ಸಿದ್ದು ಹೇಳಿಕೆ ಕೊಡಗು ಕಾಂಗ್ರೆಸ್ಗೆ ಮಾರಕವಾಗುತ್ತಾ?
ಮಡಿಕೇರಿ, ಡಿಸೆಂಬರ್ 23: ಕೊಡವರು ಗೋಮಾಂಸ ಭಕ್ಷಿಸುತ್ತಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಕೊಡಗಿನಲ್ಲಿ ಆಕ್ರೋಶವನ್ನು ಸೃಷ್ಟಿ ಮಾಡಿದೆ. ಈಗಷ್ಟೆ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ ಕೊಡಗು ಜಿಲ್ಲೆಯಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದೆ ಎನ್ನುವಾಗಲೇ, ಈ ವಿವಾದಾತ್ಮಕ ಹೇಳಿಕೆ ಪಕ್ಷದ ಮೇಲೆ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ.
ಈಗಾಗಲೇ ಸಿದ್ದರಾಮಯ್ಯ ಅವರ ವಿರುದ್ಧ ಪಕ್ಷಾತೀತ ಪ್ರತಿಭಟನೆಗಳು ನಡೆದಿದ್ದು, ಕ್ಷಮೆಯಾಚಿಸುವಂತೆ ಹಲವು ಮುಖಂಡರು ಆಗ್ರಹಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರಿಗೆ ಇದೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೊಡಗಿನವರಿಗೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹಿಂದಿನಿಂದಲೂ ಇದೆ.
ಸಿದ್ದರಾಮಯ್ಯ ಅವರ ಮೇಲೆ ಆಕ್ರೋಶ
ಈ ಹಿಂದೆ ಟಿಪ್ಪು ಜಯಂತಿ ಆಚರಣೆ ಮಾಡಿದ ಸಂದರ್ಭ ಕೊಡಗಿನಲ್ಲಿ ಗಲಾಟೆಗಳು ನಡೆದು ಪ್ರಾಣ ಹಾನಿಯೂ ಸಂಭವಿಸಿತ್ತು. ಅವತ್ತಿನಿಂದಲೂ ಸಿದ್ದರಾಮಯ್ಯ ಅವರನ್ನು ಕೆಲವರು ವಿರೋಧಿಸುತ್ತಲೇ ಬರುತ್ತಿದ್ದಾರೆ. ಶಾಂತಿಯುತ ಕೊಡಗಿನಲ್ಲಿ ಸಿದ್ದರಾಮಯ್ಯ ಅವರು ಕೋಮುದಳ್ಳುರಿಗೆ ಕಾರಣರಾದರು ಎಂಬ ಕಪ್ಪು ಚುಕ್ಕೆ ಈಗಲೂ ಅವರ ಮೇಲಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಕಳೆದ ಎರಡು ದಶಕಗಳಿಂದಲೂ ಕಾಂಗ್ರೆಸ್ಗೆ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಜಿಲ್ಲೆಯಲ್ಲಿ ತಳಮಟ್ಟದಿಂದಲೂ ಬಿಜೆಪಿ ಗಟ್ಟಿಯಾಗಿ ಉಳಿದಿದೆ.
ರಾಜಾಸೀಟ್, ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ
ತೆರೆಮರೆಗೆ ಸರಿದ ಹಿರಿಯ ನಾಯಕರು
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಭದ್ರವಾಗಿ ನೆಲೆಯೂರಬೇಕಾದರೆ ತಳಮಟ್ಟದಿಂದಲೇ ಸಂಘಟನೆಯಾಗುವ ಅಗತ್ಯವಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿರುವ ಕಾಂಗ್ರೆಸ್ ನಾಯಕರ ಪೈಕಿ ಗ್ರಾಮೀಣ ಮಟ್ಟಕ್ಕಿಳಿದು, ಸಂಘಟಿಸುವ ಶಕ್ತಿ ಹೊಂದಿದ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಸಂಘಟನಾ ಚಾತುರ್ಯತೆ ಹೊಂದಿದ್ದ ಹಿರಿಯ ನಾಯಕರು ತೆರೆಮರೆಗೆ ಸರಿದಿದ್ದಾರೆ. ಈಗಿರುವ ನಾಯಕರಲ್ಲಿ ಸಂಘಟನಾ ಶಕ್ತಿಯ ಕೊರತೆಯಿದೆ. ಜತೆಗೆ ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳು ಪಕ್ಷದ ಸಂಘಟನೆಗೆ ಮಾರಕವಾಗಿದೆ.
ಸಂಘಟನೆ ಕೊರತೆ ಎದುರಿಸುತ್ತಿರುವ ಡಿಸಿಸಿ
ಈಗ ಪಕ್ಷದ ಸಾರಥ್ಯ ಹೊಂದಿರುವ ನಾಯಕರ ಪೈಕಿ ಹೆಚ್ಚಿನವರಿಗೆ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವ ಚತುರತೆ ಇಲ್ಲದ ಕಾರಣದಿಂದಾಗಿ ಪಕ್ಷ ಸೊರಗುತ್ತಿದೆ ಎಂಬ ಆರೋಪವಿದೆ. ಕೆಪಿಸಿಸಿ ಸಾರಥ್ಯವನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡ ಬಳಿಕ ಸಂಘಟನೆ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಯಾಗುತ್ತದೆ. ಈ ವೇಳೆ ಕೊಡಗಿನಲ್ಲಿ ಪಕ್ಷದೊಳಗಿರುವ ನಾಯಕರ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುತ್ತಾರೆ ಎಂದು ಕಾರ್ಯಕರ್ತರು ನಂಬಿದ್ದರು. ಆದರೆ ಕೊಡಗಿನಲ್ಲಿ ಯಾವುದೇ ಬದಲಾವಣೆಗಳು ಆದಂತೆ ಕಾಣುತ್ತಿಲ್ಲ. ಹೀಗಾಗಿ ನಾಯಕರ ನಡುವೆ ಗೊಂದಲಗಳು ಮುಂದುವರೆದಿವೆ.
Recommended Video
ಪಕ್ಷದ ಮೇಲೆ ಪರಿಣಾಮ ಬೀರುತ್ತಾ?
ಈ ನಡುವೆ ಗ್ರಾ.ಪಂ ಚುನಾವಣೆಯ ಮೊದಲ ಹಂತವೂ ಮುಗಿದಿದೆ. ಈ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಚುನಾಣೆಯ ಫಲಿತಾಂಶ ಬಂದ ಬಳಿಕ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಆಗಿದೆಯಾ ಎಂಬುದು ಗೊತ್ತಾಗಲಿದೆ. ಆದರೆ ಅದಕ್ಕೂ ಮೊದಲು ಸಿದ್ದರಾಮಯ್ಯ ಅವರ ಹೇಳಿಕೆ ಜಿಲ್ಲೆಯಲ್ಲಿ ಗೊಂದಲವನ್ನು ಸೃಷ್ಟಿಸಿದ್ದು, ಪಕ್ಷದ ಮುಖಂಡರಿಗೆ ಮುಜುಗರ ತಂದಿದ್ದಂತು ಸತ್ಯ.