ಮಡಿಕೇರಿ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ
ಮಡಿಕೇರಿ, ಡಿಸೆಂಬರ್ 28; ಕಾಡಾನೆ ದಾಳಿಯಿಂದಾಗಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿದ್ದು, ರೈತರು ಕಾಡಾನೆ ದಾಳಿಯಿಂದ ರಕ್ಷಣೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಮಡಿಕೇರಿ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಡಾನೆ ದಾಳಿ ಮಾಡಿದೆ. ಅಪ್ಪಣ್ಣ (47) ವರ್ಷದ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಅಪ್ಪಣ್ಣ ತಮ್ಮ ಮನೆಯಿಂದ ಅನತಿ ದೂರದ ಮನೆಯೊಂದರಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಹೋಗಿದ್ದರು. ಅಲ್ಲಿಂದ ರಾತ್ರಿ 11 ಗಂಟೆಗೆ ಹಿಂತಿರುಗುವಾಗ ಕಾಡಾನೆಯೊಂದು ಏಕಾಏಕಿ ಎದುರಾಗಿದ್ದು, ದಾಳಿ ನಡೆಸಿದೆ. ಅಪ್ಪಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಸೋಮವಾರ ಸ್ಥಳಕ್ಕೆ ಮಡಿಕೇರಿ ವಿಭಾಗದ ಅರಣ್ಯಾಧಿಕಾರಿಗಳು ಭೇಟಿ ನೀಡಲಿದ್ದು, ಪರಿಹಾರ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
ಮೂರು ದಿನಗಳ ಹಿಂದೆ ಕಾಡಾನೆಯೊಂದು ನಾಗರಹೊಳೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಕೊಂದು ಹಾಕಿತ್ತು. ಭಾನುವಾರ ಸೋಮವಾರಪೇಟೆ ಸಮೀಪದ ಹಿರಿಕರ ಎಂಬಲ್ಲಿ ಕಾಡಾನೆಯೊಂದು ಹಾಡ ಹಗಲೇ ಕಾಫಿ ತೋಟದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರ ಮೇಲೆ ದಾಳಿ ಮಾಡಿದ್ದರಿಂದ ಇಬ್ಬರು ಗಾಯಗೊಂಡಿದ್ದರು.
ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರುತಿದ್ದು ರೈತರು ಕಾಡಾನೆ ದಾಳಿಯಿಂದ ರಕ್ಷಣೆ ನೀಡುವಂತೆ ಮತ್ತು ಆನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತಿದ್ದಾರೆ.











Click it and Unblock the Notifications