ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!
ಮಡಿಕೇರಿ, ಜೂನ್ 04; ದುಬಾರೆ ಆನೆ ಶಿಬಿರದಿಂದ ಕಾಡಿಗೆ ಓಡಿ ಹೋಗಿದ್ದ 'ಕುಶ' ಆನೆಯನ್ನು ಪುನಃ ಹಿಡಿದು ತರಲಾಗಿತ್ತು. ಈಗ ಅರಣ್ಯ ಸಚಿವರ ಆದೇಶದಂತೆ ಆನೆಯನ್ನು ವಾಪಸ್ ಅರಣ್ಯಕ್ಕೆ ಕಳಿಸಲಾಗಿದೆ.
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಈ ಕುರಿತು ಮಾಹಿತಿ ನೀಡಿದ್ದಾರೆ. 'ಕುಶ'ನನ್ನು ದುಬಾರೆ ಶಿಬಿರದಿಂದ ಕರೆದೊಯ್ದು ಮೇ 3ರ ಸಂಜೆ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯ 'ಕುಶ' ಬಂಧ ಮುಕ್ತನಾಗಿದ್ದಾನೆ ಎಂದು ಫೇಸ್ ಬುಕ್ ಫೋಸ್ಟ್ ಹಾಕಿದ್ದಾರೆ.
ಅರಣ್ಯ ಇಲಾಖೆಯ ವಶದಲ್ಲಿದ್ದ 'ಕುಶ'ನನ್ನು ಸ್ವತಂತ್ರವಾಗಿ ಅರಣ್ಯದಲ್ಲಿ ಬಿಡಲು ಈ ಹಿಂದೆ ಅಧಿಕಾರಿಗಳಿಗೆ ಸೂಚನೆಯನ್ನು ಸಚವರು ನೀಡಿದ್ದರು. ಅದರಂತೆ ಅಗತ್ಯ ಸಿದ್ಧತೆಗಳನ್ನು ನಡೆಸಿ ಬಿಡುಗಡೆ ಮಾಡಬೇಕಾದ ಪ್ರದೇಶವನ್ನು ಗುರುತಿಸಿ, ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಡಲಾಗಿದೆ.
ದುಬಾರೆ ಶಿಬಿರದಲ್ಲಿದ್ದ 'ಕುಶ' ಆನೆ 2019ರಲ್ಲಿ ಶಿಬಿರದಿಂದ ಚೈನು ಮತ್ತು ಬೇಡಿಯನ್ನು ತುಂಡರಿಸಿ ಕಾಡಿಗೆ ಓಡಿ ಹೋಗಿತ್ತು. ಸುಮಾರು 17 ಆನೆಗಳ ಗುಂಪಿನೊಂದಿಗೆ ಸೇರಿಕೊಂಡಿತ್ತು. ಇಲಾಖೆಯವರು ಸೆರೆಹಿಡಿಯಲು ನಡೆಸಿದ ಎಲ್ಲಾ ಪ್ರಯತ್ನ ವಿಫಲವಾಗಿತ್ತು.

ಶಿಬಿರಕ್ಕೆ ವಾಪಸ್ ಆಗದ 'ಕುಶ'
ದುಬಾರೆ ಶಿಬಿರದಿಂದ ಕಾಡಿಗೆ ಓಡಿದ್ದ 'ಕುಶ'ನಿಗೆ ಹೆಣ್ಣಾನೆಗಳ ಗೆಳೆತನ ಶುರುವಾಗಿತ್ತು. ಬೆದೆಗೆ ಬಂದಾಗ ಕಾಡಿನೊಳಗಿನ ಆನೆಗಳ ಜತೆ ಸೇರುವುದು ಸಹಜವಾಗಿದ್ದು, ಹತ್ತಾರು ದಿನಗಳು ಕಳೆದ ನಂತರ ಶಿಬಿರಕ್ಕೆ ಆನೆ ವಾಪಸ್ ಬರುತ್ತಿದ್ದವು. ಆದರೆ 'ಕುಶ' ಶಿಬಿರಕ್ಕೆ ವಾಪಸ್ ಆಗಲೇ ಇಲ್ಲ.

ಅರಣ್ಯ ಇಲಾಖೆ ಸೆರೆ ಹಿಡಿದಿತ್ತು
'ಕುಶ' ಇದ್ದ ಗುಂಪಿನಲ್ಲಿ ಮರಿ ಆನೆಗಳು ಇದ್ದವು. ಆದ್ದರಿಂದ ಅದನ್ನು ಸೆರೆ ಹಿಡಿಯುವುದು ಸಹ ಸವಾಲಾಗಿತ್ತು. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅರಣ್ಯ ಇಲಾಖೆ 'ಕುಶ'ನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಸೆರೆ ಹಿಡಿದ ಬಳಿಕ ದುಬಾರೆ ಶಿಬಿರಕ್ಕೆ ಅದನ್ನು ವಾಪಸ್ ಕರೆತರಲಾಗಿತ್ತು. ಕಾಡಿನಲ್ಲಿದ್ದರೂ ಆನೆ ಆರೋಗ್ಯವಾಗಿತ್ತು.

ರೇಡಿಯೋ ಕಾಲರ್ ಅಳವಡಿಕೆ
'ಕುಶ' ಆನೆಯನ್ನು ಸೆರೆ ಹಿಡಿದು ಇಲಾಖೆಯಿಂದ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಅಧಿಕಾರಿಗಳ ಸಭೆ ನಡೆಸಿ, ಆನೆಯನ್ನು ವಾಪಸ್ ಕಾಡಿಗೆ ಬಿಡುವಂತೆ ಸೂಚನೆ ನೀಡಿದ್ದರು. ಈಗ ರೇಡಿಯೋ ಕಾಲರ್ ಅಳವಡಿಕೆ ಮಾಡಿ ಕಾಡಿಗೆ ಬಿಡಲಾಗಿದೆ.
Recommended Video

2018ರಲ್ಲಿ ಸೆರೆ ಸಿಕ್ಕಿದ್ದ 'ಕುಶ'
2018ರಲ್ಲಿ ಚೆಟ್ಟಳ್ಳಿ ಕಂಡಕೆರೆ ವ್ಯಾಪ್ತಿಯಲ್ಲಿ ಆನೆ ಜನರಿಗೆ ಕಿರುಕುಳ ನೀಡುತ್ತಿತ್ತು ಎಂಬ ಆರೋಪವಿತ್ತು. ಆದ್ದರಿಂದ ಅನುಮತಿ ಪಡೆದು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಬಳಿಕ ಅದಕ್ಕೆ 'ಕುಶ' ಎಂದು ನಾಮಕರಣ ಮಾಡಿ ದುಬಾರೆ ಆನೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿತ್ತು.












Click it and Unblock the Notifications