KSRTC: ಮಡಿಕೇರಿಯಿಂದ 5 ಹೊಸ ಅಶ್ವಮೇಧ ಬಸ್ ಸೇವೆ, ವಿವರ
ಮಡಿಕೇರಿ, ಅಕ್ಟೋಬರ್ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಕೆಎ-12 ನಂಬರ್ನ ಅಶ್ವಮೇಧ 5 ನೂತನ ಬಸ್ಗಳಿಗೆ ಚಾಲನೆಯನ್ನು ನೀಡಿದೆ. 2024ರ ಫೆಬ್ರವರಿಯಲ್ಲಿ ಅಂತರ ನಗರದ ನಡುವೆ ಸಂಪರ್ಕ ಕಲ್ಪಿಸಲು ಕೆಎಸ್ಆರ್ಟಿಸಿ 'ಅಶ್ವಮೇಧ' ಹೆಸರಿನ ನೂತನ ಬಸ್ ಸೇವೆಗಳಿಗೆ ಚಾಲನೆಯನ್ನು ನೀಡಿದೆ. ಈಗಾಗಲೇ ರಾಜ್ಯದ ವಿವಿಧ ಭಾಗದಲ್ಲಿ ಈ ಮಾದರಿ ಬಸ್ಗಳು ಸಂಚಾರ ನಡೆಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ.
ಕೆಎಸ್ಆರ್ಟಿಸಿಯ 5 ಅಶ್ವಮೇಧ ನೂತನ ಬಸ್ಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನಗರದ ಕೆಎಸ್ಆರ್ಟಿಸಿ ಘಟಕದಲ್ಲಿ ಚಾಲನೆ ನೀಡಿದರು. ಶಾಸಕರು ಮಾತನಾಡಿ, "ದಸರಾ ವಿಶೇಷ ಸಂದರ್ಭವಾಗಿ ಅಂತರ್ ಜಿಲ್ಲೆಗೆ ಬಸ್ ಅನ್ನು ಓಡಿಸಲಾಗುತ್ತದೆ. ದಸರಾ ನಂತರವೂ ಕೊಡಗು ಜಿಲ್ಲೆಯಲ್ಲಿ ಬಸ್ ಸಂಚಾರ ನಡೆಸಲಿದೆ" ಎಂದು ಹೇಳಿದರು.

ಸಚಿವರಿಂದ ಸ್ಪಂದನೆ: ಸೆಪ್ಟೆಂಬರ್ ತಿಂಗಳಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೊಡಗು ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಆಗ ಶಾಸಕ ಡಾ. ಮಂತರ್ ಗೌಡ ಸಚಿವರಿಗೆ ಕೊಡಗು ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಪ್ರತ್ಯೇಕ ವಿಭಾಗೀಯ ಘಟಕ ಆರಂಭವಾಗಬೇಕು. ಬಸ್ಗಳಿಗೆ ಕೆಎ-12 ನೋಂದಣಿ ಆಗಬೇಕು ಎಂದು ಮನವಿ ಮಾಡಿದ್ದರು. ಸಚಿವರು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು.
ಕೆಎಸ್ಆರ್ಟಿಸಿ ಬಸ್ಗಳಿಗೆ ಕೊಡಗು ಜಿಲ್ಲೆಯ ಪ್ರಾದೇಶಿಕ ಸಾರಿಗೆ ನೋಂದಣಿ ಸಂಖ್ಯೆ ಕೆಎ-12 ಆಗಬೇಕು ಎಂಬ ಮನವಿಗೆ ಸಚಿವರು ಸ್ಪಂದಿಸಿದ್ದು, ಈಗ ಕಾರ್ಯ ರೂಪಕ್ಕೆ ಬಂದಿದೆ. ಮಡಿಕೇರಿ ಪ್ರಾದೇಶಿಕ ಸಾರಿಗೆಗೆ ಸಂಬಂಧಿಸಿದಂತೆ 5 ಬಸ್ಗಳಿಗೂ ಕೆಎ-12 ಎಫ್ 01, 02, 03, 04, 05 ನೋಂದಣಿ ಸಂಖ್ಯೆ ಸಿಕ್ಕಿದೆ.
ಕೊಡಗು ಜಿಲ್ಲೆಯಲ್ಲಿ ಶೀಘ್ರವೇ ಹೊಸ-ಹೊಸ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಜಿಲ್ಲಾಡಳಿತ ಹೊಸದಾದ 64 ಮಾರ್ಗವನ್ನು ಗುರುತಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ಗಳು ಸಂಚರಿಸಲಿವೆ. 'ಶಕ್ತಿ' ಯೋಜನೆ ಮಹಿಳೆಯರಿಗೂ ಅನುಕೂಲವಾಗಲಿದೆ ಎಂದು ಶಾಸಕರು ಹೇಳಿದ್ದಾರೆ.
ಬೆಂಗಳೂರಿಗೆ ಅಶ್ವಮೇಧ ಬಸ್: ಕೊಡಗು ಜಿಲ್ಲೆಯಲ್ಲಿ ಮಡಿಕೇರಿ-ಸೋಮವಾರಪೇಟೆ ಮಾರ್ಗದಲ್ಲಿ ಬೆಂಗಳೂರಿಗೆ ಅಶ್ವಮೇಧ ಬಸ್ಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಪ್ರಯಾಣಿಕರ ಬೇಡಿಕೆಯಂತೆ ಈ ಬಸ್ ಸೇವೆಗಳನ್ನು ಆರಂಭಿಸಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಮಡಿಕೇರಿ-ಸೋಮವಾರಪೇಟೆ-ಅರಕಲಗೋಡು-ಚನ್ನರಾಯಪಟ್ಟಣ ಮಾರ್ಗದಲ್ಲಿ ಪ್ರತಿ ದಿನ ಬೆಳಗ್ಗೆ 10.15ಕ್ಕೆ ಬಸ್ ಹೊರಟು ಸಂಜೆ 4.45ಕ್ಕೆ ಬೆಂಗಳೂರು ತಲುಪಲಿದೆ. ಮಡಿಕೇರಿ-ಸೋಮವಾರಪೇಟೆ ಮಾರ್ಗದಲ್ಲಿ ಬೆಂಗಳೂರಿಗೆ ತೆರಳಲು ಜನರು ಬಹುದಿನದಿಂದ ಬಸ್ ಸಂಪರ್ಕಕ್ಕಾಗಿ ಬೇಡಿಕೆ ಇಟ್ಟಿದ್ದರು.
ಮಡಿಕೇರಿ ಕೆಎಸ್ಆರ್ಟಿಸಿ ಘಟಕದಿಂದ ಸೋಮವಾರಪೇಟೆ ಮಾರ್ಗದಲ್ಲಿ 3 ಬಸ್ಗಳು, ಕುಶಾಲನಗರದಿಂದ 2 ಬಸ್ಗಳು ಸಂಚರಿಸುತ್ತಿವೆ. ಸದ್ಯ ಮಡಿಕೇರಿ ಕೆಎಸ್ಆರ್ಟಿಸಿ ಘಟಕದಲ್ಲಿ 97 ಬಸ್ಗಳು ವಿವಿಧ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ.
ಕರ್ನಾಟಕ ಸರ್ಕಾರ ಪಾಯಿಂಟು ಟು ಪಾಯಿಂಟ್ ಕನೆಕ್ಟ್ ಎಂಬ ಹೆಸರಿನಲ್ಲಿ 2024ರ ಫೆಬ್ರವರಿ 5ರಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)ಯ 'ಅಶ್ವಮೇಧ' ಕ್ಲಾಸಿಕ್ ಬಸ್ಗಳಿಗೆ ಚಾಲನೆ ನೀಡಿತ್ತು. ಬಸ್ ಸೇವೆಗೆ ಚಾಲನೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ 'ಶಕ್ತಿ' ಯೋಜನೆಯು ರಾಜ್ಯ ಸಾರಿಗೆ ಸಂಸ್ಥೆಗೆ ಬಲ ತುಂಬಿದ್ದು, ಸಂಸ್ಥೆಯು ಈಗ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದ್ದರು.












Click it and Unblock the Notifications