ಕೊಡಗಿನ ಜನರ ಜೊತೆ ಸರ್ಕಾರವಿದೆ : ಕುಮಾರಸ್ವಾಮಿ
ಮಡಿಕೇರಿ, ಆಗಸ್ಟ್ 19 : ಭಾರಿ ಮಳೆ, ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಭೇಟಿ ನೀಡಿದ್ದರು. ಭಾನುವಾರ ಸಹ ಅವರು ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಶನಿವಾರ ಸಂಜೆ ಅವರು ಮಡಿಕೇರಿಯ ಮೈತ್ರಿ ಭವನದ ಗಂಜಿ ಕೇಂದ್ರದಲ್ಲಿರುವ ನಿರಾಶ್ರಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ನಿರಾಶ್ರಿತರು ಹೊಸ ಜೀವನ ನಡೆಸಲು ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದ್ದು, ಯಾರೂ ಸಹ ಆತಂಕಪಡಬಾರದು' ಎಂದರು.
'ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿಕೊಡಲಾಗುವುದು, ನಿರಾಶ್ರಿತರಿಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ನೀಡಲಿದ್ದು, ಸರ್ಕಾರವೇ ಜವಾಬ್ದಾರಿ ತೆಗೆದುಕೊಳ್ಳಲಿದೆ' ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.

'ನಿರಾಶ್ರಿತರಿಗೆ ಗಂಜಿ ಕೇಂದ್ರದಲ್ಲಿ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಿರಾಶ್ರಿತರ ನೋವು ಸರ್ಕಾರಕ್ಕೆ ಅರ್ಥವಾಗುತ್ತಿದೆ. ತುಂಬಾ ಕಷ್ಟದಲ್ಲಿರುವ ನಿರಾಶ್ರಿತರೆಲ್ಲರಿಗೂ ಬದುಕು ಕಟ್ಟಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗುವುದು' ಎಂದು ಹೇಳಿದರು.
'ಕೊಡಗು ಜಿಲ್ಲೆಗೆ ಎರಡು ಮೂರು ದಿನದಲ್ಲಿ ಮತ್ತೆ ಆಗಮಿಸಿ ಒಂದು ದಿನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೊಡಗಿನ ಜನತೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು' ಎಂದರು.
'ಪ್ರಕೃತಿಯ ಅವಕೃಪೆಗೆ ತುತ್ತಾದವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಸರ್ಕಾರ ನಿಮ್ಮ ಜೊತೆಗಿದೆ. ನಿರಾಶ್ರಿತರು ನೊಂದುಕೊಳ್ಳಬೇಡಿ. ಧೈರ್ಯವಾಗಿರಿ' ಎಂದರು. ಈ ಸಂಧರ್ಭದಲ್ಲಿ ಮಕ್ಕಂದೂರು ಗ್ರಾಮದ ನಿರಾಶ್ರಿತರೊಬ್ಬರು ಜೀವನ ನಡೆಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.
ಮುಕ್ಕೋಡ್ಲು, ಮಕ್ಕಂದೂರು, 2ನೇ ಮೊಣ್ಣಂಗೇರಿ, ಜೋಡುಪಾಲ ಮತ್ತಿತರ ಕಡೆಗಳಲ್ಲಿ ಭೂಕುಸಿತ ಉಂಟಾಗಿ ಸಾಕಷ್ಟು ನಷ್ಟ ಉಂಟಾಗಿದೆ. ನಿರಾಶ್ರಿತರಿಗೆ ಹೊಸ ಜೀವನ ಮಾಡಲು ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಹಾಗೂ ಸರ್ಕಾರದ ಕಾರ್ಯದರ್ಶಿಗಳಾದ ಸೆಲ್ವ ಕುಮಾರ್, ಗಂಗಾರಾಮ್ ಬಡೇರಿಯಾ, ಪೊಲೀಸ್ ಉನ್ನತ ಅಧಿಕಾರಿಗಳಾದ ಕಮಲ್ ಪಂಥ್, ಭಾಸ್ಕರ್ ರಾವ್ ಇತರರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜೊತೆಗಿದ್ದರು.












Click it and Unblock the Notifications