆಲ್ಲಾ ಕಾಡು ಅಲೆದರೂ ಮಗುವಿನ ಪತ್ತೆಯಾಗಿಲ್ಲ. ಪೋಷಕರಲ್ಲಿ ಭರವಸೆಯೂ ಕಡಿಮೆಯಾಗಿತ್ತು.

250 ಮೀಟರ್ ದೂರದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಮಗು ಪತ್ತೆ
ಮಧ್ಯರಾತ್ರಿ ಕಳೆದರೂ ಮಗು ಪತ್ತೆಯಾಗಲಿಲ್ಲ. ಅದಕ್ಕೆ ಮಗು ಕಾಣೆಯಾದ ಜಾಗದ ಸುತ್ತಮುತ್ತ ಏನಾದರೂ ಇದ್ದರೆ ಕಾಡುಪ್ರಾಣಿಗಳು ಮಗುವನ್ನು ಹೊತ್ತೊಯ್ಯದಿರಲಿ ಎಂದು, ಅಲ್ಲಲ್ಲಿ ಬೆಂಕಿಹಾಕಿಕೊಂಡು, ರಾತ್ರಿಯಿಡೀ ಕಾವಲು ಕಾದರು.
ಬೆಳಗಾದರೂ ಮಗುವಿನ ಸುಳಿವಿಲ್ಲ. ಆದರೆ, ಛಲ ಬಿಡದ ಕಾರ್ಯಾಚರಣೆ ತಂಡ, ಕಾಫಿ ತೋಟದ ಸಾಲು ಹಿಡಿದು ಎಲ್ಲರೂ ಒಂದೊಂದು ಸಾಲಿನಲ್ಲಿ ಹುಡುಕುತ್ತಾ ಹೋದರು. ಮಗು ಕಾಣೆಯಾದ ಜಾಗದಿಂದ ಸುಮಾರು 250 ಮೀಟರ್ ದೂರದಲ್ಲಿ ಒಂದು ಎತ್ತರದ ಜಾಗದಲ್ಲಿ ಕಾಫಿಗಿಡದ ಪಕ್ಕ ಮಗು ನಿತ್ರಾಣ ಸ್ಥಿತಿಯಲ್ಲಿ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಕಂಡುಬಂತು.

ಪೊಲೀಸ್, ಅರಣ್ಯ ಇಲಾಖೆಗೆ ಶ್ಲಾಘನೆ
ಕೂಡಲೇ ಮಗುವಿಗೆ ಸ್ಥಳದಲ್ಲೇ ಚಿಕಿತ್ಸೆ ಕೊಡಿಸಿ, ಪೋಷಕರ ಮಡಿಲಿಗೆ ಒಪ್ಪಿಸಿದಾಗ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಅದಾಗಲೇ ಸುದ್ದಿ ಸ್ಥಳೀಯರ ಕಿವಿಗೂ ಮುಟ್ಟಿದ್ದರಿಂದ ಅವರೆಲ್ಲಾ ಸ್ಥಳಕ್ಕೆ ಆಗಮಿಸಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯನ್ನು ಮುಕ್ತ ಕಂಠದಿಂದ ಹೊಗಳಿದರು.
ಚಳಿಗೆ ಮಗುವಿನ ಕೈಕಾಲುಗಳೆಲ್ಲಾ ಮರಗಟ್ಟಿ ಹೋಗಿದ್ದರಿಂದ ಸ್ಥಳದಲ್ಲೇ ಅದಕ್ಕೆ ಶಾಖ ನೀಡಿದರು. ಹೆದರಿ ಹೋಗಿದ್ದ ಪುಟ್ಟ ಕಂದಮ್ಮ ನಿತ್ಯಾಶ್ರೀ, ಅಮ್ಮನ ಮಡಿಲು ಸೇರಿದ್ದರೂ ಅಳುವುದು ಮಾತ್ರ ನಿಂತಿರಲಿಲ್ಲ. ಅಂತೂ ಪ್ರಕರಣ ಸುಖಾಂತ್ಯಗೊಂಡಿತು.












Click it and Unblock the Notifications